ಬಂಟ್ವಾಳ: ರಸ್ತೆಬದಿಯ ಅಂಗಡಿಗಳ ತೆರವು

Update: 2016-11-03 18:32 GMT

ಬಂಟ್ವಾಳ, ನ.3: ಪುರಸಭೆ ವ್ಯಾಪ್ತಿಯ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಕೆಗಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ರಸ್ತೆಬದಿಯ ಅಧಿಕೃತ ಹಾಗೂ ಅನಧಿಕೃತ ಅಂಗಡಿಗಳನ್ನು ಪುರಸಭೆ ಗುರುವಾರ ಸಂಜೆ ತೆರವುಗೊಳಿಸಿದೆ.

ಇದೇ ಸಂದರ್ಭವನ್ನು ಬಳಸಿಕೊಂಡ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಬಸ್ ನಿಲುಗಡೆಗಾಗಿ ರಸ್ತೆ ವಿಸ್ತರಣೆ ಕಾರ್ಯಕ್ಕೂ ಮುಂದಾದರು. ಬಂಟ್ವಾಳ ಬೈಪಾಸ್ ಜಂಕ್ಷನ್‌ನಿಂದ ಕಾಲೇಜ್ ರಸ್ತೆಯ ಬಲಭಾಗದಲ್ಲಿ ತರಕಾರಿ, ಫಾಸ್ಟ್‌ಫುಡ್, ಸೆಲೂನ್ ಮೊದಲಾದ ಅಂಗಡಿಗಳನ್ನು ಮುಖ್ಯಾ ಧಿಕಾರಿ ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಪೊಲೀಸರ ಸಹಕಾರದೊಂದಿಗೆ ತೆರವು ಗೊಳಿಸಿದರು. ಜಕ್ರಿಬೆಟ್ಟುವಿನಲ್ಲಿ ಪುರಸಭೆಯ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈಗಾಗಲೇ ಬೈಪಾಸ್ ತನಕ ಪೈಪ್‌ಲೈನ್ ಅಳವಡಿಸಲಾಗಿದೆ.

ಇದರ ಭಾಗವಾಗಿ ಪೈಪ್‌ಲೈನ್ ಅಳವಡಿಕೆಗಾಗಿ ಜಂಕ್ಷನ್ ಬಳಿಯ ಅಂಗಡಿಗಳನ್ನು ತೆರವು ಕಾರ್ಯಾ ಚರಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಾ ಧಿಕಾರಿ ತಿಳಿಸಿದ್ದಾರೆ. ನಾಲ್ಕು ರಸ್ತೆಗಳ ಸಂಗಮ: 

ಬಂಟ್ವಾಳ ಬೈಪಾಸ್ ಜಂಕ್ಷನ್ ನಾಲ್ಕು ರಸ್ತೆಗಳ ಸಂಗಮವೂ ಆಗಿದೆ. ಒಂದು ರಸ್ತೆ ಮಂಗಳೂರು-ಧರ್ಮಸ್ಥಳ ಇನ್ನೊಂದು ರಸ್ತೆ ಬಂಟ್ವಾಳ-ಮೂಡುಬಿದಿರೆಗೆ ಸಂಚರಿಸುತ್ತದೆ. ಈ ರಸ್ತೆಯು ಕಿರಿದಾ ಗಿದ್ದು ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ತೊಡಕಾಗುತ್ತಿದೆ. ಕಾಲೇಜ್ ರಸ್ತೆಗೆ ವಾಹನಗಳು ತಿರುವು ಪಡೆದುಕೊಳ್ಳುವ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಕೆಲದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಸ್ಥಳ ಪರಿಶೀಲನೆ ನಡೆಸಿ ಬಸ್ ನಿಲುಗಡೆಗೆ ಪರ್ಯಾಯ ಕ್ರಮವನ್ನು ಕೈಗೊಳ್ಳುವಂತೆ ಟ್ರಾಫಿಕ್ ಎಸ್ಸೈಗೆ ಸೂಚಿಸಿದ್ದರು. ಅದರಂತೆ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅಂಗಡಿಗಳನ್ನು ತೆರವುಗೊಳಿಸಿದ ಸ್ಥಳದಲ್ಲಿ ರಸ್ತೆಯನ್ನು ವಿಸ್ತರಿಸಿ ಟ್ರಾಫಿಕ್ ಜಾಮ್ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ರಿಕ್ಷಾ ನಿಲ್ದಾಣದ ಬಳಿ ಧರ್ಮಸ್ಥಳ ಕಡೆಗೆ ತೆರಳುವ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ.

ಹಾಗೆಯೇ ಮಂಗಳೂರಿನತ್ತ ಸಂಚರಿಸುವ ಬಸ್‌ಗಳು ಈಗಾಗಲೇ ಅಮ್ಟಾಡಿ ಗ್ರಾಪಂ ನಿರ್ಮಿಸಿರುವ ಬಸ್ ತಂಗುದಾಣದಲ್ಲಿ ನಿಲುಗಡೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News