ಶೀಲಾ ದೀಕ್ಷಿತ್ ಅಳಿಯನಿಗೆ ಎರಡು ದಿನಗಳ ಪೊಲೀಸ್ ಕಸ್ಟಡಿ
ಹೊಸದಿಲ್ಲಿ,ನ.15: ಕಳ್ಳತನ ಮತ್ತು ಪತ್ನಿಯ ಆಸ್ತಿ ದುರುಪಯೋಗ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಳಿಯ ಸೈಯದ್ ಮೊಹಮ್ಮದ್ ಇಮ್ರಾನ್ಗೆ ಇಲ್ಲಿಯ ಮಹಾನಗರ ನ್ಯಾಯಾಲಯವು ಮಂಗಳವಾರ ಎರಡು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಇಮ್ರಾನ್ರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ಇಮ್ರಾನ್ರಿಂದ ಪ್ರತ್ಯೇಕವಾಗಿರುವ ಶೀಲಾ ದೀಕ್ಷಿತ್ ಪುತ್ರಿ ಲತಿಕಾ ಗಂಡನ ವಿರುದ್ಧ ಕೌಟುಂಬಿಕ ಹಿಂಸೆಯ ಆರೋಪವನ್ನೂ ಹೊರಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಲತಿಕಾ ಮತ್ತು ಇಮ್ರಾನ್ 1996ರಲ್ಲಿ ವಿವಾಹವಾಗಿದ್ದು, ಕಳೆದ ಹತ್ತು ತಿಂಗಳಿ ನಿಂದಲೂ ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಇಮ್ರಾನ್ ನೈನಿತಾಲ್ನಲ್ಲಿ ತನ್ನ ಒಡೆತನದಲ್ಲಿರುವ ಜಾಗದ ದಾಖಲೆಗಳನ್ನು ಕದ್ದೊಯ್ದಿರುವುದಾಗಿಯೂ ಲತಿಕಾ ಆರೋಪಿಸಿದ್ದಾರೆ. ಅಲ್ಲದೆ ದಿಲ್ಲಿಯ ಹೈಲೀ ರಸ್ತೆಯ ತನ್ನ ನಿವಾಸದಿಂದ ಚಿನ್ನಾಭರಣ ಸೇರಿದಂತೆ ತನ್ನ ಕೆಲವು ಸೊತ್ತುಗಳನ್ನೂ ಲಪಟಾಯಿ ಸಿದ್ದಾರೆ ಎಂದು ಆಕೆ ದೂರಿದ್ದಾರೆ.
ತನ್ನ ಸಂಬಂಧಿ ಮಹಿಳೆಯೋರ್ವಳು ಇಮ್ರಾನ್ ಜೊತೆ ಶಾಮೀಲಾಗಿದ್ದಾಳೆ ಎಂದು ಲತಿಕಾ ದೂರಿನಲ್ಲಿ ತಿಳಿಸಿದ್ದಾರೆ.