ಬಿರುಗಾಳಿಗೆ ತತ್ತರಿಸಿದ ಗುಂಡ್ಯ : 600 ಎಕರೆ ಅರಣ್ಯ ನಾಶ

Update: 2016-11-02 13:37 GMT

ಕಡಬ, ನ.2: ಗುಂಡ್ಯ ಸಮೀಪದ ಸಿರಿಬಾಗಿಲು ಗ್ರಾಮದ ಅನಿಲದಿಂದ ಮಣಿಬಾಂಡವರೆಗಿನ ಸುತ್ತಲಿನ ಪ್ರದೇಶದಲ್ಲಿ ಏಕಾಏಕಿ ಬೀಸಿದ ಭಾರೀ ಬಿರುಗಾಳಿಗೆ ಸುಮಾರು 500ರಿಂದ 600 ಎಕರೆ ಅರಣ್ಯ ಪ್ರದೇಶದಲ್ಲಿದ್ದ ಬೆಲೆ ಬಾಳುವ ಅಪಾರ ಮರಗಳು ಧರಾಶಾಹಿಯಾಗಿದ್ದು, ಕೆಲವು ಮನೆಗಳು ಸೇರಿದಂತೆ ಅಪಾರ ಕೃಷಿ ನಾಶವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಕೇವಲ ನಾಲ್ಕೈದು ನಿಮಿಷಗಳಲ್ಲಿ ಬಂದೆರಗಿದ ಭೀಕರ ಗಾಳಿಯ ರಭಸಕ್ಕೆ ಸಾವಿರಾರು ಮರಗಳು ನೆಲಕ್ಕುರುಳಿವೆ. ಕೆಲವು ಮರಗಳು ಬುಡದಿಂದ ಕಿತ್ತು ಬಿದ್ದರೆ, ಇನ್ನೂ ಹಲವು ಮರಗಳು ಮಧ್ಯಬಾಗದಿಂದ ಮುರಿದು ಬಿದ್ದಿವೆ. ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯು ಅರಣ್ಯ ಪ್ರದೇಶವಾಗಿದ್ದು, ಜನವಸತಿ ಕಡಿಮೆಯಿರುವುದರಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕೈಕಂಬ-ಗುಂಡ್ಯ ರಸ್ತೆಯಲ್ಲಿ ಅನಿಲದಿಂದ ಸುಮಾರು 2 ಕಿ.ಮೀ ದೂರ ರಸ್ತೆಯುದ್ದಕ್ಕೂ ಮರಗಳು ಬಿದ್ದು ರಾತ್ರಿಯಿಡೀ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದಭರ್ದಲ್ಲಿ ಇದೇ ರಸ್ತೆಯಿಂದಾಗಿ ಪ್ರಯಾಣಿಸಲೆತ್ನಿಸಿದ ಕೆಲವು ಟೂರಿಸ್ಟ್ ವಾಹನಗಳಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಈಗಾಗಲೇ ರಸ್ತೆ ಬದಿಯಿಂದ ಕಣ್ಣಿಗೆ ಕಾಣುವಷ್ಟು ದೂರ ಮಾತ್ರ ಅರಣ್ಯ ನಾಶದ ಲೆಕ್ಕಚಾರಗಳು ಕಂಡು ಬಂದಿವೆಯಾದರೂ ಇನ್ನು ಅರಣ್ಯದೊಳಗೆ ಎಷ್ಟು ಮರಗಳು ಬಿದ್ದಿರಬಹುದೆಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ,

ಗಾಳಿಯ ರಭಸಕ್ಕೆ ಪುರುಷೋತ್ತಮ ಗೌಡ ಬೈಲೋಳಿ ಎಂಬವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ದಲ್ಲಿ ಪುರುಷೋತ್ತಮ ಗೌಡ ಅವರ ಪತ್ನಿ ಹಾಗೂ ಮಕ್ಕಳು ಮನೆಯೊಳಗೆ ಇದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂತೆಯೇ ಜನಾರ್ಧನ ಅನಿಲರವರ ಮನೆಯ ಮಾಡು ಸಂಪೂರ್ಣ ಜಖಂಗೊಂಡಿದೆ. ಅಂತೆಯೆ ಜಯಂತ ಅನಿಲರರ ಮನೆಯೂ ಜಖಂಗೊಂಡಿದೆ, ಕೇಶವ ಗೌಡ ಎಂಬವರ ಕೊಟ್ಟಿಗೆಗೂ ಹಾನಿಯಾಗಿದೆ. ಈ ಮೂರು ಮನೆಗಳಿಗೆ ಹೆಚ್ಚಿನ ಹಾನಿಯಾಗಿದ್ದರೆ ಉಳಿದಂತೆ ಹಲವಾರು ಮನೆಗಳಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ನಳಿನಿ ಪಕ್ಕಳ ಎಂಬವರ ಮನೆಗೆ ತೆರಳುವ ರಸ್ತೆಗೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಸಂಪರ್ಕವೇ ಇಲ್ಲದಂತಾಗಿದೆ. ಅನಿಲ ಎಂಬಲ್ಲಿರುವ ನಾಗೇಂದ್ರ ಎಂಬವರ ಅಂಗಡಿಯ ಮೇಲೆ ಮರ ಬಿದ್ದು ಅಂಗಡಿ ಜಖಂಗೊಂಡಿದೆ. ಅಂತೆಯೇ ನೀಲಪ್ಪ ಗೌಡ ಎಂಬವರ ಅಂಗಡಿಗೆ ಹಾನಿಯಾಗಿದೆ.

