ಎರಡನೇ ತರಗತಿ ವಿದ್ಯಾರ್ಥಿ ಅಪಹರಣ ಪ್ರಕರಣ: ಆರೋಪಿ ಬಂಧನ
ಮಂಜೇಶ್ವರ,ನ.12 : ಎರಡನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ನಡೆದು ಹೋಗುತ್ತಿರುವ ದಾರಿ ಮಧ್ಯೆ ಆಕೆಯನ್ನು ಹಿಡಿದೆಳೆದು ಕಾರಲ್ಲಿ ಕೂಡಿ ಹಾಕಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಮುಳಿಯಾರು ಕೆಟ್ಟುಂಕಲ್ಲಿ ನಿವಾಸಿ ಎಂ ಕೆ ಮೊಯ್ದೀನ್ (33) ಬಂಧಿತ ಆರೋಪಿ.
ವಿದ್ಯಾರ್ಥಿನಿಯನ್ನು ಅಪಹರಿಸಲು ಬಳಸಿದ ಕಪ್ಪು ಬಣ್ಣದ ಇಂಡಿಕಾ ಕಾರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದಿದ್ದಾರೆ.
ಮಂಗಳವಾರದಂದು ಬೆಳಗ್ಗೆ 9.30 ರ ಅಂದಾಜಿಗೆ ಈ ಘಟನೆ ನಡೆದಿತ್ತು.ಮೊದಲು ಕಾರಲ್ಲಿ ಬಾಲಕಿಯನ್ನು ಹತ್ತುವಂತೆ ವಿನಂತಿಸಿಕೊಂಡ ಆರೋಪಿ ಬಳಿಕ ಬಾಲಕಿ ನಿರಾಕರಿಸಿದಾಗ ಆಕೆಯನ್ನು ಬಲವಂತವಾಗಿ ಕಾರಲ್ಲಿ ಹಾಕಿ ಅಪಹರಿಸಿದ್ದನು.ಕಾರಲ್ಲಿ ಆರೋಪಿ ಬಾಲಕಿಗೆ ಕಿರುಕುಳ ನೀಡಲು ಪ್ರಯತ್ನಿಸಿರುವುದಾಗಿ ಬಾಲಕಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಳು. ಬಾಲಕಿ ಬೊಬ್ಬೆ ಹಾಕಿದಾಗ ಕಂಗಾಲಾದ ಆರೋಪಿ ಬಳಿಕ ಬಾಲಕಿಯನ್ನು ಶಾಲಾ ಪರಿಸರದಲ್ಲಿ ಉಪೇಕ್ಷಿಸಿ ಪರಾರಿಯಾಗಿದ್ದ. ಬಳಿಕ ಬಾಲಕಿ ಅಧ್ಯಾಪಕರಲ್ಲಿ ವಿಷಯ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಕಾರ್ಯಾಚರಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.