ಬುದ್ಧಿವಂತರ ಜಿಲ್ಲೆಯಲ್ಲಿ ಕೋಮು ಸಂಘರ್ಷ ದುರಂತ: ಬೊರಸೆ
ಪುತ್ತೂರು, ನ.7: ಜಿಲ್ಲೆಯ ಜನರು ಬುದ್ಧಿವಂತರು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತರು. ಇಲ್ಲಿನ ಜನರಿಗೆ ಯೋಚಿಸುವ ಬುದ್ಧಿವಂತಿಕೆ ಇದೆ. ಆದರೂ ಇಂತಹ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು ನಡೆಯುತ್ತಿರುವುದು ದುರಂತ ಎಂದು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಸೌಹಾರ್ದ ಸಮಿತಿಯ ವತಿಯಿಂದ ಬಡಗನ್ನೂರು ಗ್ರಾ.ಪಂ. ಸಭಾಂಗಣದಲ್ಲಿ ರವಿವಾರ ಸಂಜೆ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಶಾಂತಿಭಂಗ ಆಗದ ರೀತಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಯಾರೂ ಕೂಡ ಗಾಳಿಸುದ್ದಿಗಳಿಗೆ ಕಿವಿಕೊಡದೆ ಸಮಾಜದ ಹಿತ ಕಾಪಾಡುವಲ್ಲಿ ಪ್ರಯತ್ನಿಸಬೇಕು. ಪ್ರತಿ ಹಳ್ಳಿ, ಗ್ರಾಮಗಳಲ್ಲೂ ಸೌಹಾರ್ದ ಸಮಿತಿಯ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನಮ್ಮಲ್ಲಿ ಒಳ್ಳೆಯ ಚಿಂತನೆ, ಆಲೋಚನೆ ಇದ್ದರೆ ನಮಗೆ ಯಾವುದೇ ಪೊಲೀಸ್, ಕೋರ್ಟ್, ಸೌಹಾರ್ದ ಸಭೆಗಳ ಅಗತ್ಯವಿಲ್ಲ. ಯಾವಾಗ ನಾವು ನಮ್ಮ ಧರ್ಮವೇ ಶ್ರೇಷ್ಠ ಎಂದುಕೊಳ್ಳುತ್ತೇವೋ ಆಗ ಧರ್ಮ ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ. ಧರ್ಮ ಸಂಘರ್ಷದ ಮೂಲಕ ಕೋಮು ಭಾವನೆಯನ್ನು ಕೆರಳಿಸುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮ, ಮತ ಎಂಬುದನ್ನು ನೋಡಬಾರದು ಎಂದು ಹೇಳಿದರು.
ಮಾಜಿ ಮಂಡಲ ಪ್ರಧಾನ ಬಾಲಕೃಷ್ಣ ರೈ ಕುದ್ಕಾಡಿ ಅಧ್ಯಕ್ಷತೆ ವಹಿಸಿದ್ದರು.
ಕೋಮುವಾದವನ್ನು ಪ್ರಚೋದಿಸುವಾತ ಮುಸ್ಲಿಂ ಅಲ್ಲ: ಹುಸೈನ್ ದಾರಿಮಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂಬ್ರ ಕೆಐಸಿಯ ಮ್ಯಾನೇಜರ್ ಕೆ.ಆರ್. ಹುಸೈನ್ ದಾರಿಮಿ ಮಾತನಾಡಿ, ನಾರಾಯಣ ಗುರುಗಳ ತತ್ವವನ್ನು ಪಾಲಿಸಬೇಕಾದ ಪಡುಮಲೆಯಂತಹ ಊರಲ್ಲಿ ಶಾಂತಿಭಂಗ ಆಗುತ್ತಿರುವುದು ದುರಂತ. ಒಬ್ಬ ನೈಜ ಹಿಂದೂ ಯಾವತ್ತೂ ಧರ್ಮ ವಿರೋಧಿ ಆಗಲು ಸಾಧ್ಯವಿಲ್ಲ. ಅದೇ ರೀತಿ ಕೋಮುವಾದವನ್ನು ಪ್ರಚೋದಿಸುವಾತ ಮುಸ್ಲಿಂ ಅಲ್ಲ. ಇಂತಹ ವ್ಯಕ್ತಿಯನ್ನು ಇಸ್ಲಾಂ ಒಪ್ಪುವುದಿಲ್ಲ. ಕೇಸರಿ, ಹಸಿರು ಕಟ್ಟೆಯನ್ನು ನಿರ್ಮಿಸುವ ಬದಲು ನಾವೆಲ್ಲರೂ ಸಂವಿಧಾನವನ್ನು ಎತ್ತಿ ಹಿಡಿಯುವ ಕಟ್ಟೆ ನಿರ್ಮಾಣ ಮಾಡಬೇಕಾಗಿದೆ. ಆ ಮೂಲಕ ಇಡೀ ದೇಶವನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದರು.
