×
Ad

ಅಖಿಲ ಭಾರತ ವಿ.ವಿ. ಕ್ರಾಸ್‌ಕಂಟ್ರಿ ರೇಸ್: ಮಂಗಳೂರು ವಿ.ವಿ.ಗೆ ಸಮಗ್ರ ಪ್ರಶಸ್ತಿಯ ಗರಿ

Update: 2016-10-28 19:08 IST

ಮೂಡುಬಿದಿರೆ, ಅ.28: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ವಿ.ವಿ. ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿ.ವಿ. ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಕ್ರಾಸ್‌ಕಂಟ್ರಿ ರೇಸ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಪಂಜಾಬ್ ವಿ.ವಿ. ಪಟಿಯಾಲ ರನ್ನರ್ಸ್‌ ಪ್ರಶಸ್ತಿಯನ್ನು ಪಡೆದಿದೆ. ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ. ಸಮಗ್ರ, ಪಂಜಾಬ್ ವಿ.ವಿ. ಪಟಿಯಾಲ ರನ್ನರ್ಸ್‌ ಹಾಗೂ ಮಹಾರ್ಷಿ ದಯಾನಂದ ವಿ.ವಿ. ರೋಟರ್ ತೃತೀಯ ಪ್ರಶಸ್ತಿಯನ್ನು ಪಡೆದಿದೆ. ಮಹಿಳೆಯರ ವಿಭಾಗದಲ್ಲಿ ಪಂಜಾಬ್ ವಿ.ವಿ. ಪಟಿಯಾಲ ಸಮಗ್ರ, ಸಾವಿತ್ರಿಬಾಯಿ ವಿ.ವಿ. ಪುಣೆ ದ್ವಿತೀಯ ಹಾಗೂ ಲಕ್ನೋ ವಿ.ವಿ. ತೃತೀಯ ಸ್ಥಾನಿಯಾಗಿದೆ.

ಆಳ್ವಾಸ್‌ನ ರಂಜಿತ್ ಕುಮಾರ್ ಪಟೇಲ್ ಎರಡನೆ ಬಾರಿ ಚಾಂಪಿಯನ್

ಪುರುಷರ ವೈಯಕ್ತಿಕ ವಿಭಾಗದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದ ಆಳ್ವಾಸ್‌ನ ರಂಜಿತ್ ಕುಮಾರ್ ಪಟೇಲ್ ಹಾಗೂ ಮಹಿಳೆಯರ ವಿಭಾಗದಲ್ಲಿ ಪುಣೆ ವಿ.ವಿ.ಯ ಸಂಜೀವಿನಿ ಝಾದವ್ ಚಾಂಪಿಯನ್ ಆಗಿ ಮೂಡಿಬಂದರು. ಕಳೆದ ವರ್ಷ ಮೂಡುಬಿದಿರೆಯಲ್ಲಿ ನಡೆದ ಕ್ರಾಸ್ ಕಂಟ್ರಿ ರೇಸ್‌ನಲ್ಲಿಯೂ ಆಳ್ವಾಸ್‌ನ ರಂಜಿತ್ ಕುಮಾರ್ ಪಟೇಲ್ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದು ದಾಖಲೆಯನ್ನು ಮಾಡಿದರು. ಪುರುಷರ ವಿಭಾಗದಲ್ಲಿ ಪಂಜಾಬ್ ವಿ.ವಿ.ಯ ರಂಜಿತ್ ಕುಮಾರ್ ದ್ವಿತೀಯ ಹಾಗೂ ಹರ್ಯಾಣ ರೋಹ್ಟಕ್ ವಿ.ವಿ.ಯ ವಿಜಯ್ ರಾಟಿ ತೃತೀಯ ಸ್ಥಾನಿಯಾದರು.

ಮಹಿಳೆಯರ ವಿಭಾಗದಲ್ಲಿ ಲಕ್ನೋ ವಿ.ವಿ.ಯ ಸುಧಾ, ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದ ಜ್ಯೋತಿ ಚೌಹಾಣ್ ತೃತೀಯ ಸ್ಥಾನಿಯಾಗಿದ್ದರು.

ಸಮಾರೋಪ ಸಮಾರಂಭ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಉಪಕುಲಪತಿ ಡಾ.ಕೆ.ಎಸ್. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಸಂಸ್ಥೆಯ ಪರವಾಗಿ ಮಹಾರಾಷ್ಟ್ರದ ಕೋಚ್ ವಿಜೇಂದ್ರ ಸಿಂಗ್, ಕೇರಳ ಕೋಚ್ ಮನೋಜ್ ಹಾಗೂ ಮಂಗಳೂರಿನ ಕೋಚ್ ರಾಧಾಕೃಷ್ಣ ಎಚ್.ಪಿ ಅವರನ್ನು ದೀರ್ಘ ಅವಧಿಯಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿರುವುದಕ್ಕೆ ಸನ್ಮಾನಿಸಿದರು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಸಂಸ್ಥೆಯ ಹಳೆ ವಿದ್ಯಾರ್ಥಿನಿ ಅಶ್ವಿನಿ ಅಕ್ಕುಂಜೆ, ವಿದ್ಯಾರ್ಥಿ ಧರುಣ್ ಎ. ಅವರನ್ನು ಪುರಸ್ಕರಿಸಲಾಯಿತು.

ವಿಚೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ದೇಶದ ಕ್ರೀಡಾ ಅಭಿವೃದ್ಧಿಯಲ್ಲಿ ಎಲ್ಲ ವಿ.ವಿ.ಯವರು ಸೇರಿದಂತೆ ಸರ್ವರು ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯ ಜೊತೆ ಪೌಷ್ಠಿಕ ಆಹಾರವನ್ನು ಒದಗಿಸಬೇಕು. ಉತ್ತಮ ದೇಹಸ್ಥಿತಿಯಿದ್ದಾಗ ಮಾತ್ರ ಕ್ರೀಡಾಪಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರಕ್ಕೆ ನಿರಂತರ ಪ್ರೋತ್ಸಾಹ ನೀಡುವವರನ್ನು ಗುರುತಿಸಿ, ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡಲಿದೆ ಎಂದು ಘೋಷಿಸಿದರು.

ಚಾಂಪಿಯನ್‌ಶಿಪ್‌ನ ಪರಿವೀಕ್ಷಣಾಧಿಕಾರಿ ರಾಕೇಶ್ ಗುಪ್ತಾ, ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ರಾಜೀವ್ ಗಾಂಧಿ ವಿ.ವಿ. ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯ ಡಾ.ಬಿ.ಸಿ ಭಗವಾನ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ರಾಜೀವ್ ಗಾಂಧಿ ವಿ.ವಿ.ಯ ರಿಜಿಸ್ಟ್ರಾರ್ ಡಾ.ಸಿ.ಎಂ. ನೂರ್ ಮನ್ಸೂರ್, ಉಪ ರಿಜಿಸ್ಟ್ರಾರ್, ಆಯೋಜನ ಸಮಿತಿಯ ಕಾರ್ಯಾದರ್ಶಿ ಡಾ.ವಸಂತ್ ಶೆಟ್ಟಿ, ಯುಪಿಸಿಎಲ್-ಅದಾನಿ ಗ್ರೂಪ್ಸ್‌ನ ನಿರ್ದೇಶಕ ಕಿಶೋರ್ ಆಳ್ವ, ಮೂಡುಬಿದಿರೆ ರಾಜೇಶ್ವರಿ ಇನ್ಫ್ರಾಟೆಕ್ ಪ್ರವರ್ತಕ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ರಾಜೇಶ್ ಮತ್ತು ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News