ಪುಣೆಯ ದೈತ್ಯ ಟೆಲಿಸ್ಕೋಪ್ಗೆ ಮಾರ್ಸ್ ಲ್ಯಾಂಡರ್ನಿಂದ ಕೊನೆಯ ಸಂಜ್ಞೆ
ಹೊಸದಿಲ್ಲಿ, ಅ.20: ಪುಣೆಯ ಸಮೀಪದ ಬೃಹತ್ ಭಾರತೀಯ ಟೆಲಿಸ್ಕೋಪ್ ಬ್ಯಾಂಕೊಂದು ಮಂಗಳ ಗ್ರಹದ ಮೇಲೆ ಲ್ಯಾಂಡರೊಂದನ್ನು ಇರಿಸುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಉಪಗ್ರಹದಿಂದ ಕೊನೆಯ ಸಂಜ್ಞೆಯನ್ನು ಸ್ವೀಕರಿಸಿದೆ.
ಮಾರ್ಸ್ ಲ್ಯಾಂಡರ್ ಶಿಯಾಪರೆಲ್ಲಿ, ನಿನ್ನೆ ಸಂಜೆ ಮಂಗಳನ ಮೇಲೆ ಇಳಿದಿದೆ. ಆದರೆ, ಅದು ಘರ್ಷಣೆಯಿಂದ ನಾಶವಾಗಿರಬೇಕು. ಆದುದರಿಂದ ಲ್ಯಾಂಡರ್ ಯಾವುದೇ ಸಂಜ್ಞೆಯನ್ನು ಕಳುಹಿಸುತ್ತಿಲ್ಲವೆಂದು ವಿಜ್ಞಾನಿಗಳು ಭಾವಿಸಿದ್ದಾರೆ.
ಪುಣೆಯ ಉತ್ತರಕ್ಕೆ 80 ಕಿ.ಮೀ. ದೂರದಲ್ಲಿರುವ ಜಯೆಂಟ್ ಮೀಟರ್ ವೇವ್ ರೇಡಿಯೊ ಟೆಲಿಸ್ಕೋಪ್ (ಜಿಎಂಆರ್ಟಿ), ಶಿಯಾಪರೆಲ್ಲಿ ಮಂಗಳನ ಅಂಗಳ ತಲುಪುವ ಸುಮಾರು 2 ನಿಮಿಷ ಮೊದಲಿನ ವರೆಗೆ ಸಂಜ್ಞೆಗಳನ್ನು ಸ್ವೀಕರಿಸುತ್ತಿತೆಂದು ಪುಣೆಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ರೇಡಿಯೊ ಖಭೌತ ಕೇಂದ್ರದ ನಿರ್ದೇಶಕ ಸ್ವರ್ಣ ಘೋಷ್ ತಿಳಿಸಿದರು.
ತಲಾ 45ಮೀ. ವ್ಯಾಸದ 30 ದೊಡ್ಡ ಡಿಶ್ ಆ್ಯಂಟೆನಾಗಳಿರುವ ಜಿಎಂಟಿಗೆ ಸಮೀಪ ಬರುತ್ತಿದ್ದ ಶಿಯಾಪರೆಯಲ್ಲಿಯ ಚಲನೆಯ ಮೇಲೆ ನಿಗಾ ಇರಿಸುವ ಹೊಣೆಯನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ನೀಡಿತ್ತು.
ಭಾರತದ 19 ಟೆಲಿಸ್ಕೋಪ್ಗಳು ಒಟ್ಟಗೆ ಸಂಜ್ಞೆಗಳನ್ನು ಕಲೆ ಹಾಕುವ ಕೆಲಸ ಮಾಡುತ್ತಿದ್ದವು. ಶಿಯಾಪರೆಲ್ಲಿ ಮಂಗಳದ ಮೇಲಿಳಿಯುವ 2 ನಿಮಿಷ ಮುಂಚಿನ ವರೆಗೆ ಟೆಲಿಸ್ಕೋಪ್ಗಳು ಸಂಜ್ಞೆಗಳನ್ನು ಸ್ವೀಕರಿಸಿವೆ. ಆ ಬಳಿಕ ಸಂಪರ್ಕ ಕಡಿದು ಹೋಯಿತೆಂದು ಘೋಷ್ ಹೇಳಿದರು.
ಲ್ಯಾಂಡರ್ ಮಂಗಳನ ಮೇಲೆ ಇಳಿದಿದೆಯೆಂಬುದು ಖಚಿತ. ಅದು ಸರಿಯಾಗಿ ಇಳಿದಿದೆಯೇ, ಬಂಡೆ ಅಥವಾ ಕುಳಿಗೆ ಅಪ್ಪಳಿಸಿದೆಯೇ, ಅಥವಾ ಕೇವಲ ಸಂಪರ್ಕ ಸಾಧಿಸಲು ವಿಫಲವಾಗಿದೆಯೇ ಎಂಬುದು ತನಗೆ ತಿಳಿದಿಲ್ಲವೆಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಶಿಯಾಪರೆಲ್ಲಿಯ ವ್ಯವಸ್ಥಾಪಕ ಥೇರಿ ಬ್ಲಾಂಕರ್ಟ್ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.