ಮಣಿಪಾಲ: ಇಬ್ಬರ ಅಂಗಾಂಗ ದಾನದಿಂದ 6 ಮಂದಿಗೆ ಜೀವದಾನ

Update: 2016-11-05 14:37 GMT

ಮಣಿಪಾಲ, ನ.5: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ‘ಮೆದುಳು ನಿಷ್ಕೃಿಯ’ ಗೊಂಡ ಇಬ್ಬರು ರೋಗಿಗಳ ಅಂಗಾಂಗಗಳನ್ನು ದಾನವಾಗಿ ನೀಡಲಾಗಿದೆ. ಇದರಿಂದ ಒಟ್ಟು ಆರು ಮಂದಿಗೆ ಜೀವದಾನ ದೊರಕಿದಂತಾಗಿದೆ ಎಂದು ಕೆಎಂಸಿಯ ಮೆಡಿಕಲ್ ಸುಪರಿಂಟೆಂಡೆಂಟ್ ಹಾಗೂ ಸಿಒಒ ಡಾ.(ಕ) ಎಂ.ದಯಾನಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯರಿಂದ ‘ಮೆದುಳು ನಿಷ್ಕೃಿಯ’ವಾಗಿದೆ ಎಂದು ಘೋಷಿಸಲ್ಪಟ್ಟ ರೋಗಿಗಳ ಹೆಸರುಗಳನ್ನು ಕಿಶೋರ್ ಮತ್ತು ವೆಲೇರಿಯನ್ ಡಿಸೋಜ ಎಂದು ಡಾ.ದಯಾನಂದ ತಿಳಿಸಿದ್ದಾರೆ. ಇವರ ಅಂಗಾಂಗಗಳು ಆರು ಮಂದಿಗೆ ಹೊಸ ಬದುಕನ್ನು ನೀಡಿದ್ದಲ್ಲದೇ, ನಾಲ್ಕು ಕಾರ್ನಿಯಾಗಳು ನಾಲ್ಕು ಮಂದಿಗೆ ಕಣ್ಣಿನ ದೃಷ್ಟಿಯನ್ನು ಮತ್ತೆ ನೀಡುವಲ್ಲಿ ಸಹಕಾರಿಯಾಗಿವೆ ಎಂದವರು ಹೇಳಿದ್ದಾರೆ.

56 ವರ್ಷ ಪ್ರಾಯದ ವೆಲೇರಿಯನ್ ಡಿಸೋಜ ಅವರು ಉಡುಪಿಯ ಕುಂಜಿಬೆಟ್ಟಿನವರಾಗಿದ್ದು, ಇವರು ನ.3ರಂದು ರಾತ್ರಿ ಪೆರಂಪಳ್ಳಿ ಬಳಿ ನಡೆದ ರಸ್ತೆ ಅಫಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು 10:20ಕ್ಕೆ ಕೆಎಂಸಿಯ ತೀವ್ರನಿಗಾ ಘಟಕಕ್ಕೆ ದಾಖಲಾಗಿದ್ದರು. ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗ ಇವರ ಚಿಕಿತ್ಸೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಅವರು ಬದುಕುಳಿಯುವ ಸಾಧ್ಯತೆ ಇಲ್ಲವಾದ್ದರಿಂದ ‘ಹ್ಯೂಮನ್ ಆರ್ಗನ್ ಆ್ಯಕ್ಟ್ 1994’ರಂತೆ ಮಾನವ ಅಂಗಾಂಗ ದಾನಕ್ಕೆ ಅನುಸರಿಸಬೇಕಾದ ಕ್ರಮದಂತೆ ನ.4ರಂದು ಅಪರಾಹ್ನ 2:30ಕ್ಕೆ ನಾಲ್ವರು ಹಿರಿಯ ವೈದ್ಯರು ರೋಗಿಯನ್ನು ‘ಮೆದುಳು ನಿಷ್ಕೃಿಯ’ವೆಂದು ಘೋಷಿಸಿದ್ದು, ಅದೇ ದಿನ ರಾತ್ರಿ 9:40ಕ್ಕೆ ಎರಡನೇ ಬಾರಿ ಇದೆ ಘೋಷಣೆ ಮಾಡಿದ್ದರು.

ಈ ನಡುವೆ ವಲೇರಿಯನ್ ಅವರ ಪತ್ನಿ ತನ್ನ ಪತಿಯ ಅಂಗಾಂಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದರಂತೆ ಗಂಡನ ಕಣ್ಣಿನ ಎರಡೂ ಕಾರ್ನಿಯಾ, ಎರಡು ಕಿಡ್ನಿ ಹಾಗೂ ಲೀವರ್‌ಗಳನ್ನು ‘ಹ್ಯುಮನ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಷನ್ ಆ್ಯಕ್ಟ್ 1994’ರ ಮಾರ್ಗದರ್ಶನದಂತೆ ದಾನ ಮಾಡಲು ಮುಂದಾದರು.

