ಗುತ್ತಿಗೆದಾರರ ವಿರುದ್ಧ ವಿಪಕ್ಷ ನಾಯಕಿ ದೂರು
Update: 2016-11-02 13:24 GMT
ಮಂಗಳೂರು, ನ.2: ಮಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ವಿರುದ್ಧ ಮನಪಾ ವಿಪಕ ನಾಯಕಿ ರೂಪಾ ಡಿ.ಬಂಗೇರಾ ಮನಪಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಯು ನಿಯಮಾವಳಿಯನ್ನು ಉಲ್ಲಂಘಿಸಿದೆ. ಮನೆ ಮನೆಗಳಿಂದ ಕಸಗಳನ್ನು ವಿಲೇವಾರಿ ಮಾಡದೆ ನಿರ್ಲಕ್ಷ ವಹಿಸುತ್ತಿವೆ. ಇವರ ಕಾರ್ಯವೈಖರಿಯು ಸಮರ್ಪಕವಾಗಿಲ್ಲ ಎಂದು ಮನಪಾ ಹಿರಿಯ ನೈರ್ಮಲ್ಯ ನಿರೀಕ್ಷಕ ಸುಶಾಂತ್ ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಹಾಗಾಗಿ ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಶೀಘ್ರ ಮನಪಾ ಸದಸ್ಯರ ಮತ್ತು ಗುತ್ತಿಗೆ ಕಂಪೆನಿಯ ಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.