ಇಂದಿನಿಂದ ‘ರಜತ ವೈಭವ’ ಜೇಸಿ ವಲಯ ಸಮ್ಮೇಳನ
ಉಡುಪಿ, ಅ.21: ಜೆಸಿಐ ಉಡುಪಿ ಸಿಟಿ ವತಿಯಿಂದ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜೇಸಿ ಜಿಲ್ಲೆಗಳನ್ನೊಳಗೊಂಡ ವಲಯ 15ರ ರಜತ ವರ್ಷದ ವಲಯ ಸಮ್ಮೇಳನ ‘ರಜತ ವೈಭವ’ವನ್ನು ಅ.22 ಮತ್ತು 23ರಂದು ಚಿಟ್ಪಾಡಿ ಯು.ಎಸ್.ನಾಯಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವರ್ಷದ ಯಶಸ್ವಿ ಕಾರ್ಯಕ್ರಮಗಳನ್ನು ಮುಗಿಸಿದ ಘಟಕಾಧ್ಯಕ್ಷರನ್ನು ಗುರುತಿಸಿ ಸನ್ಮಾನಿಸಲಾಗುವುದು. ಇದೇ ಸಂದರ್ಭ ಮುಂದಿನ ವರ್ಷದ ವಲಯಾಧ್ಯಕ್ಷ ಮತ್ತು ವಲಯ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜೇಸಿ ವಲಯಾಧ್ಯಕ್ಷ ಸಂದೀಪ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಮ್ಮೇಳನವನ್ನು ಅ.22ರಂದು ಸಂಜೆ 6ಕ್ಕೆ ಜೆಸಿಐ ಇಂಡಿಯಾ ಫೌಂಡೇಶನ್ನ ರಾಷ್ಟ್ರೀಯ ಅಧ್ಯಕ್ಷ ವಲ್ಲಭದಾಸ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜೇಸಿ ಘಟಕಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಸಮ್ಮೇಳನದ ನಿರ್ದೇಶಕ ರವಿರಾಜ್ ಎಚ್.ಪಿ., ರಾಯಭಾರಿ ಮನೋಜ್ ಕಡಬ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.