×
Ad

ಈವರೆಗೆ 40 ಲಕ್ಷ ದನಗಳನ್ನು ರಕ್ಷಿಸಿದ್ದೇವೆ: ಬಜರಂಗದಳದ ರಾಷ್ಟ್ರೀಯ ಸಂಯೋಜಕ

Update: 2016-10-22 20:00 IST

ಮಂಗಳೂರು,ಅ.22 :ದೇಶದಲ್ಲಿ ಗೋ ರಕ್ಷಣೆಗಾಗಿ ಬಜರಂಗದಳ ಪ್ರಾಮಾಣಿಕವಾಗಿ ಅಸಲಿ ಹೋರಾಟವನ್ನೇ ನಡೆಸುತ್ತಿದೆ. 1996ರಲ್ಲಿ ಪ್ರಯಾಗದಲ್ಲಿ ಗಾಯ್ ನಹೀಂ ಕಟ್‌ನೇ ದೇಂಗೆ, ದೇಶ್ ನಹೀಂ ಬಟ್ನೇ ದೇಂಗೆ ಎಂಬ ಸಂಕಲ್ಪ ಮಾಡಿದ್ದು, ಅಲ್ಲಿಂದ ಇಲ್ಲಿ ತನಕ ಸುಮಾರು 40 ಲಕ್ಷ ದನಗಳನ್ನು ರಕ್ಷಿಸಿದ್ದೇವೆ. ನಮ್ಮ ಕಾರ್ಯಕರ್ತರೆಲ್ಲ ಪ್ರಾಮಾಣಿಕರು, ಸಾಚಾಗಳು ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ್ ರಾಜೇಶ್ ಪಾಂಡೆ ಹೇಳಿದರು.

ಅವರು ನಗರದ ಸಂಘ ನಿಕೇತನದಲ್ಲಿ ಇಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ವತಿಯಿಂದ ಆಯೋಜಿಸಿರುವ ಬಜರಂಗ ದಳದ ಪ್ರಾಂತ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ದಾದ್ರಿ ಘಟನೆ ನಂತರ ಅಸಹಿಷ್ಣುತೆಯಿದೆ ಎಂದು ಬೊಬ್ಬೆ ಹೊಡೆದರು. ಕಾಶ್ಮೀರದಲ್ಲಿ ಹಿಂದು ಪಂಡಿತರ ಮೇಲೆ ದಬ್ಬಾಳಿಕೆ, ಬಂಗಾಳದಲ್ಲಿ ಹಿಂದುಗಳ ಹತ್ಯೆ ನಡೆದಾಗ ಅಸಹಿಷ್ಣುತೆ ಕಂಡಿಲ್ಲ. ಒಂದು ವೇಳೆ ದಾದ್ರಿ, ಸರ್ಜಿಕಲ್ ದಾಳಿಯಿಂದ ಅಸಹಿಷ್ಣುತೆ ಬಂತೆಂದಾದರೆ ಅದನ್ನು ಸ್ವಾಗತಿಸಲು ಸಿದ್ಧ ಎಂದರು.

ಬಹುತೇಕ ಮುಸ್ಲಿಮರು ಮೂಲತ: ಹಿಂದುಗಳೇ ಆಗಿದ್ದು, ಮಾನಪ್ರಾಣ ರಕ್ಷಣೆಗೆೆ ಹೆದರಿ ಬಲವಂತವಾಗಿ ಮತಾಂತರಗೊಂಡವರಾಗಿದ್ದು ಅಂತವರನ್ನು ಮನಪರಿವರ್ತಿಸುವ ಕಾರ್ಯವನ್ನು ಮಾಡಬೇಕು ಎಂದರು.

ಬಜರಂಗದಳದ ಮುಂದೆ ಹಲವಾರು ಸವಾಲುಗಳಿದ್ದು, ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಿದ್ದೇವೆ. ಇನ್ನೆಂದೂ ದೇಶದಲ್ಲಿ ಲವ್ ಜಿಹಾದ್ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.

ಸಲ್ಮಾನ್, ಅಮೀರ್, ಶಾರುಕ್ ಖಾನ್‌ಗೆ ಭಾರತದಲ್ಲಿ ಅಸಹಿಷ್ಣುತೆ ಕಂಡರೆ ಪಾಕ್, ಬಾಂಗ್ಲಾ ಅಥವಾ ಅಫ್ಘಾನಿಸ್ಥಾನಕ್ಕೆ ಬೇಕಾದರೆ ಹೋಗಲಿ. ಇನ್ನು ಪಾಕಿಸ್ತಾನದ ಒಬ್ಬನೇ ಒಬ್ಬ ಕಲಾವಿದ ಭಾರತಕ್ಕೆ ಬರಕೂಡದು. ಯಾರಾದರೂ ಅವರನ್ನು ಸಮರ್ಥಿಸಿದರೆ ಅವರ ಸಿನೆಮಾಗಳನ್ನೂ ಬಹಿಷ್ಕರಿಸಲಾಗುವುದು ಎಂದು ರಾಜೇಶ್ ಪಾಂಡೆ ಹೇಳಿದರು.

ವಿಶ್ವ ಹಿಂದು ಪರಿಷತ್ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, ಉಡುಪಿಯಲ್ಲಿ ದಲಿತರ ಹೆಸರಿನಲ್ಲಿ ಮಠಕ್ಕೆ ದಾಳಿ ಮಾಡಿದರೆ ಅದನ್ನು ಹಿಮ್ಮೆಟ್ಟಿಸಲು ಬಜರಂಗದಳದ 600 ಸಂಚಾಲರೂ, ಕಾರ್ಯಕರ್ತರೂ ಒಂದು ಗಂಟೆಯಲ್ಲಿ ಧಾವಿಸಿ ಬರಲಿದ್ದಾರೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.

ಅಹಿಂದ ಹೆಸರಿನಲ್ಲಿ ದಲಿತ, ಹಿಂದುಳಿದವರ ಬಗ್ಗೆ ಮುಸ್ಲಿಮರು ಕಾಳಜಿ ವಹಿಸುವ ಅಗತ್ಯವಿಲ್ಲ. ಈ ಷಡ್ಯಂತ್ರ ವಿರುದ್ಧ ಜಾಗೃತರಾಗಿರಬೇಕು ಎಂದರು.
ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಮಾತನಾಡಿ, ರಾಜ್ಯ ಸರಕಾರ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದರು.

ವಿಹಿಂಪ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಆರೆಸ್ಸೆಸ್ ಮಂಗಳೂರು ನಗರ ಸಂಘ ಸಂಚಾಲಕ ಸುನಿಲ್ ಆಚಾರ್, ಬಜರಂಗ ದಳ ವಿಭಾಗ ಸಹ ಸಂಚಾಲಕ ಸುನಿಲ್ ಕೆ.ಆರ್., ಬೆಂಗಳೂರು ಮಹಾನಗರ ಸಂಚಾಲಕ ಕೇಶವ ನಾಯ್ಕ ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News