ಹೀಗೆ ವಲೇರಿಯನ್ ದಾನ ನೀಡಿದ ಎರಡು ಕಿಡ್ನಿಗಳಲ್ಲಿ ಒಂದಕ್ಕೆ ಮಣಿಪಾಲ ಕೆಎಂಸಿಯಲ್ಲಿ ದಾಖಲಾದ ರೋಗಿಯೊಬ್ಬರನ್ನು ದಾನಿಯಾಗಿ ಗುರುತಿಸಲಾಗಿದೆ. ಇನ್ನೊಂದನ್ನು ಮಂಗಳೂರಿನ ಎಜೆ ಆಸ್ಪತ್ರೆಯ ರೋಗಿಗೆ ನೀಡಲಾಗುವುದು. ಲಿವರ್‌ನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಯ ರೋಗಿಯೊಬ್ಬರಿಗೆ ಜೋಡಿಸಲಾಗುವುದು.

ಅಂಗಾಂಗಗಳನ್ನು ಶನಿವಾರ ಅಪರಾಹ್ನ 3:30ರ ಸುಮಾರಿಗೆ ಮಣಿಪಾಲ ಆಸ್ಪತ್ರೆಯಿಂದ ಮಂಗಳೂರು ವಿಮಾನನಿಲ್ದಾಣಕ್ಕೆ, ಬಳಿಕ ಅಲ್ಲಿಂದ ಬೆಂಗಳೂರಿಗೆ ಹಾಗೂ ಮಣಿಪಾಲದಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯೊಂದಿಗೆ ಕೊಂಡೊಯ್ಯಲಾಯಿತು. ಅಂಗಾಂಗ ಕಸಿಯನ್ನು ಮಣಿಪಾಲದ ಸರ್ಜನ್‌ಗಳಾದ ಡಾ.ಪದ್ಮರಾಜ್ ಹೆಗ್ಡೆ, ಡಾ.ಅರುಣ್ ಚಾವ್ಲ, ಡಾ.ಬಿ.ಎಂ.ಜೀಶನ್, ಡಾ.ಅನಿತಾ ಶೆಣೈ ಹಾಗೂ ಬೆಂಗಳೂರು ಅಪೋಲೊ ಆಸ್ಪತ್ರೆಯ ಡಾ.ಮಹೇಶ್ ಗೋಪಶೆಟ್ಟಿ ನಡೆಸಿದರು.

ಅಂಗಾಂಗ ದಾನ ಮಾಡಿದ ಮತ್ತೊಬ್ಬ ರೋಗಿ ಕಿಶೋರ್ (45) ಬ್ರಹ್ಮಾವರದವರು. ಇವರು ನ.3ರಂದು ರಾತ್ರಿ 11:45ಕ್ಕೆ ಜಾರಿಬಿದ್ದು ತಲೆಗೆ ತೀವ್ರವಾದ ಏಟು ಬಿದ್ದು ಮಣಿಪಾಲ ಕೆಎಂಸಿಯ ಐಸಿಯುಗೆ ದಾಖಲಾಗಿದ್ದರು. ಇವರು ಸಹ ನ್ಯೂರೋಸರ್ಜರಿ ವಿಭಾಗದಿಂದ ಚಿಕಿತ್ಸೆ ಪಡೆದರು. ಇವರ ಮೆದುಳು ನಿಷ್ಕೃಿಯತೆಯನ್ನು ನ.4ರ ಸಂಜೆ 6ಗಂಟೆಗೆ ನಾಲ್ವರು ಹಿರಿಯ ವೈದ್ಯರು ಘೋಷಿಸಿದ್ದು, ನ.5ರಂದು ಅಪರಾಹ್ನ 12 ಗಂಟೆಗೆ ಎರಡನೇ ಬಾರಿ ಘೋಷಿಸಲಾಗಿತ್ತು.

ಕಿಶೋರ್ ಅವರ ಸಹೋದರ ಮತ್ತು ಸಹೋದರಿಯರು ಅಂಗಾಂಗ ದಾನ ನೀಡಲು ಒಪ್ಪಿಗೆ ಸೂಚಿಸಿದ್ದು, ಇದರಂತೆ ಅದೇ ದಿನ ಸಂಜೆ 6:30ಕ್ಕೆ ಬೆಂಗಳೂರು ಬಿಜಿಎಸ್ ಆಸ್ಪತ್ರೆಯ ವೈದ್ಯರು ಬಂದು ಅಂಗಾಂಗ ಕಸಿ ಮಾಡಿದರು. ಅವರ ಎರಡು ಕಿಡ್ನಿಗಳನ್ನು ಕೆಎಂಸಿ ಮಣಿಪಾಲ ಹಾಗೂ ಕೆಎಂಸಿ ಮಂಗಳೂರಿನ ರೋಗಿಗಳಿಗೆ ನೀಡಲಾಗಿದೆ. ಲೀವರ್‌ನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿನ ರೋಗಿಗೆ ನೀಡಲಾಯಿತು ಎಂದು ಡಾ.ದಯಾನಂದ್ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News