×
Ad

ಉಡುಪಿ: ಬೀದಿಬದಿ ವ್ಯಾಪಾರಸ್ಥರಿಂದ ಧರಣಿ

Update: 2016-11-02 18:49 IST

ಉಡುಪಿ, ನ.2: ಉಡುಪಿ ನಗರಸಭೆ ಮತ್ತು ಜಿಲ್ಲೆಯ ಇತರ ಸ್ಥಳೀಯ ಆಡಳಿತ ಸಂಸ್ಥೆಗಳ ಬಡತನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಬುಧ ವಾರ ಉಡುಪಿ ಬಸ್ ನಿಲ್ದಾಣದ ಬಳಿಯಿಂದ ಉಡುಪಿ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬೀದಿಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಬದುಕನ್ನು ಉತ್ತಮಗೊಳಿಸುವುದಕ್ಕಾಗಿ ದೇಶದ ಸಂಸತ್ತಿನಲ್ಲಿ ಕಾನೂನು ಅಂಗೀಕರಿಸಲ್ಪಟ್ಟು ಬೀದಿ ಬದಿ ವ್ಯಾಪಾರಗಳ ಅಧಿ ನಿಯಮ 2014 ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಆದರೆ ರಾಜ್ಯ ಸರಕಾರ ಕೇಂದ್ರ ಸರಕಾರದ ಕಾನೂನು ಮತ್ತು ಅಧಿನಿಯಮಗಳ ಆಧಾರದಲ್ಲಿ ರಾಜ್ಯ ನಿಯಮಾವಳಿ ಗಳನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ ಎಂದರು.

ನಗರಸಭೆ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಬೀದಿಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಆದರೆ ಇವರಿಗೆ ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳು ಹಾಗೂ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ಪೌರಾಯುಕ್ತರಿಗೆ ಮನವಿ

ನಗರದ ಜನದಟ್ಟಣೆ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗೂ ಮಾರಾಟ ಜಾಗ ಒದಗಿಸಬೇಕು. ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಡೆಸಬೇಕು. ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಗುರುತು ಚೀಟಿಯನ್ನು ಸಮೀಕ್ಷೆ ವರದಿ ಆಧಾರ ದಲ್ಲಿ ನೀಡಬೇಕು. ಬೀದಿ ಬದಿ ವ್ಯಾಪಾರಿಗಳ ಗುರುತು ಚೀಟಿಯನ್ನು ಕಾಲ ಕಾಲಕ್ಕೆ ಕಟ್ಟುನಿಟ್ಟಾಗಿ ನವೀಕರಿಸುತ್ತಿರಬೇಕು. 2014ರ ಕಾನೂನು/ಅಧಿ ನಿಯಮ ಶರ್ತಗಳಿಗೆ ಒಳ ಪಟ್ಟು ವ್ಯಾಪಾರ ನೀತಿ ರಚನೆಯನ್ನು ಆದ್ಯತೆಯಲ್ಲಿ ಜಾರಿಗೊಳಿಸಬೇಕು ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುವ ದೌರ್ಜನ್ಯ, ಕಾನೂನು ಬಾಹಿರ, ಅನಾಗರಿಕರ ಕೃತ್ಯವನ್ನು ನಗರಸಭೆ ತಕ್ಷಣ ನಿಲ್ಲಿಸಬೇಕು. ಗುರುತು ಚೀಟಿ ಹೊಂದಿದವರಿಗೆ ಮುದ್ರಾ ಬ್ಯಾಂಕ್‌ಗಳ ಮೂಲಕ ಸಾಲದ ವ್ಯವಸ್ಥೆ ಮಾಡಬೇಕು. ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳಿಗೆ ಸಂಬಂಧಪಟ್ಟ ಅವರ ಸಂಘದೊಂದಿಗೆ ನಿರಂತರ ಸಂಪರ್ಕ/ಸಮಾಲೋಚನೆ ನಡೆಸಬೇಕು. ಬೀದಿ ಬದಿ ವ್ಯಾಪಾರಿಗಳು ಸಮರ್ಥರಾಗುವಂತೆ ಮಾಡಲು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಂಘ ಮನವಿಯಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸಲಹೆಗಾರ ಪಿ.ವಿಶ್ವನಾಥ ರೈ, ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್., ಉಡುಪಿ ಜಿಲ್ಲಾ ಗೌವರಾಧ್ಯಕ್ಷ ಕವಿರಾಜ್, ಅಧ್ಯಕ್ಷ ವಿರೇಶ್, ಕಾರ್ಯದರ್ಶಿ ಬಸವರಾಜ್, ಕೋಶಾಧಿಕಾರಿ ಸಂಗಮೇಶ್, ಮುಖಂಡರಾದ ವೆಂಕಟೇಶ್ ಕೋಣಿ, ಉಮೇಶ್ ಕುಂದರ್, ನಳಿನಿ ಎಸ್. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News