ಉಡುಪಿ: ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ

Update: 2016-11-15 18:19 GMT

ಉಡುಪಿ, ನ.15: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಬೆಂಗಳೂರಿನ ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ಟ್ರಸ್ಟ್ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ‘ವೀಣೆಯ ಬೆಡಗು’ನ್ನು ನ.18ರಿಂದ 20ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಮೈಸೂರು ವಿ.ಸುಬ್ರಹ್ಣಣ್ಯ ತಿಳಿಸಿದ್ದಾರೆ.

ಶ್ರೀಕೃಷ್ಣ ಮಠದ ಬಡಗುಮಳಿಗೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಂಗೀತದ 28 ಮಂದಿ ಪ್ರತಿಭಾನ್ವಿತ ಕಲಾವಿದರು ಐದು ಸಂಗೀತ ಕಚೇರಿಗಳಲ್ಲಿ ಗಾಯನ, ವೀಣೆ ಹಾಗೂ ವೇಣುವಾದನಗಳ ಮೂಲಕ ನಾದಝರಿಯನ್ನು ಹರಿಸಲಿದ್ದಾರೆ ಎಂದರು.

ಟ್ರಸ್ಟ್ ಕಳೆದ 12 ವರ್ಷಗಳಿಂದ ನಾಡಿನ ಹಿರಿಯ ಕಲಾವಿದರಿಗೆ ಎರಡು ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಕರ್ನಾಟಕ ಸಂಗೀತದ ಹಿರಿಯ ವಾದ್ಯ ಕಲಾವಿದರಿಗೆ ‘ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಶ್ರೇಷ್ಠ ಗಾಯಕರಿಗೆ ‘ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಗಳನ್ನು ನೀಡಲಾಗುತ್ತಿದೆ. ಪ್ರತಿ ಪ್ರಶಸ್ತಿ 50,000ರೂ. ನಗದು, ಶೇಷಣ್ಣನವರ ಪುತ್ಥಳಿ ಹಾಗೂ ಶಾಲು-ಫಲಪುಷ್ಪಗಳನ್ನು ಒಳಗೊಂಡಿದೆ ಎಂದರು.

ಈ ಬಾರಿ ಮೈಸೂರು ಬಾನಿಯ ಶ್ರೇಷ್ಠ ವೈಣಿಕ ವಿದ್ವಾನ್ ಡಿ.ಬಾಲಕೃಷ್ಣ ಇವರನ್ನು ‘ವೀಣೆ ಶೇಷಣ್ಣ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಖ್ಯಾತ ಗಾಯಕಿ ವಿದುಷಿ ಬಾಂಬೆ ಜಯಶ್ರೀ ಅವರನ್ನು ‘ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರೊ.ಸುಬ್ರಹ್ಮಣ್ಯ ಘೋಷಿಸಿದರು. ನ.19ರಂದು ಸಂಜೆ 6:00ಗಂಟೆಗೆ ನಡೆಯುವ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವೀಣೆಯ ಬೆಡಗು ಕಾರ್ಯಕ್ರಮವನ್ನು ನ.18ರಂದು ಸಂಜೆ 6:45ಕ್ಕೆ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಅದೇ ದಿನ ಬೆಂಗಳೂರು ಸಹೋದರರಾದ ಅಶೋಕ್ ಮತ್ತು ಹರಿಹರನ್‌ರಿಂದ ಯುಗಳ ಗಾಯನ ಸಂಜೆ 5:00ಕ್ಕೆ ಹಾಗೂ ಡಿ.ಬಾಲಕೃಷ್ಣ ಇವರಿಂದ ವೀಣಾ ಕಚೇರಿ ಸಂಜೆ 7ಕ್ಕೆ ನಡೆಯಲಿದೆ.

ನ.19ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಹಾಗೂ ಡಾ.ಎ.ಎಚ್.ರಾಮರಾವ್ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ 7:00ಕ್ಕೆ ಬಾಂಬೆ ಜಯಶ್ರೀ ಇವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.

ನ.20ರಂದು ಸಂಜೆ 5:00ಕ್ಕೆ ಮಡಿಕೇರಿಯ ಅವಳಿ ಸಹೋದರರಾದ ಹೇರಂಭ ಮತ್ತು ಹೇಮಂತ್‌ರಿಂದ ಯುಗಳ ವೇಣುವಾದನ ಕಚೇರಿ, 7:15ಕ್ಕೆ ಎನ್.ವಿಜಯಶಿವ ಇವರಿಂದ ಗಾಯನವಿದೆ. 6:45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ತಿಳಿಸಿದರು.

ಇದರೊಂದಿಗೆ ನ.18ರಿಂದ 20ರವರೆಗೆ ಮೂರು ದಿನಗಳ ಕಾಲ ವೀಣೆ ಶೇಷಣ್ಣನವರ ಅಪರೂಪದ ರಚನೆಗಳ ಕಾರ್ಯಾಗಾರವೊಂದು ಸೋದೆ ಮಠದಲ್ಲಿ ನಡೆಯಲಿದೆ. ಖ್ಯಾತ ಕಲಾವಿದ ರುದ್ರಪಟ್ಟಣ ಸಹೋದರರಲ್ಲಿ ಓರ್ವ ರಾದ ಆರ್.ಎನ್.ತ್ಯಾಗರಾಜನ್ ನಿರ್ದೇಶನದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು 18ರ ಅಪರಾಹ್ನ 2:30ಕ್ಕೆ ಉದ್ಘಾಟಿಸುವರು.

ಪರ್ಯಾಯ ಶ್ರೀವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಈಶ್ವರಯ್ಯ, ಮಧೂರು ಬಾಲಸುಬ್ರಹ್ಣಣ್ಯಂ, ಎನ್.ಆರ್. ಅನಂತನಾರಾಯಣ್, ಉಮಾಶಂಕರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News