ರಾಜ್ಯಮಟ್ಟದ ಅಂತರ ಕಾಲೇಜು ನಾಟಕ, ಜಾನಪದ ನೃತ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ

Update: 2016-10-27 14:51 GMT

ಉಡುಪಿ, ಅ.27: ಕಾಲೇಜುಗಳಲ್ಲಿ 60, 70ರ ದಶಕದಲ್ಲಿದ್ದ ರಂಗಭೂಮಿ ಚಟುವಟಿಕೆ ಕಂಪ್ಯೂಟರ್ ಯುಗದಲ್ಲಿ ಕಡಿಮೆಯಾಗಿದ್ದು, ಮತ್ತೆ ನಾಡಿನ ಕಾಲೇಜುಗಳಲ್ಲಿ ದೇಶೀಯ ಸಾಂಸ್ಕೃತಿಕ ವಾತಾವರಣ ಪುನರ್ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗಾಯಣ ಮುಂದಾಗಿದೆ.

ಇದಕ್ಕಾಗಿ ಅಂತರ ಕಾಲೇಜು ನಾಟಕ ಮತ್ತು ಜನಪದೋತ್ಸವ ಸ್ಪರ್ಧೆಯನ್ನು ರಾಜ್ಯಾದ್ಯಂತ ಆಯೋಜಿಸಿದೆ. ಆಸಕ್ತ ಕಾಲೇಜಿನವರು ಅರ್ಜಿ ಸಲ್ಲಿಸಲು ಕೋರಲಾಗಿದೆ. ರಾಜ್ಯ ಮಟ್ಟದ ಸ್ಪರ್ಧೆಗಳು ರಂಗಾಯಣದ ವಿವಿಧ ವಲಯಗಳ ಅಡಿಯಲ್ಲಿ ನಡೆಯಲಿದ್ದು, ಮೈಸೂರು ವಲಯದಲ್ಲಿ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಮಂಡ್ಯ ಜಿಲ್ಲೆಗಳು ಸೇರಿವೆ. ಈ ವಲಯದ ಪ್ರತಿ ಜಿಲ್ಲೆಯಿಂದ ಎಂಟು ಕಾಲೇಜುಗಳಿಗೆ ಮಾತ್ರ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಒಂದೇ ಕಾಲೇಜು ನಾಟಕ ಮತ್ತು ಜಾನಪದ ನೃತ್ಯಗಳಲ್ಲಿ ಭಾಗವಹಿಸಬಹುದು. ಅಥವಾ ಎರಡರಲ್ಲಿ ಒಂದೇ ವಿಭಾಗದಲ್ಲಿ ಭಾಗವಹಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

 ಆಯ್ಕೆಗೊಂಡ ಕಾಲೇಜುಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಒಂದು ತಿಂಗಳ ಮುಂಚೆ ಸಿದ್ಧತೆ, ತರಬೇತಿ ಪಡೆದಿರಬೇಕು. ತರಬೇತಿ, ಸಿದ್ಧತೆ ತರಬೇತಿಗೆ ಸಂಯೋಜಕರನ್ನು ನೇಮಿಸಿಕೊಳ್ಳಬೇಕು. ಸ್ಪರ್ಧೆ ಉಸ್ತುವಾರಿಗೆ ಜಿಲ್ಲಾ ಸಂಚಾಲಕ ರನ್ನು ರಂಗಾಯಣದಿಂದ ನೇಮಕ ಮಾಡಲಾಗಿದೆ. ಅವರು ನಿರ್ದೇಶಕರನ್ನು ನೀಡಲಿದ್ದಾರೆ. ಹೊಸತನದ ನಾಟಕ, ಜಾನಪದ ನೃತ್ಯ ಪ್ರಕಾರಗಳನ್ನು ಸಿದ್ಧಗೊಳಿ ಸಬೇಕು. ಹಳೆಯದನ್ನು ಪರಿಗಣಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕಾಲೇಜುಗಳ ನಾಟಕ ನಿರ್ದೇಶಕರಿಗೆ 20 ಸಾವಿರ ರೂ., ನಾಟಕ ತಯಾರಿ ಪ್ರಾಸಂಗಿಕ ವೆಚ್ಚ 5 ಸಾವಿರ ರೂ. ಹಾಗೂ ಜಾನಪದ ನೃತ್ಯ ಸಿದ್ಧತೆ ವೆಚ್ಚ 10 ಸಾವಿರ ರೂ.ವನ್ನು ರಂಗಾಯಣ ಕಾಲೇಜಿಗೆ ನೀಡಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳು ವಿಭಾಗ ಮಟ್ಟಕ್ಕೆ, ವಿಭಾಗ ಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆವ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಲಿವೆ.

ಭಾಗವಹಿಸಲಿಚ್ಚಿಸುವ ಕಾಲೇಜುಗಳ ಮುಖ್ಯಸ್ಥರು ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅಥವಾ ಮೈಸೂರು ರಂಗಾಯಣದ ಕಚೇರಿ ಯಿಂದ ಅರ್ಜಿ ಪಡೆದು ಭರ್ತಿ ಮಾಡಿ ನಿರ್ದೇಶಕರು, ರಂಗಾಯಣ, ಮೈಸೂರು ಇಲ್ಲಿಗೆ ಕಳುಹಿಸಬೇಕು. ಮೊದಲು ಬಂದ ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು. ನ.10ರೊಳಗೆ ಅರ್ಜಿ ಪಡೆದು, ನ.15ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು. ಡಿಸೆಂಬರ್ ಮೂರನೇ ವಾರದ ಬಳಿಕ ಜಿಲ್ಲಾ ಮಟ್ಟದ ಸ್ಪರ್ಧೆ, 2017ರ ಜನವರಿ ಮೊದಲ ವಾರದಲ್ಲಿ ವಿಭಾಗೀಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ರಾಜ್ಯಮಟ್ಟದ ಸ್ಪರ್ಧೆ ಆನಂತರ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಉಡುಪಿ ಜಿಲ್ಲಾ ಸಂಚಾಲಕ ಪ್ರವೀಣ್ ಕೊಡವೂರು (9611496267) ಇವರನ್ನು ಸಂಪರ್ಕಿಸುವಂತೆ ರಂಗಾಯಣದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News