ಕುತೂಹಲ ಮೂಡಿಸಿದ ಅಖಿಲೇಶ್-ರಾಜ್ಯಪಾಲ ರಾಮ್ ನಾಯ್ಕ ಭೇಟಿ
ಲಕೋ, ಅ.26: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯಪಾಲ ರಾಮ್ ನಾಯ್ಕಿರನ್ನು ಬುಧವಾರ ಭೇಟಿಯಾಗಿದ್ದಾರೆ. ಅಖಿಲೇಶ್ ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಎಂಎಲ್ಸಿ ಆಶು ಮಲಿಕ್ಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಖಿಲೇಶ್ ಸಂಪುಟದ ಸಚಿವ ಪವನ್ ಪಾಂಡೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಬುಧವಾರ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಈ ಮೂಲಕ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಮತ್ತೆ ಆಂತರಿಕ ಕಲಹ ಆರಂಭವಾಗಿದೆ.
‘‘ಎಂಎಲ್ಸಿ ಮಲಿಕ್ರೊಂದಿಗೆ ಹೊಡೆದಾಟ ನಡೆಸಿರುವ ಪಾಂಡೆಯನ್ನು ಸಚಿವರ ಸಂಪುಟ ಸ್ಥಾನದಿಂದ ಉಚ್ಚಾಟಿಸುವಂತೆ ಮುಖ್ಯಮಂತ್ರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಪಕ್ಷದಲ್ಲಿ ಅಶಿಸ್ತಿನ ವರ್ತನೆಯನ್ನು ಸಹಿಸಲಾಗುವುದಿಲ್ಲ. ನಮ್ಮ ಪಕ್ಷದೊಳಗೆ ಯಾವುದೇ ಆಂತರಿಕ ಕಲಹವಿಲ್ಲ. ಹಿರಿಯ ನೇತಾರ ಮುಲಾಯಂ ಸಿಂಗ್ ಹೇಳಿದಂತೆ ನಡೆದುಕೊಳ್ಳುವೆ’’ಎಂದು ಶಿವಪಾಲ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪವನ್ ಪಾಂಡೆ ಉಚ್ಚಾಟನೆಯ ಬೆನ್ನಿಗೆ ಸಿಎಂ ಅಖಿಲೇಶ್ ಅವರು ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ರಾಜ್ಯಪಾಲರ ಭೇಟಿಗೆ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ.