ಜಿಲ್ಲೆಯ ಕಂಬಳ ಪ್ರೇಮಿಗಳ ಆತಂಕ ನಿವಾರಣೆ

Update: 2016-11-04 15:08 GMT

ಪುತ್ತೂರು, ನ.4: ಜಿಲ್ಲೆಯಲ್ಲಿ ಕಂಬಳ ಅಯೋಜಿಸಲು ಅನುಮತಿ ನಿರಾಕರಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟು ತಡೆಯಾಜ್ಞೆ ನೀಡಿದ್ದು, ಕರಾವಳಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಪುತ್ತೂರಿನ ಕೋಟಿ ಚೆನ್ನಯ ಕೋಡುಕರೆ ಕಂಬಳವು ಕಳೆದ ಬಾರಿಯಂತೆ ಈ ಬಾರಿಯೂ ನಿರಾತಂಕವಾಗಿ ನಡೆಯುವುದು ಎಂದು ಕಂಬಳ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ತಿಳಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಕಂಬಳ ಆಯೋಜಿಸಲು ರಾಜ್ಯ ಹೈಕೋರ್ಟ್ ಹಸಿರುನಿಶಾನೆ ತೋರಿದ ಹಿನ್ನಲೆಯಲ್ಲಿ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಜಿಲ್ಲೆಯಲ್ಲಿ ನಿಗದಿಯಾಗಿರುವ ಕಂಬಳವನ್ನು ಕಳೆದ ಬಾರಿಯಂತೆ ಯಥಾಸ್ಥಿತಿಯಲ್ಲಿ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಂಬಳ ಸಮಿತಿಯವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಕಂಬಳ ನಡೆಸಲು ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದರು. ಜಿಲ್ಲಾಧಿಕಾರಿಗಳ ಈ ನಿಲುವನ್ನು ಪ್ರಶ್ನಿಸಿ ಮತ್ತು ಕಂಬಳ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅಶೋಕ್ ಕುಮಾರ್ ರೈ ಅವರ ಪರವಾಗಿ ಹೈಕೋರ್ಟಿನಲ್ಲಿ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಮತ್ತು ರಾಜಶೇಖರ್ ಇಲ್ಯಾರು ಮಂಡಿಸಿದ ವಾದವನ್ನಾಲಿಸಿದ ನ್ಯಾಯಾಧೀಶ ಎ.ಎಸ್.ಬೋಪಯ್ಯ ಅವರು ಜಿಲ್ಲಾಧಿಕಾರಿಗಳ ಆದೇಶಕ್ಕೆ ಗುರುವಾರ ತಡೆಯಾಜ್ಞೆ ನೀಡಿ, ಕಂಬಳವನ್ನು ಕಳೆದ ಬಾರಿಯಂತೆ ಯಥಾಸ್ಥಿತಿಯಲ್ಲಿ ಅವಕಾಶ ಕಲ್ಪಿಸಿ ಆದೇಶ ನೀಡಿದ್ದಾರೆ.

ಹೈಕೋರ್ಟಿನಲ್ಲಿ ನಮ್ಮ ಕಾನೂನು ಹೋರಾಟಕ್ಕೆ ಜಯ ಲಭಿಸಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ. ಕಂಬಳ ಅಯೋಜಿಸಲು ಅನುಮತಿ ನಿರಾಕರಿಸಿದ್ದ ಉಡುಪಿ ಜಿಲ್ಲಾಧಿಕಾರಿಗಳ ನಿಲುವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ರಾಜ್ಯ ಹೈಕೋರ್ಟು ಕಂಬಳ ನಡೆಸಲು ಅವಕಾಶ ನೀಡಿ ಆದೇಶಿಸಿತ್ತು. ಆದರೆ ದ.ಕ ಜಿಲ್ಲಾಧಿಕಾರಿ ಕಂಬಳಕ್ಕೆ ಅವಕಾಶ ನೀಡುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದರು. ಇದೀಗ ಅಶೋಕ್ ರೈ ಕುಮಾರ್ ಕೋಡಿಂಬಾಡಿ ಅವರ ಕಾನೂನು ಹೋರಾಟಕ್ಕೆ ಜಯ ಸಿಕ್ಕಿರುವುದರಿಂದ ಕಂಬಳ ನಡೆಸಲು ಎದುರಾಗಿದ್ದ ಅಡ್ಡಿ ಆತಂಕ ನಿವಾರಣೆಯಾಗಿದೆ, ಇದು ಕಂಬಳ ಪ್ರೇಮಿಗಳಿಗೆ ಖುಷಿ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಕೃಷಿ ಸಂಸ್ಕೃತಿಯ ಅಂಗ: ಹಿಂಸೆ ಇಲ್ಲ

ಕಂಬಳ ತುಳುನಾಡಿನ ಒಂದು ಗಂಡು ಕಲೆಯಾಗಿದ್ದು, ನಾಗಾರಾಧನೆ, ದೈವಾರಾಧನೆಯಂತೆ ಕಂಬಳ ಕಲೆಯೂ ಬಹಳಷ್ಟು ಪುರಾತನ ಕಾಲದಿಂದ ನಡೆದುಬಂದಿದೆ. ಕಂಬಳ ಮನರಂಜನೆಯ ಜೊತೆಗೆ ಕೃಷಿ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದ್ದು, ಕೃಷಿ ಸಂಸ್ಕೃತಿಯ ಜೊತೆಗೆ ಕಂಬಳ ಸಂಸ್ಕೃತಿಯೂ ಉಳಿಯಬೇಕಾಗಿದೆ ಎಂದಿರುವ ನಿರಂಜನ ರೈ ಮಠಂತಬೆಟ್ಟು, ಕಂಬಳದಲ್ಲಿ ಹಿಂಸೆ ಇಲ್ಲ. ತಾಲೂಕು ದಂಡಾಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲೇ ಕಂಬಳ ನಡೆಯುವುದರಿಂದ ಹಿಂಸೆಗೆ ಅವಕಾಶವೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪುತ್ತೂರು ಕಂಬಳ ಯಥಾಸ್ಥಿತಿ ಜಯಕರ್ನಾಟಕ ಸಂಘಟನೆಯ ಸ್ಥಾಪಕಾಧ್ಯಕ್ಷರಾದ ಉದ್ಯಮಿ ಎನ್.ಮುತ್ತಪ್ಪ ರೈ , ಶಾಸಕ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದುಕೊಂಡು ಬಂದಿರುವ ಐತಿಹಾಸಿಕ ಹಿನ್ನಲೆಯುಳ್ಳ ಕೋಟಿ ಚೆನ್ನಯ ಕೋಡುಕರೆ ಕಂಬಳವೂ ಈ ಬಾರಿಯೂ ಯಥಾಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಲಿದೆ ಎಂದು ನಿರಂಜನ ರೈ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News