ನಾಗರಿಕರ ಆಕ್ರೋಶಕ್ಕೆ ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆ ಬಂದ್!

Update: 2016-10-26 05:05 GMT

ಮಂಗಳೂರು, ಅ.26: ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆ ದುರಸ್ತಿಗೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆಯನ್ನು ಬಂದ್ ಮಾಡಲಾಗಿದೆ.

ಬೆಳಗ್ಗೆ 7 ಗಂಟೆಯಿಂದಲೇ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರಿಸರದ ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆಯ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಹಲವು ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದರೂ ನಗರಪಾಲಿಕೆ ಮತ್ತು ಬೃಹತ್ ಉದ್ದಿಮೆಗಳು ಸಂಚಾರಕ್ಕೆ ಅಯೋಗ್ಯಗೊಂಡಿರುವ ರಸ್ತೆ ದುರಸ್ತಿಗೊಳಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಿನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಘನವಾಹನಗಳ ಓಡಾಟದಿಂದಾಗಿ ಸುರತ್ಕಲ್‌ನಿಂದ ಎಂಆರ್‌ಪಿಎಲ್‌ಗೆ ಸಂಪರ್ಕ ಕಲ್ಪಿಸುವ ನಾಲ್ಕು ಕಿ.ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಎಂಆರ್‌ಪಿಎಲ್-ಬಿಎಎಸ್‌ಎಫ್-ಎಚ್‌ಪಿಸಿಎಲ್ ಸಹಿತ ಬೃಹತ್ ಉದ್ದಿಮೆಗಳ ವಾಹನ ಓಡಾಟದಿಂದಾಗಿ ರಸ್ತೆ ಪೂರ್ಣವಾಗಿ ಹದಗೆಟ್ಟಿದ್ದು ರಸ್ತೆ ಸರಿಪಡಿಸುವ ಜವಾಬ್ದಾರಿಯನ್ನು ಎಂಆರ್‌ಪಿಎಲ್ ವಹಿಸಿಕೊಳ್ಳಬೇಕು ಎಂದು ನಗರಪಾಲಿಕೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕಂಪೆನಿಗಳು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಯನ್ನು ದುರಸ್ತಿಗೊಳಿಸುವುದು ಅಸಾಧ್ಯ ಎಂದು ಪಾಲಿಕೆಯ ಬೇಡಿಕೆಯನ್ನು ತಿರಸ್ಕರಿಸಿವೆ. ಸ್ಥಳೀಯ ಶಾಸಕರು, ಸಂಸದರು ತಮ್ಮ ಜವಾಬ್ದಾರಿ ನಿವರ್ಹಿಸಿ ಪ್ರಶ್ನೆ ಇತ್ಯರ್ಥಗೊಳಿಸದೇ ಇರುವುದರಿಂದ ಈ ಭಾಗದ ಜನರು ಸಂಚರಿಸಲು ರಸ್ತೆಯಿಲ್ಲದೆ ನರಕಯಾತನೆ ಪಡುವಂತಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News