×
Ad

ಅನುದಾನ ಖರ್ಚು ಲೆಕ್ಕಪತ್ರದಲ್ಲಿ ಅವ್ಯವಹಾರ ಬಹಿರಂಗ: ಶಿಸ್ತು ಕ್ರಮಕ್ಕೆ ಉಪವಿಭಾಗಾಧಿಕಾರಿ ಖಡಕ್ ಸೂಚನೆ

Update: 2016-10-21 23:35 IST

ಪುತ್ತೂರು, ಅ.21: ಸರಕಾರಿ ಆಸ್ಪತ್ರೆಗೆ ಮಂಜೂರಾದ ಅನುದಾನದ ಲೆಕ್ಕಪತ್ರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಶುಕ್ರವಾರ ನಡೆದ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಹಿರಂಗಗೊಂಡಿದೆ.
ಈ ಕುರಿತು ತಕ್ಷಣ ಶಿಸ್ತು ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ ನೇತೃತ್ವದಲ್ಲಿ ಆಸ್ಪತ್ರೆಯ ರಕ್ಷಾ ಸಮಿತಿ ಸಭೆ ನಡೆಯಿತು. ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಸರಿಯಾದ ಲೆಕ್ಕಪತ್ರವಿಲ್ಲದೆ ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಜಮಾ ಖರ್ಚುಗಳ ವಿವರಗಳ ಮಾಹಿತಿ ಸಂದರ್ಭ ದ್ವಿತೀಯ ದರ್ಜೆ ಸಹಾಯಕ ಕಿರಣ್ ಮತ್ತು ಇನ್ನೋರ್ವ ಸಿಬ್ಬಂದಿ ಆಸ್ಪತ್ರೆಯ ಜನರಲ್ ಅಕೌಂಟೆಂಟ್ ಯೋಗಾನಂದ ಎಂಬವರು ಸರಕಾರಿ ನಿಯಮಾವಳಿಯನ್ನು ಮೀರಿ ಖರ್ಚು ಮಾಡಿದ್ದು, ಈ ಪೈಕಿ ಕಿರಣ್ ತನ್ನ ತಪ್ಪನ್ನು ಒಪ್ಪಿಕೊಂಡು ಹಣವನ್ನು ಮರು ಪಾವತಿಸುವುದಾಗಿ ಲಿಖಿತ ಹೇಳಿಕೆ ನೀಡಿದರು. ಈ ವಿಷಯದ ಬಗ್ಗೆ ಪ್ರಶ್ನಿಸಿದ ಉಪ ವಿಭಾಗಾಧಿಕಾರಿ ಡಾ. ರಾಜೇಂದ್ರ, ಎರಡು ವರ್ಷಗಳ ಹಿಂದಿನ ವಾರ್ಷಿಕ ವರದಿಯಲ್ಲಿ ಉಲ್ಲೇಖಿತವಾದ ಖರ್ಚುಗಳಲ್ಲಿ 1.5 ಲಕ್ಷ ರೂ. ಏನಾಗಿದೆ ಎಂಬುದು ಗೊತ್ತಾಗಿಲ್ಲ. ದ್ವಿತೀಯ ದರ್ಜೆ ಸಹಾಯಕ ಕಿರಣ್ ಬಳಕೆ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅವರ ಮೇಲೆ ಏಕೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.
 ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ಭಟ್, ಕಿರಣ್ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಅಲ್ಲದೆ ತನಗೆ ಅನಾರೋಗ್ಯವಿರುವ ಕಾರಣ ಲೆಕ್ಕಾಚಾರ ನೀಡುವಲ್ಲಿ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.
2 ವರ್ಷಗಳ ವಾರ್ಷಿಕ ವರದಿಯನ್ನು ಶಾಸಕಿ ಮತ್ತು ಉಪವಿಭಾಗಾಧಿಕಾರಿಗಳು ಪ್ರಶ್ನಿಸಿದಾಗ ಅದರಲ್ಲೂ ಸಾಕಷ್ಟು ಲೋಪಗಳು ಕಂಡು ಬಂದಿದ್ದು, ಆಸ್ಪತ್ರೆಯ ಜನರಲ್ ಅಕೌಟೆಂಟ್ ಯೋಗಾನಂದ್ ಎಂಬವರು ಸರಕಾರದ ಸುತ್ತೋಲೆ ಮೀರಿ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿತ್ತು. ಸರಕಾರದ ಸುತ್ತೋಲೆಯಲ್ಲಿ 5 ರೂ. ಸಾವಿರಕ್ಕಿಂತ ಅಧಿಕ ಖರ್ಚುಗಳನ್ನು ಮಾಡಲು ಉಪವಿಭಾಗಾಧಿಕಾರಿಗಳ ಅನುಮೋದನೆ, 25 ರೂ. ಸಾವಿರಕ್ಕಿಂತ ಅಧಿಕ ಖರ್ಚು ಮಾಡಲು ಆಸ್ಪತ್ರೆ ರಕ್ಷಾ ಸಮಿತಿಯ ಅನುಮೋದನೆ ಪಡೆಯಬೇಕು. 2 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲು ಶಾಸಕಿ ಅವರ ಅನುಮೋದನೆ ಪಡೆಯಬೇಕಾಗಿತ್ತು.
ಆದರೆ ಇದೆಲ್ಲವನ್ನೂ ಮೀರಿ ಹಣವನ್ನು ಖರ್ಚು ಮಾಡಲಾಗಿದ್ದು, ಈ ಕುರಿತು ಆಕ್ರೋಶಿತರಾದ ಉಪವಿಭಾಗಾಧಿಕಾರಿಗಳು ಸರಕಾರದ ಹಣವನ್ನು ಮನಬಂದಂತೆ ಖರ್ಚು ಮಾಡಿರುವುದಕ್ಕೆ ತರಾಟೆಗೆತ್ತಿಕೊಂಡು, ಖರ್ಚು ಮಾಡಿರುವ ವಿವರಗಳನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಸೂಚಿಸಿದರು.
ಆಸ್ಪತ್ರೆಯ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಇತರ ಉದ್ದೇಶಗಳಿಗೆ ಬಳಸದೆ ಅಗತ್ಯತೆಗಳನ್ನು ಪೂರೈಸುವಂತೆ ಸೂಚಿಸಿದ ಉಪವಿಭಾಗಾಧಿಕಾರಿಗಳು, ಹೆಚ್ಚುವರಿ ಸಿಬ್ಬಂದಿ ಬೇಡಿಕೆಯನ್ನು ಮುಂದಿಡುವ ಬದಲು ಇರುವ ಸಿಬ್ಬಂದಿಯನ್ನು ಚೆನ್ನಾಗಿ ತೊಡಗಿಸಿಕೊಳ್ಳಿ ಎಂದರು.
ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿಲ್ಲಾ ಆರೋಗ್ಯ ನಿರೀಕ್ಷಕ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ್, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ನಯನಾ ರೈ, ಚಂದ್ರಶೇಖರ್, ಅಬ್ದುಲ್ ರಹ್ಮಾನ್ ಆಝಾದ್, ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News