ಕೋಮುಗಲಭೆ ಸೃಷ್ಟ್ಟಿಸಲು ಸಂಘಪರಿವಾರದಿಂದ ಪ್ರಯತ್ನ: ಎಸ್ಡಿಪಿಐ ಆರೋಪ
Update: 2016-11-16 17:15 IST
ಮಂಗಳೂರು, ನ.16: ಕೊಣಾಜೆ ಠಾಣಾ ವ್ಯಾಪ್ತಿಯ ಅಸುಪಾಸಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತೀವ್ರವಾಗಿ ಖಂಡಿಸಿರುವ ಎಸ್ಡಿಪಿಐ ಜಿಲ್ಲಾ ಸಮಿತಿ, ಕೋಮುಗಲಭೆ ಸೃಷ್ಟಿಸಲು ಸಂಘಪರಿವಾರ ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಜಿಲ್ಲಾದ್ಯಂತ ಸೆಕ್ಷನ್ 144 ಜಾರಿಯಲ್ಲಿದ್ದರೂ ಕೂಡ ಸಂಘಪರಿವಾರದ ದುಷ್ಕರ್ಮಿಗಳಿಂದ ಮುಸಲ್ಮಾನರ ಮೇಲೆ ನಿರಂತರ ಹಲ್ಲೆ, ಚೂರಿ ಇರಿತ, ಕೊಲೆಯತ್ನ ಪ್ರಯತ್ನಗಳು ವ್ಯಾಪಕವಾಗುತ್ತಿದೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿರುವಾಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಮೌನವಹಿಸಿದೆ.ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕಾದ ಪೊಲೀಸರು ವಿಚಾರಣೆಯ ಹೆಸರಿನಲ್ಲಿ ಅಮಾಯಕರ ಮನೆಗೆ ನುಗ್ಗಿ ನಿರಪರಾಧಿಗಳನ್ನು ಬಂಧಿಸುತ್ತಿದೆ ಎಂದು ಆರೋಪಿಸಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರಗಿಸಬೇಕು ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.