ಕಾಸರಗೋಡು: ಹೊಳೆಗೆ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2016-10-20 14:07 GMT
ಕಾಸರಗೋಡು, ಅ.20: ಎರಡು ದಿನಗಳ ಹಿಂದೆ ಕಾಸರಗೋಡು ಕಾಞಂಗಾಡ್ ರಸ್ತೆಯ ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ವ್ಯಕ್ತಿಯ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ.
ಮನ್ನಿಪ್ಪಾಡಿಯ ಭಾಸ್ಕರ (41) ಹೊಳಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಭಾಸ್ಕರ್ ಅ.18ರಂದು ಸಂಜೆ 5:30ರ ಸುಮಾರಿಗೆ ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ್ದರು. ಪ್ರತ್ಯಕ್ಷ ದರ್ಶಿಯೋರ್ವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಶೋಧ ನಡೆಸಿದ್ದರು. ಆದರೆ ಹೊಳೆಗೆ ಹಾರಿದ ವ್ಯಕ್ತಿ ಯಾರೆಂಬ ಬಗ್ಗೆ ತಿಳಿದಿರಲಿಲ್ಲ.
ಮರುದಿನ ಭಾಸ್ಕರ್ ಎಂಬವರು ನಾಪತ್ತೆಯಾಗಿರುವುದಾಗಿ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ಬಂದಿದ್ದು, ಹೊಳಗೆ ಹಾರಿದ ವ್ಯಕ್ತಿ ಇವರೇ ಆಗಿರಬಹುದು ಎಂದು ಶಂಕಿಸಲಾಗಿತ್ತು. ಇದೀಗ ಸಂಬಂಧಿಕರು ಮೃತದೇಹವು ಭಾಸ್ಕರ್ರದ್ದು ಎಂದು ಗುರುತು ಪತ್ತೆಹಚ್ಚಿದ್ದಾರೆ.
ಮೃತ ಭಾಸ್ಕರ್ ಬದಿಯಡ್ಕದ ಗ್ಯಾರೇಜೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.