×
Ad

ರಾಹುಲ್ ಅಧ್ಯಕ್ಷರಾಗುವುದು ಮೋದಿಗೆ ಭಯ!

Update: 2016-11-08 16:00 IST

ಮಂಗಳೂರು, ನ.8: ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಯಭೀತರಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷರಾಗಿ ಗಾಂಧಿ ಕುಟುಂಬದ ರಾಹುಲ್‌ರನ್ನೇ ನೇಮಕ ಮಾಡಿರುವ ಕುರಿತಂತೆ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
ರಾಹುಲ್ ಗಾಂಧಿ ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷ ಉಳಿಯದು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ಟೀಕಿಸಲು ವಿಪಕ್ಷಗಳಿಗೆ ಹಕ್ಕಿಲ್ಲ ಎಂದ ಅವರು, ರಾಹುಲ್ ಪಕ್ಷ ಹಾಳು ಮಾಡುತ್ತಾರಾದರೆ ಮೋದಿ ಮತ್ತು ಬಿಜೆಪಿಗೆ ಭಯವೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರುವುದೇ ಗಾಂಧಿ ಕುಟುಂಬದಿಂದ. ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಕಟ್ಟುವ ಬಗ್ಗೆ ಆ ಕುಟುಂಬದ ಮೇಲೆ ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸವಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ ಏಕಶ್ರೇಣಿ ಏಕಪಿಂಚಣಿ’ ಮೊದಲ ಬಾರಿ ಪ್ರಸ್ತಾಪಿಸಿದ್ದು ರಾಹುಲ್ ಗಾಂಧಿ. ಸೈನಿಕರಿಗೆ ಮೂರು ಬಾರಿ ಸಂಬಳ ಏರಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತಿದ್ದಾರೆ, ರಾಹುಲ್ ಗಾಂಧಿಯನ್ನು ದೂಷಿಸತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಯವರು ಕಾಂಗ್ರೆಸ್‌ಗೆ ವಿಷನ್ ಇಲ್ಲ ಎಂದಿದ್ದರು. ಈಗ ಅವರಿಗೆ ವಿಷನ್ ಇಲ್ಲ. ದೇಶದ ಚುಕ್ಕಾಣಿ ಯುವಜನತೆಗೆ ನೀಡಬೇಕು ಎನ್ನುತ್ತಿದ್ದ ಮೋದಿ ಸಹಿತ ಬಿಜೆಪಿಗರು ಸಾವಿರ ಸಲ ಸುಳ್ಳು ಹೇಳಿ ಗೋಬೆಲ್ಸ್ ಆಗುತ್ತಿದ್ದಾರೆ.  ಹಿಂದೆ ಇಂದಿರಾಗಾಂಧಿಯನ್ನು ‘ಗುಂಗಿ’, ರಾಜೀವಗಾಂಧಿಯವರನ್ನ ‘ಪೈಲಟ್’ ಎಂದು ದೂಷಿಸಿದ್ದ ಅವರು ಬಳಿಕ ‘ದುರ್ಗಿ’, ಅಭಿವೃದ್ಧಿಯ ಹರಿಕಾರರು ಎಂದು ಹೊಗಳಿದ್ದ ಕುರಿತು ಮೋದಿ ಮತ್ತು ಬಿಜೆಪಿಗರು ಉತ್ತರ ನೀಡಲಿ ಎಂದು ಸವಾಲೆಸೆದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ದೇಶವನ್ನು ಕಟ್ಟಿ ಬೆಳೆಸಿದ ಕೊಡುಗೆ ಗಾಂಧಿ ಕುಟುಂಬಕ್ಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮೋತಿಲಾಲ್ ನೆಹರೂರವರಿಂದ, ಇಂದಿರಾಗಾಂಧಿವರೆಗೆ ಜೈಲುವಾಸ ಅನುಭವಿಸಿದ ನಾಯಕರಿದ್ದಾರೆ. ಕಾಂಗ್ರೆಸ್ ದೇಶಕ್ಕೆ ನಾಯಕತ್ವ ಮತ್ತು ಹೋರಾಟವನ್ನು ನೀಡಿದ್ದು ಹೊರತು ಬಿಜೆಪಿಯಲ್ಲ. ಆದರೆ ಕಾಂಗ್ರೆಸ್ ಪಕ್ಷದ ಸರ್ದಾರ್ ಪಟೇಲರನ್ನು ಬಿಜೆಪಿಗರು ನಮ್ಮ ನಾಯಕರೆನ್ನುವ ಮೂಲಕ ಕಾಂಗ್ರೆಸಿಗರನ್ನೇ ನಮ್ಮವರೆಂದು ಒಪ್ಪಿಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಮೋದಿ ಉತ್ತರ ನೀಡಬೇಕು ಎಂದು ಅವರು ಹೇಳಿದರು.
ಎನ್‌ಡಿಟಿವಿ ಪ್ರಸಾರ ತಡೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪೂಜಾರಿ, ಮೋದಿ ಸರ್ಕಾರಕ್ಕೆ ಜಗತ್ತಿನ ಯಾರ ಭಯವೂ ಇಲ್ಲವಾಗಿದೆ. ಅವರ ಮಾತನ್ನು ವಿರೋಧಿಸುವವರನ್ನು ಈ ರೀತಿ ಮಾಡುತ್ತಾರೆ. ಅವರ ಮಾತನ್ನು ಕೇಳದ ಯಾವುದೇ ಮಾಧ್ಯಮವನ್ನೂ ಕೂಡಾ ನಾಳೆ ಇದೇ ರೀತಿ ಹತ್ತಿಕ್ಕಲಿದ್ದಾರೆ. ರಾಜಕಾರಣಿಗಳಿಗೆ ಮಾಧ್ಯಮದ ಭಯ ಬೇಕು, ಇಲ್ಲವಾದಲ್ಲಿ ದೇಶವನ್ನೇ ಹರಾಜು ಹಾಕುವರು ಎಂದು ಹೇಳಿದರು.
ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ನಿರ್ಧಾರ ಸ್ವಾಗತಾರ್ಹ. ಆದರೆ ಜನ್ಮ ಕೊಟ್ಟ ತಾಯಿಯನ್ನು ದೂರವಿರಿಸುವ ಪ್ರಯತ್ನವಾಗಿ ಸಂಘಪರಿವಾರ ಇದನ್ನು ವಿರೋಧಿಸುತ್ತಿರುವುದು ಅಕ್ಷಮ್ಯ ಅಪರಾದ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕಳ್ಳಿಗೆ ತಾರನಾಥ ಶೆಟ್ಟಿ ಮತ್ತು ಯು. ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News