×
Ad

ಕಾರಂತ ಸಂಸ್ಮರಣೆ, ಕಾರಂತ ಕಲಾಕುಟೀರ ಉದ್ಘಾಟನೆ

Update: 2016-10-11 18:48 IST

 ಸಾಲಿಗ್ರಾಮ, ಅ.11: ಕಾಲವನ್ನು ಮೀರಿ ಯೋಚಿಸುವ ವ್ಯಕ್ತಿತ್ವ ಕಾರಂತರದ್ದು. ಕಾರಂತರ ಕೃತಿಗಳು ರಂಜನೀಯವಾಗಿರಲಿಲ್ಲ. ಆದರೆ ಜೀವನ ಮತ್ತು ಸಮಾಜ ದ ಎಲ್ಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ತಮ್ಮ ಕೃತಿಗಳ ಮೂಲಕ ಹೊರಹಾಕಿದ್ದರು. ಅವರ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವಾಗಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದ್ದಾರೆ.

ಸಾಲಿಗ್ರಾಮದ ಡಾ.ಶಿವರಾಮ ಕಾರಂತ ರಂಗರಥ ‘ಮಾನಸ’ದಲ್ಲಿ ರವಿವಾರ ಡಾ.ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ವತಿಯಿಂದ ಡಾ.ಕಾರಂತರ 114ನೇ ಜನ್ಮ ಜಯಂತಿಯ ಪ್ರಯುಕ್ತ ನಡೆದ ಡಾ.ಕಾರಂತ ಸಂಸ್ಮರಣೆ, ವಿಶೇಷ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರಂತರ ಸಂಸ್ಮರಣೆ ಮಾಡಿದ ಪತ್ರಕರ್ತ ಹಾಗೂ ಲೇಖಕ ಚ.ಹ. ರಘುನಾಥ್, ಸಮಾಜದಲ್ಲಿ ಇಂದು ನಾವು ಕೃತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆಯೇ ಹೊರತು ವ್ಯಕ್ತಿಗೆ ಅಲ್ಲ. ಸರಕಾರವಾಗಲೀ, ಯಾವುದೇ ಪರಿಷತ್ ಆಗಲೀ ಕಾರಂತರನ್ನು ಗುರುತಿಸದೇ ಇರುವುದರಿಂದ ಕಾರಂತರು ಕೇವಲ ಕರಾವಳಿ ಜಿಲ್ಲೆಗೆ ಸೀಮಿತವಾಗಿದ್ದಾರೆ ಎಂದು ಅವರು ವಿಷಾಧ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ಮಣೂರಿನ ಉದ್ಯಮಿ ಎಂ.ಸುಬ್ರಾಯ ಆಚಾರ್ಯರನ್ನು ಸನ್ಮಾನಿಸಲಾಯಿತು. ಲೇಖಕ ಹಾಗೂ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯಾಯ ಉಪಸ್ಥಿತರಿದ್ದರು.

ಡಾ.ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಬಿ.ಮಾಲಿನಿ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಘುರಾಮ್ ಬೈಕಾಡಿ ಅತಿಥಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ರಂಗನಟ ಕಾರಂತರು ವಿವಿಧ ಪಾತ್ರಗಳಲ್ಲಿ ಮಿಂಚಿದ ವಿವಿಧ ಭಂಗಿಗಳ ಛಾಯಾಚಿತ್ರಗಳು ಮತ್ತು ಕಾರಂತರ ಕುಂಚದಿಂದ ಅರಳಿದ ಆಯ್ದ ವರ್ಣರಂಜಿತ ಛಾಯಾಚಿತ್ರಗಳ ಪ್ರದರ್ಶನ ಶಾಲೆ ‘ಕಾರಂತ ಕಲಾ ಕುಟೀರ’ವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News