ಮೇಲ್ತೆನೆಯಿಂದ ‘ಬ್ಯಾರಿ ಸಾಹಿತ್ಯ ಕೂಟ’

Update: 2016-10-11 18:20 GMT

ಕೊಣಾಜೆ, ಅ.11: ಬ್ಯಾರಿ ಭಾಷೆಯ ಉಳಿವು, ಬೆಳವಣಿಗೆ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ನಡೆಯಬೇಕಿದೆ. ಬ್ಯಾರಿ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಲ್ಲರೂ ಒಟ್ಟಾಗಿ ಭಾಷೆಯ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಅಕ್ಷರ ಸಂತ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ‘ಮೇಲ್ತೆನೆ’ (ಬ್ಯಾರಿ ಬರಹಗಾರರು-ಕಲಾವಿದರ ಕೂಟ) ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಹರೇಕಳ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ‘ಬ್ಯಾರಿ ಸಾಹಿತ್ಯ ಕೂಟ’ ಉದ್ಘಾಟಿಸಿ ಅವರು ಮಾತನಾಡಿದರು. ಮೆಲ್ತೆನೆ ಅಧ್ಯಕ್ಷ ಆಲಿಕುಂಞಿ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷೆ ಓದುವ, ಬ್ಯಾರಿ ಕ್ವಿಝ್ ಸ್ಪರ್ಧೆಗಳು ನಡೆದವು. ಕವಿ, ಗಾಯಕ ಬಶೀರ್ ಅಹ್ಮದ್ ಕಿನ್ಯ ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಕವಿಗಳಾದ ಎಚ್.ಆರ್.ಅರ್ಕುಳ, ನಿಝಾಮ್ ಕೊಳಂಬೆ, ಹಸನ್ ಸಫ್ವಾನ್ ಬಡಗನ್ನೂರು, ನಾಸಿರ್ ಸಜಿಪ, ಎಂ.ಎಂ.ಆತೂರು, ಸಲೀಂ ಮಾಣಿ, ಖ-ಶಿಖ ಕಲಂದರ್ ಬಜ್ಪೆ, ಎಡ್ವರ್ಡ್ ಡಿಸೋಜ, ಲುಕ್ಕು ಅಡ್ಯಾರ್ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಹಂಝ ಮಲಾರ್, ಇಸ್ಮತ್ ಪಜೀರ್ ಹಾಗೂ ಇಸ್ಮಾಯೀಲ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.
 ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು, ಕಾಲೇಜಿನ ಉಪನ್ಯಾಸಕ ಅಝೀಝ್ ಉಪಸ್ಥಿತರಿದ್ದರು.
ಮೇಲ್ತೆನೆ ಪದಾಧಿಕಾರಿ ಗಳಾದ ಅನ್ಸಾರ್ ಇನೋಳಿ ಹಾಗೂ ಬಶೀರ್ ಕಲ್ಕಟ್ಟ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕೈಸ್ ಅಬ್ಬಾಸ್ ಕಿರಾಅತ್ ಓದಿದರು. ಪ್ರಧಾನ ಕಾರ್ಯದರ್ಶಿ ಇಸ್ಮತ್ ಪಜೀರ್ ಬ್ಯಾರಿ ಕ್ವಿಝ್ ಸ್ಪರ್ಧೆ ನಡೆಸಿಕೊಟ್ಟರು. ಆರೀಫ್ ಕಲ್ಕಟ್ಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News