ಸಚಿವ ಬೇಗ್ ಬಗ್ಗೆ ಕರಂದ್ಲಾಜೆ ಆರೋಪ ಕೀಳುಮಟ್ಟದ್ದು : ಹಾಜಿ ಹಮೀದ್ ಕಂದಕ್
ಉಡುಪಿ, ನ.7: ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ರುದ್ರೇಶ್ ಹತ್ಯೆಯಲ್ಲಿ ಸಚಿವ ರೋಶನ್ ಬೇಗ್ ಕೈವಾಡ ಇರುವುದಾಗಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಆರೋಪ ಅತ್ಯಂತ ಬೇಜವಾಬ್ದಾರಿಯುತ ಹಾಗೂ ಖಂಡನೀಯ ಎಂದು ಕರ್ನಾಟಕ ಮುಸ್ಲಿಂ ಪರಿಷತ್ನ ಅಧ್ಯಕ್ಷ ಹಾಜಿ ಹಮೀದ್ ಕಂದಕ್ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ತನ್ನ ಸಂಸದ ಕಳೆದುಕೊಳ್ಳುವ ಹತಾಶೆ ಯಿಂದ ಇಂತಹ ಹೇಳಿಕೆಯನ್ನು ನೀಡುವ ಮೂಲಕ ಶೋಭಾ ಕೀಳು ಮಟ್ಟದ ಪ್ರಚಾರ ಪಡೆಯಲು ಮುಂದಾಗಿರುವುದು ಶೋಚನೀಯ ಎಂದರು.
ತೀರ್ಥಹಳ್ಳಿಯ ನಂದಿತಾಳ ಅಸಹಜ ಸಾವು, ಮೂಡಬಿದ್ರಿಯ ಪ್ರಶಾಂತ್, ರುದ್ರೇಶ್ ಹತ್ಯೆ ಬಗ್ಗೆ ಮಾತನಾಡುವ ಇವರಿಗೆ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ಕೊಂದ ಯುವತಿಯರು, ಬಂಟ್ವಾಳದ ಹರೀಶ್, ಕೆಂಜೂರಿನ ಪ್ರವೀಣ್ ಪೂಜಾರಿ ಕೊಲೆಗಳು ಕಾಣಿಸುತ್ತಲೇ ಇಲ್ಲ. ಬೇಗ್ ಕುರಿತು ಸುಳ್ಳು ಆರೋಪ ಮಾಡಿರುವ ಶೋಭಾ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು. ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಶೋಭಾ ಕರಂದ್ಲಾಜೆ ಸಚಿವರ ಮೇಲೆ ಯಾವುದೇ ಆಧಾರವಿಲ್ಲದೆ ಈ ರೀತಿ ಆರೋಪ ಹೊರಿಸಿರುವುದು ಖಂಡನೀಯ. ಅವರಲ್ಲಿ ದಾಖಲೆಗಳಿದ್ದರೆ ಅದನ್ನು ತನಿಖಾಧಿಕಾರಿಗಳಿಗೆ ನೀಡಲಿ. ಅದು ಬಿಟ್ಟು ಮಾಧ್ಯಮದ ಮುಂದೆ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಖಾಸಿಂ ಬಾರಕೂರು, ಇಲ್ಯಾಸ್ ಕಾಪು, ಮುಹಮ್ಮದ್ ಕಬೀರ್ ಉಪಸ್ಥಿತರಿದ್ದರು.