ಉಡುಪಿ: ರಾಜ್ಯಮಟ್ಟದ ಸಂಸ್ಕೃತ ಶಾಸ್ತ್ರ ಸ್ಪರ್ಧೆಯ ಸಮಾರೋಪ, ಬಹುಮಾನ ವಿತರಣೆ

Update: 2016-11-03 18:33 GMT

ಉಡುಪಿ, ನ.3: ಉಡುಪಿಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಸಂಸ್ಕೃತ ಶಾಸ್ತ್ರ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಶ್ರೀಕೃಷ್ಣದ ರಾಜಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಂಗಳೂರಿನ ಸಂಸ್ಕೃತ ವಿಶ್ವ ವಿದ್ಯಾನಿಲಯದ ಕುಲ ಪತಿ ಡಾ. ಪದ್ಮಶೇಖರ್, ಸಂಸ್ಕೃತ ವಿವಿ ನಿರ್ದೇಶಕ ಡಾ.ವೀರನಾರಾಯಣ ಪಾಂಡುರಂಗಿ, ಉಪಕುಲಸಚಿವ ಪ್ರಕಾಶ್ ಪಾಗೋಜಿ, ಸಂಸ್ಕೃತ ಮಹಾ ಪಾಠಶಾಲೆಯ ಪ್ರಾಂಶುಪಾಲ ಡಾ.ಎನ್.ಲಕ್ಷ್ಮೀನಾರಾಯಣ ಭಟ್, ಎಸ್‌ಎಂಎಸ್‌ಪಿ ಮಹಾಸಭಾದ ಕಾರ್ಯ ದರ್ಶಿ ರತ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಶಾಸ್ತ್ರೀಯ ಸಂಸ್ಕೃತ ಸ್ಪರ್ಧೆಗಳಲ್ಲಿ ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ರಾಜೀವ್ ಗಾಂಧಿ ಪರಿಸರದ ವಿದ್ಯಾರ್ಥಿಗಳು 9 ಪ್ರಥಮ ಬಹುಮಾನ, 5 ದ್ವಿತೀಯ ಬಹುಮಾನ, 8 ತೃತೀಯ ಬಹುಮಾನಗಳೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳು 7 ಪ್ರಥಮ, 4 ದ್ವಿತೀಯ, 6 ತೃತೀಯ ಬಹುಮಾನಗಳೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ಉಡುಪಿಯ ಶ್ರೀ ಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳು 4 ಪ್ರಥಮ, 7 ದ್ವಿತೀಯ, 5 ತೃತೀಯ ಬಹುಮಾನವನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News