ಮಾನವೀಯ ಧರ್ಮ ನಮ್ಮದಾಗಬೇಕು: ಅಸ್ಸಿಸ್ಸಿ ಅಲ್ಮೇಡಾ
ಮರೀಲ್ ಚರ್ಚ್ನ ಧರ್ಮಗುರು ರೆ. ಫಾ.ಪ್ರಾನ್ಸಿಸ್ ಅಸ್ಸಿಸ್ಸಿ ಡಿ.ಅಲ್ಮೇಡ ಮಾತನಾಡಿ, ತಪ್ಪುಮಾಡುವ ವ್ಯಕ್ತಿಗೆ ಧರ್ಮ ಇಲ್ಲ. ಆತನಿಗೆ ದೇವರ ಭಯ ಇಲ್ಲ . ಆದ್ದರಿಂದ ಆತನಿಗೆ ಶಿಕ್ಷೆ ಕೊಡಲೇಬೇಕು. ತಪ್ಪುಮಾಡಿದವ ನನ್ನ ಧರ್ಮದವ, ನನ್ನ ಜಾತಿಯವ, ನನ್ನ ಪಕ್ಷದವ ಎಂಬುದನ್ನು ಬಿಟ್ಟು ಅತ ತಪ್ಪುಮಾಡಿದವ ಆತನಿಗೆ ಶಿಕ್ಷೆ ಕೊಡಿ ಎಂದು ನಾವು ಹೇಳಬೇಕಾಗಿದೆ. ಮಾನವೀಯ ಧರ್ಮವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಆದರೆ ಇಂದು ನಾವು ನಮ್ಮ ಮಾನವೀಯ ಧರ್ಮಕ್ಕೆ, ಮನಸ್ಸಿಗೆ, ಧರ್ಮಕ್ಕೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.
ವೇದಿಕೆಯಲ್ಲಿ ಸೌಹಾರ್ದ ಸಮಿತಿ ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು, ಸಂಪ್ಯ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಅಬ್ದುಲ್ ಖಾದರ್, ಈಶ್ವರಮಂಗಲ ಹೊರಠಾಣೆಯ ಎಎಸ್ಸೈ ವಿಠಲ ರೈ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸೌಹಾರ್ದ ಸಮಿತಿ ಗೌರವ ಸಲಹೆಗಾರ ರಾಮಚಂದ್ರ ಅಮಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ರೈ ಕಟ್ಟಾವು ಸ್ವಾಗತಿಸಿದರು. ಸೌಹಾರ್ದ ಸಮಿತಿಯ ನೂತನ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ ವಂದಿಸಿದರು.
ಬಡಗನ್ನೂರು ಸೌಹಾರ್ದ ಸಮಿತಿ ರಚನೆ
ಈ ಸಂದರ್ಭದಲ್ಲಿ ಸೌಹಾರ್ದ ಸಮಿತಿ ಆಶ್ರಯದಲ್ಲಿ ಸೌಹಾರ್ದ ಸಮಿತಿ ಬಡಗನ್ನೂರು ಶಾಖೆಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ರವಿರಾಜ ರೈ ಸಜಂಕಾಡಿ, ಉಪಾಧ್ಯಕ್ಷರಾಗಿ ಕೆ.ಪಿ. ಅಲಿಕುಂಞ್ ಹಾಜಿ, ಕಾಸ್ಮೀರ್ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಕೆ.ಸಿ., ಕಾರ್ಯದರ್ಶಿಯಾಗಿ ಗುರುಪ್ರಸಾದ್ ರೈ ಕುದ್ಕಾಡಿ, ಜತೆ ಕಾರ್ಯದರ್ಶಿಯಾಗಿ ಡೆನ್ನಿಸ್ ಡಿಸೋಜ ಮತ್ತು ಸಲಾವುದ್ದೀನ್, ಕೋಶಾಧಿಕಾರಿಯಾಗಿ ಸತೀಶ್ ರೈ ಕಟ್ಟಾವು, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎ. ರಹ್ಮಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲಕೃಷ್ಣ, ಚಂದ್ರಶೇಖರ ಗೌಡ, ಸಂತಾನ್ ಪಿಂಟೋ, ಇಬ್ರಾಹೀಂ ಪಿ.ಬಿ, ಜಯರಾಜ್ ಶೆಟ್ಟಿ, ಭಾಸ್ಕರ್, ಸಿರಾಜುದ್ಧೀನ್, ಉದಯ ಕುಮಾರ್, ಕುಂಞಣ್ಣ, ಗೌರವ ಸಲಹೆಗಾರರಾಗಿ ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಮತ್ತು ಕುದ್ಕಾಡಿ ಬಾಲಕೃಷ್ಣ ರೈ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ಗುಲಾಬಿ ನೀಡುವ ಮೂಲಕ ಗೌರವಿಸಿದರು.