ವ್ಯಾಪಕ ಕೃಷಿ ನಾಶ

ಈಗಾಗಲೇ ಸಿಕ್ಕಿರುವ ಮಾಹಿತಿಂುಂತೆ ಜನಾರ್ಧನ ಅನಿಲ, ಜಯಂತ ಅನಿಲ, ನಾಗೇಶ್ ಅನಿಲ, ಪುರುಷೋತ್ತಮ ಬೈಲೋಳಿ, ಸೂರಪ್ಪ ಗೌಡ, ವೆಂಕಟೇಶ್ ಅನಿಲ, ಬಾಲಚಂದ್ರ ಅನಿಲ, ಪದ್ಮನಾ ಅನಿಲ, ಜಯಂತ ಎ.ಎನ್. ಚೆನ್ನಕೇಶವ ಇಡ್ಯಡ್ಕ, ಯಶೋಧಾ ಸಂಜೀವ ಗೌಡ, ರೇವತಿ ಚಂದ್ರಶೇಖರ, ಗಂಗಾಧರ ಹರಿಶ್ಚಂದ್ರರ ಅಡಿಕೆ, ತೆಂಗು, ಬಾಳೆ ಗಿಡಗಳು ಮುರಿದು ಬಿದ್ದಿದೆ. ಈಗಾಗಲೇ ಒಟ್ಟು 4 ಸಾವಿರದಿಂದ 5 ಸಾವಿರವರೆಗೆ ಅಡಿಕೆ ಮರಗಳು ಮುರಿದು ಬಿದ್ದಿರುವ ಬಗ್ಗೆ ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಅನಂತ ಶಂಕರ್, ಎಎಸ್ಪಿ ರಿಷ್ಯಂತ್, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕ ಹೆರಾಲ್ಡ್ ಮೋನಿಸ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್., ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಕಾಂಬ್ಲೆ, ಅಜಿತ್, ಮೆಸ್ಕಾಂ ಎಇಇ ಸುರೇಶ್ ಕುಮಾರ್, ಜೆಇ ನಾಗರಾಜ್, ಉಪ್ಪಿನಂಗಡಿ ಎಸ್ಸೈ ರತನ್ ಕುಮಾರ್, ಸುಬ್ರಹ್ಮಣ್ಯ ಎಸ್ಸೈ ಗೋಪಾಲ್ ಎಂ., ನೆಲ್ಯಾಡಿ ಹೊರಠಾಣೆಯ ಎಎಸ್ಸೈ ಯೋಗೀಂದ್ರ, ಕಡಬ ಎಎಸ್ಸೈ ರವಿ ಎಂ., ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ್, ಫಝಲ್ ಕೋಡಿಂಬಾಳ, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕೊಂಬಾರು ಗ್ರಾ.ಪಂ. ಅಧ್ಯಕ್ಷ ಅಜಿತ್ ಎಸ್., ಉಪಾಧ್ಯಕ್ಷೆ ಜಯಶ್ರೀ ರಾಮಚಂದ್ರ, ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ವಿವಿಧ ಪ್ರಮುಖರು ಭೇಟಿ ನೀಡಿದ್ದಾರೆ.

ಇದೊಂದು ವಿಶೇಷ ಪ್ರಕರಣವಾಗಿದ್ದು, ನಿನ್ನೆ ಬಂದಂತಹ ಭೀಕರ ಬಿರುಗಾಳಿಗೆ ಸುಮಾರು 500ರಿಂದ 600 ಎಕರೆ ಅರಣ್ಯ ಪ್ರದೇಶ ನಾಶವಾಗಿವೆ. ಶೀಘ್ರದಲ್ಲೇ ನಾಶದ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು.

- ಮಂಜುನಾಥ ಎನ್., ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ

ಅಪಾರ ಪ್ರಮಾಣದ ಅರಣ್ಯ ನಾಶವಾಗಿರುವುದರ ಜೊತೆಗೆ ಬಡವರ ಕೃಷಿನಾಶವಾಗಿದೆ. ಇಲ್ಲಿನ ಕೃಷಿಕರಿಗೆ ಸಂಬಂಧಪಟ್ಟ ಇಲಾಖೆಗಳಿಂದ ಪರಿಹಾರ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದಲ್ಲದೆ ಸರಕಾರದಿಂದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು.

- ಪಿ.ಪಿ. ವರ್ಗೀಸ್, ಜಿ.ಪಂ. ಸದಸ್ಯರು

ಗಾಳಿಗೆ ಮರಗಳು ಬಿದ್ದ ಪರಿಣಾಮದಿಂದಾಗಿ 2 ಕಿ.ಮೀ. ರಸ್ತೆಯಲ್ಲಿ 70ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಮೆಸ್ಕಾಂ ಇಲಾಖೆಗೆ ಸುಮಾರು 7 ಲಕ್ಷದಿಂದ 10 ಲಕ್ಷದಷ್ಟು ನಷ್ಟ ಅಂದಾಜಿಸಲಾಗಿದೆ.

- ಸುರೇಶ್ ಕುಮಾರ್, ಮೆಸ್ಕಾಂ ಎಇಇ ಕಡಬ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News