ನ.14ರಿಂದ 16ರವರೆಗೆ ರಂಗಾಯಣ ನಾಟಕೋತ್ಸವ

Update: 2016-10-27 11:28 GMT

ಮಂಗಳೂರು, ಅ.27: ಮೈಸೂರಿನ ರಂಗಾಯಣದ ವತಿಯಿಂದ ನಗರದ ಪುರಭವನದಲ್ಲಿ ನವೆಂಬರ್ 14ರಿಂದ 16ರವರೆಗೆ ರಂಗಾಯಣ ನಾಟಕೋತ್ಸವವನ್ನು ಆಯೋಜಿಸಲಾಗಿದೆ.

ಉರ್ವಸ್ಟೋರ್‌ನ ತುಳುಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಟಪತಿ, ಮೂರು ದಿನಗಳಲ್ಲಿ ಚೆಕ್‌ಮೇಟ್, ಮಹಾಮಾಯಿ ಹಾಗೂ ತಲೆದಂಡ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.

ಅಂತರ್ ಕಾಲೇಜು ನಾಟಕ ಮತ್ತು ಜನಪದೋತ್ಸವ ಸ್ಪರ್ಧೆ

ರಂಗಾಯಣದ ವತಿಯಿಂದ ಅಂತರ್ ಕಾಲೇಜು ನಾಟಕ ಮತ್ತು ಜನಪದೋತ್ಸವ ಸ್ಪರ್ಧೆಯನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಚಿಸುವ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ ಜಿಲ್ಲೆಯ ಕಾಲೇಜುಗಳ ಮುಖ್ಯಸ್ಥರು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕ ಕಚೇರಿಯಿಂದ ಮೈಸೂರು ರಂಗಾಯಣದ ಕಚೇರಿಯಿಂದ ನಿಗದಿತ ಅರ್ಜಿಯನ್ನು ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ರಂಗಾಯಣ ಮೈಸೂರು ಇವರಿಗೆ ಕಳುಹಿಸತಕ್ಕದ್ದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕೇವಲ ಎಂಟು ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿಯನ್ನು ಪಡೆಯಲು ನವೆಂಬರ್ 10ರೊಳಗೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ನ. 15ರೊಳಗೆ ಸಲ್ಲಿಸಬೇಕಾಗಿದೆ. ಅಂತಿಮ ಕಾಲೇಜುಗಳ ಆಯ್ಕೆ ಮಾಡುವ ಹಕ್ಕನ್ನು ರಂಗಾಯಣ ನಿರ್ದೇಶಕರ ತೀರ್ಮಾನಕ್ಕೆ ಕಾಯ್ದಿರಿಸಲಾಗಿದೆ. ಆಯ್ಕೆಗೊಂಡ ಕಾಲೇಜಿನ ತಂಡಕ್ಕೆ ನಾಟಕ ನಿರ್ದೇಶಕರಿಗೆ 20,000 ರೂ.ಗಳನ್ನು ನಾಟಕ ತಯಾರಿಗೆ 5,000 ರೂ. ಜಾನಪದ ನೃತ್ಯ ತಂಡಕ್ಕೆ 10,000 ರೂ.ಗಳನ್ನು ನೀಡಲಾಗುವುದು.

ಆಯ್ಕೆಗೊಂಡ ಕಾಲೇಜಿನವರು ನುರಿತ ನಿರ್ದೇಶಕ ಮತ್ತು ಕಲಾವಿದರಿಂದ ನವೆಂಬರ್ 20ರಿಂದ ನಾಟಕ ತಯಾರಿ ಸಿದ್ಧತೆ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಎರಡೂ ವಿಭಾಗದಲ್ಲೂ ಒಂದೇ ಕಾಲೇಜು ಭಾಗವಹಿಸಬಹುದು ಅಥವಾ ಯಾವುದಾದರೂ ಒಂದು ನಾಟಕ ಅಥವಾ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲಾ ಮಟ್ಟದ ನಾಟಕ ಮತ್ತು ಜಾಪನದ ನೃತ ಸ್ಪರ್ಧೆಯು ಡಿಸೆಂಬರ್ ಮೂರು ಮತ್ತು ನಾಲ್ಕನೆ ವಾರ ನಡೆಯಲಿದೆ. ವಿಭಾಗೀಯ ಮಟ್ಟ 2017ರ ಜನವರಿಯ ಮೊದಲ ಅಥವಾ ಕೊನೆಯ ವಾರ ನಡೆಯಲಿದೆ. ರಾಜ್ಯ ಮಟ್ಟದ ಸ್ಪರ್ಧೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ವಿವರಿಸಿದರು.

ಜಿಲ್ಲಾ ಮಟ್ಟದಲ್ಲಿ ಎಂಟು ಕಾಲೇಜುಗಳಿಗೆ ಸ್ಪರ್ಧೆ ನಡೆದು ಎರಡು ತಂಡಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್, ದ.ಕ.ಜಿಲ್ಲಾ ವಿಭಾಗದ ವಿದು ಉಚ್ಚಿಲ್, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News