ಕೊರಗರ ಯೋಜನೆಗಳಿಗೆ ನೀತಿ: ಸಚಿವ ಪ್ರಮೋದ್ ಭರವಸೆ

Update: 2016-11-16 15:32 GMT

ಉಡುಪಿ, ನ.16: ಕೊರಗ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ನೀತಿಯನ್ನಾಗಿ ರೂಪಿಸುವ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರ ಭರವಸೆಯ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೊರಗರ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಇಂದು ಮಧ್ಯಾಹ್ನ ವೇಳೆ ಅಂತ್ಯಗೊಳಿಸಲಾಯಿತು.

ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಚಿವ ಪ್ರಮೋದ್ ಮಧ್ವರಾಜ್ ಧರಣಿ ನಿರತರೊಂದಿಗೆ ನೆಲದಲ್ಲಿ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದರು. ಕೊರಗ ಸಮುದಾಯದ ವಿವಿಧ ಬೇಡಿಕೆಗಳನ್ನು ಸಮಿತಿಯ ಜಿಲ್ಲಾಧ್ಯಕ್ಷ ಬೊಗ್ರ ಕೊರಗ, ಮಾಜಿ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ಪುತ್ರ ಹೆಬ್ರಿ, ಸಂಜೀವ ಬಾರಕೂರು ಸಚಿವರಿಗೆ ವಿವರಿಸಿದರು.

2001ರ ಜನಗಣತಿಯಂತೆ ಜಿಲ್ಲೆಯಲ್ಲಿ 16,000ರಷ್ಟಿದ ಕೊರಗರ ಜನ ಸಂಖ್ಯೆ, 2011ರ ಜನಗಣತಿಯ ಸಂದರ್ಭದಲ್ಲಿ 11,000ಕ್ಕೆ ಇಳಿಮುಖ ಗೊಂಡಿದೆ. ಇದೇ ರೀತಿ ಮುಂದುವರೆದರೆ ಮುಂದಿನ 50ವರ್ಷಗಳಲ್ಲಿ ಇಡೀ ಸಮುದಾಯವೇ ಕಣ್ಮರೆಯಾಗಲಿದೆ. ಆದುದರಿಂದ ಡಾ.ಮುಹಮ್ಮದ್ ಪೀರ್ ವರದಿಯ ಶಿಫಾರಸ್ಸಿನಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನೇತೃತ್ವದಲ್ಲಿ ವೈದ್ಯಕೀಯ ತಜ್ಞರು, ಮಾನವ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಮನ ಶಾಸ್ತ್ರಜ್ಞರನ್ನೊಳಗೊಂಡ ತಂಡವನ್ನು ರಚಿಸಿ ಸಮಗ್ರ ಆರೋಗ್ಯ ಅಧ್ಯಯನ ನಡೆಸಿ ಪರಿಹಾರ ಕಂಡು ಕೊಳ್ಳಬೇಕು ಎಂದು ಕೊರಗ ಮುಖಂಡರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸದ್ಯದಲ್ಲೇ ಕೊರಗರ ಜನಸಂಖ್ಯೆ ಇಳಿಮುಖ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಜನಸಂಖ್ಯೆಗೆ ಸಂಬಂಧಿಸಿದಂತೆ ಕೇರಳ ಸರಕಾರ ನಡೆಸಿರುವ ಅಧ್ಯಯನದ ವರದಿಯನ್ನು ತರಿಸಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು. ಸದ್ಯಕ್ಕೆ ಪರಿಶಿಷ್ಟ ವರ್ಗದಲ್ಲಿ ಕೊರಗರಿಗೆ ಮೀಸಲಾತಿ ನೀಡುತ್ತಿರುವುದ ದ ಸಾಕಷ್ಟು ಅನ್ಯಾಯ ಆಗುತ್ತಿದೆ. ಹೀಗಾಗಿ ಅವರಿಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುವುದು. ಕೊರಗ ಸಮುದಾಯಕ್ಕೆ ಯಾವುದೇ ದಾಖಲೆಗಳಿಲ್ಲದೆ ಮನೆ ಮಂಜೂರು ಮಾಡ ಲಾಗುವುದು. ಮನೆ ನಿರ್ಮಾಣಕ್ಕೆ ನೀಡುವ ಮೊತ್ತವನ್ನು 4.5ಲಕ್ಷ ರೂ.ಗೆ ಏರಿಸಲಾಗುವುದು ಎಂದು ಅವರು ಹೇಳಿದರು.

ಕೊರಗ ಸಮುದಾಯದ ಪ್ರತಿಯೊಬ್ಬ ಸದಸ್ಯರ ಸಮಗ್ರ ಆರೋಗ್ಯ ತಪಾಸಣೆ ನಡೆಸಿ ದಾಖಲಾತಿ ಮಾಡಿ ಅದರಂತೆ ಚಿಕಿತ್ಸೆ ಮುಂದುವರೆಸುವುದು ಸೇರಿದಂತೆ ಎಲ್ಲ ರೀತಿಯ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಕೊರಗರು ತಮ್ಮ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹರೀಶ್ ಗಾಂವ್ಕರ್, ವ್ಯವಸ್ಥಾಪಕ ವಿಶ್ವನಾಥ್ ಉಪಸ್ಥಿತರಿದ್ದರು. 

ಬೆಳಗಾವಿ ಅಧಿವೇಶನದಲ್ಲಿ ಕೊರಗ ಸಭೆ

ಬೆಳಗಾವಿ ಅಧಿವೇಶನದ ಸಮಯದಲ್ಲಿ ಕೊರಗ ಆರೋಗ್ಯ ಶಿಕ್ಷಣ ಸಮಸ್ಯೆ ಹಾಗೂ ಸಮುದಾಯದ ಅಭಿವೃದ್ಧಿ ಕುರಿತು ಸಮಾಜ ಕಲ್ಯಾಣ ಸಚಿವ ಆಂಜನೇಯ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಇದರಲ್ಲಿ ಆರೋಗ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ, ಜಿಪಂ ಸಿಇಓ, ಇತರ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಕೊರಗ ಮುಖಂಡರನ್ನು ಕರೆಯಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News