ಎತ್ತಿನಹೊಳೆ ವಿರುದ್ಧ ಡಿ.10ರಿಂದ ರಥಯಾತ್ರೆ: ಸಂಸದ ನಳಿನ್
ಬೆಳ್ತಂಗಡಿ, ನ.14: ಎತ್ತಿನಹೊಳೆಯೆಂಬ ನೇತ್ರಾವತಿ ತಿರುವು ಹಾಗೂ ಕುಮಾರಧಾರಾ ತಿರುವು ಯೋಜನೆಗಳ ಮೂಲಕ ದ.ಕ. ಜಿಲ್ಲೆಯ ಜನತೆಯನ್ನು ತುಳಿಯುವ ತಂತ್ರಗಾರಿಕೆಯನ್ನು ರಾಜ್ಯ ಸರಕಾರ ನಡೆಸುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಡಿ. 10, 11 ಮತ್ತು 12ರಂದು ಜಿಲ್ಲಾದ್ಯಂತ ರಥಯಾತ್ರೆ ನಡೆಸಲಾಗುವುದು ಎಂದು ಸಂಸದ ನಳೀನ್ ಕುಮಾರ್ ಕಟೀಲು ಹೇಳಿದರು.
ಅವರು ಸೋಮವಾರ ತಾಲೂಕಿನಲ್ಲಿನ ಗ್ರಾಮ ಭೇಟಿ ಸಂದರ್ಭ ಬೆಳ್ತಂಗಡಿ ಬಿಜೆಪಿ ಕಚೇರಿಗೆ ಆಗಮಿಸಿ ಮಾಧ್ಯಮದರೊಂದಿಗೆ ಮಾತನಾಡಿದರು.
ಎತ್ತಿನಹೊಳೆ ವಿರುದ್ಧ ಪಂಚತೀರ್ಥ, ಸಪ್ತಕ್ಷೇತ್ರ ಎಂಬ ಹೆಸರಿನಲ್ಲಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಇದಾದ ಬಳಿಕ ಒಂದು ತಿಂಗಳಲ್ಲಿ ಸರಕಾರ ಸ್ಪಂದನೆ ತೋರದಿದ್ದಲ್ಲೆ ಜ.26ರಂದು ತೀವ್ರ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಇದಕ್ಕೆ ಜಿಲ್ಲೆಯ ಜನತೆಯೂ ಕೈ ಜೋಡಿಸಬೇಕು ಎಂದರು ಇನ್ನು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಹದೆಗೆಟ್ಟಿದೆ. ಆಡಳಿತ ಯಂತ್ರ ನಿಂತು ಹೋಗಿದೆ. ಸರಕಾರದ ಅಧಿಕಾರಿಗಳು ಸರಕಾರದ ಮಾತನ್ನೇ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ ಪೋಲಿಸ್ ಇಲಾಖೆಯೇ ಗೃಹಬಂಧನದಲ್ಲಿರುವ ಹಾಗೆ ಕಾಣುತ್ತಿದೆ. ಸರಕಾರ ಹಿಂಬಾಗಿಲಿನಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರನ್ನು ಭಯಭೀತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಜಿಲ್ಲಾ ಪ್ರಧಾನ ವಕ್ತಾರ ಜಿತೇಂದ್ರ ಕೊಟ್ಟಾರಿ, ಉಪಾಧ್ಯಕ್ಷ ಶಾರದಾ ರೈ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಮಾಜಿ ಶಾಸಕ ಪ್ರಭಾಕರ ಬಂಗೇರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ. ಕಾರ್ಯದರ್ಶಿ ಸೀತಾರಾಮ ನಾಯ್ಕ, ತಾಪಂ ಸದಸ್ಯ ವಿಜಯಗೌಡ, ಸುಧೀರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.