ಕಳವಾದ ಬೈಕ್ ಸಹಿತ ಆರೋಪಿ ಪೊಲೀಸ್ ವಶಕ್ಕೆ

Update: 2016-10-14 15:39 GMT

ಬಂಟ್ವಾಳ, ಅ.14: ಕೆಲವು ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ಕಳವಾದ ಬೈಕೊಂದನ್ನು ಬಂಟ್ವಾಳ ನಗರ ಪೊಲೀಸರು ಆರೋಪಿ ಸಹಿತ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರು ನಿವಾಸಿ ಅಶೋಕ್ ಎಂಬವರ ಪುತ್ರ ಪ್ರಶಾಂತ್ ಯಾನೆ ಪರೋಶ್ ರಾಮ(24) ಬಂಧಿತ ಆರೋಪಿ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ನಿವಾಸಿ ಶಶಿಕುಮಾರ್ ಎಂಬವರು ಬಿ.ಸಿ.ರೋಡಿನ ಮಲಪ್ಪುರಂ ಫೈನಾನ್ಸ್ ಎದುರಿನ ಮೇಲ್ಸೇತುವೆಯ ಅಡಿಯಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ ತನ್ನ ಪಲ್ಸರ್ ಬೈಕನ್ನು ಇರಿಸಿ ತೆರಳಿದ್ದರು. ಸಂಜೆ ವೇಳೆಗೆ ವಾಪಸ್ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇಂದು ಸಂಜೆ ಬಂಟ್ವಾಳ ಬೈಪಾಸ್‌ನ ಭಂಡಾರಿಬೆಟ್ಟು ಎಂಬಲ್ಲಿ ನಗರ ಠಾಣೆಯ ಪೊಲೀಸರು ವಾಹನಗಳ ತಪಾಸಣೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಬೈಕ್ ನಲ್ಲಿ ಬಂದ ಆರೋಪಿ ಪ್ರಶಾಂತ್‌ನನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಆತನಲ್ಲಿ ಬೈಕ್‌ಗೆ ಸಂಬಂಧಿಸಿದ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಆತನನ್ನು ಕಂಡು ಸಂಶಯಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯಿಬಿಟ್ಟಿದ್ದಾನೆ.
ಕೂಡಲೇ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ನೇತೃತ್ವದಲ್ಲಿ, ಬಂಟ್ವಾಳ ನಗರ ಠಾಣೆಯ ಎಸ್ಸೈ ನಂದಕುಮಾರ್, ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪ, ಎಎಸ್ಸೈ ಸಂಜೀವ, ಹೆಡ್ ಕಾನ್‌ಸ್ಟೇಬಲ್ ಸುರೇಶ್, ಸದಾಶಿವ, ಅದ್ರಾಮ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News