ಯುವತಂತ್ರಜ್ಞರ ಜ್ಞಾನ ಅಭಿವೃದ್ಧಿಗೆ ಬಳಕೆಯಾಗಲಿ: ಶಿವಕುಮಾರ್
ಮಂಗಳೂರು, ನ.12: ಯುವ ತಂತ್ರಜ್ಞರ ಜ್ಞಾನ ಮತ್ತು ತಾಂತ್ರಿಕ ಪರಿಣತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಪೆಪ್ಸಿ ಕೋ ಇಂಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿ. ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಶಿವಕುಮಾರ್ ಕರೆ ನೀಡಿದರು.
ಸುರತ್ಕಲ್ನಲ್ಲಿರುವ ಎನ್ಐಟಿಕೆಯ 14ನೆ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಮುಂದಿನ ಮೂರು ದಶಕಗಳಲ್ಲಿ ಜಗತ್ತಿನಲ್ಲಿ ಭಾರತ ಅತ್ಯಂತ ಹೆಚ್ಚು ಯುವ ಜನರನ್ನು ಹೊಂದಿರುವ ಹೆಗ್ಗಳಿಕೆ ಹೊಂದಿರುವುದರಿಂದ ಈ ಮಾನವ ಸಂಪನ್ಮೂಲದ ಮೂಲಕ ಸಮಾಜವನ್ನು ಮುನ್ನಡೆಸಬೇಕಾದರೆ ನೈತಿಕ ವೌಲ್ಯ ಹಾಗೂ ತಂತ್ರಜ್ಞಾನದ ಪರಿಣತಿ ಹೊಂದಿದ ಸಮಾಜವನ್ನು ಮುನ್ನಡೆಸಬಲ್ಲ ಯುವ ಜನತೆಯ ಅಗತ್ಯವಿದೆ ಎಂದರು.
ಜ್ಞಾನ ಎನ್ನುವುದು ವೌಲ್ಯ ಹೊರತು ಅದೊಂದು ಸರಕೆಂದು ಪರಿಭಾವಿಸಬಾರದು.ವಿಷಯದ ಬಗೆಗಿನ ವಿಮರ್ಶಾತ್ಮಕ ಚಿಂತನೆ, ಐದು ವರ್ಷದ ಮಗುವಿನಲ್ಲಿರುವ ಕುತೂಹಲ, ತಿಳಿದುಕೊಳ್ಳಬೇಕು ಎಂಬ ಹಂಬಲ ಯುವ ತಂತ್ರಜ್ಞರಲ್ಲಿರಬೇಕು. ನಮ್ಮ ಬೆಳವಣಿಗೆಗೆ ಕಾರಣರಾದ ಹೆತ್ತವರು, ಸಮಾಜದ ಕೊಡುಗೆ ಯನ್ನು ಮರೆಯಬಾರದು. ಹಣ ಸಂಪತ್ತು ನಮ್ಮ ಬದುಕಿನಲ್ಲಿ ಅಗತ್ಯವಿದೆ ಆದರೆ ಅದೊಂದೇ ಸಾಲದು. ಜಾಗತಿಕ ನೆಲೆಯಲ್ಲಿ ನಮ್ಮ ಜ್ಞಾನ, ವೌಲ್ಯಗಳ ಮೂಲಕ ಇತರರಿಗೆ ಯಾವ ರೀತಿಯ ಕೊಡುಗೆ ನೀಡುತ್ತೇವೆ ಎನ್ನುವ ಮೂಲಕ ನಾವು ಇತರರಿಗೆ ಮಾದರಿಯಾಗಬೇಕು ಎಂದು ಶಿವಕುಮಾರ್ ಹೇಳಿದರು.
*14ನೆ ಘಟಿಕೋತ್ಸವ, 1,597 ಪದವಿ ಪ್ರಧಾನ: ಘಟಿಕೋತ್ಸವದಲ್ಲಿ 802 ಬಿಟೆಕ್, 544 ಎಂಟೆಕ್, 22 ಎಂಟೆಕ್(ಸಂಶೋಧನೆ), 90 ಎಂಸಿಎ, 37 ಎಂಬಿಎ, 45 ಎಂಸ್ಸಿ, 57 ಪಿಎಚ್ಡಿ ಪದವಿಧರರಿಗೆ ಪದವಿ ಘೋಷಣೆ ಮಾಡಲಾಯಿತು. ಈ ಪೈಕಿ 1,001 ಮಂದಿಗೆ ನೇರವಾಗಿ ಪದವಿ ನೀಡಲಾಯಿತು. 41 ಮಂದಿಗೆ ಪದವೀಧರರಿಗೆ ಚಿನ್ನದ ಪದಕ ನೀಡಲಾಯಿತು. 23 ವಿಶೇಷ ಪ್ರಶಸ್ತಿಯನ್ನು ಇದೇ ಸಂದರ್ಭ ವಿತರಿಸಲಾಯಿತು. ಈ ಪೈಕಿ ಬಿಟೆಕ್ ಪದವೀಧರ ಅಜಯ ವಿ. ಕೃಷ್ಣನ್ ನಾಲ್ಕು ಹಾಗೂ ಮಾನಸ ಭಟ್ಎಂ ಭಟ್ ಹಾಗೂ ಬಿಟೆಕ್ ವಿಭಾಗದ ಮಾನಸ ಭಟ್ ಕೆ.ಐ ತಲಾ 3 ಚಿನ್ನದ ಪಡೆದುಕೊಂಡಿದ್ದಾರೆ.
ಎನ್ಐಟಿಕೆಯ ಆಡಳಿತ ಮಂಡಳಿ ಅಧ್ಯಕ್ಷೆ ವನಿತಾ ನಾರಾಯಣನ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಎನ್ಯಟಿಕೆಯ ಪ್ರಭಾರ ನಿರ್ದೇಶಕ ಪ್ರೊ.ಕೆ.ಎನ್.ಲೋಕೇಶ್ ಸ್ವಾಗತಿಸಿದರು.