ಆಳ್ವಾಸ್ ವಿದ್ಯಾರ್ಥಿಸಿರಿಗೆ ಚಾಲನೆ
ಮೂಡುಬಿದಿರೆ, ನ.17: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿ ಸಿರಿ-2016ಕ್ಕೆ ಪ್ರಸಿದ್ಧ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಜಯಶ್ರೀ ಅವರು, ನಾವೆಲ್ಲರೂ ಸಾಹಿತ್ಯ ಸಂಸ್ಕೃತಿಯನ್ನು ಪ್ರೀತಿಸಬೇಕಾಗಿದೆ. ನಮ್ಮ ನೆಲದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವಲ್ಲಿ ವಿದ್ಯಾರ್ಥಿ ಸಿರಿಯು ಪೂರಕವಾಗಲಿದೆ. ನಮ್ಮ ನಾಡು, ನುಡಿಯು ಹಲವು ಭಾಷೆ, ಹಲವಾರು ವೈವಿದ್ಯತೆಗಳಿಂದ ಕೂಡಿದೆ. ಮಕ್ಕಳ ಹೆತ್ತವರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವುದಕ್ಕಿಂತ ಮಕ್ಕಳ ಮನಸ್ಸಿನ ತುಮುಲಗಳನ್ನು ಅರಿತುಕೊಂಡು ಅವರು ಯಾವುದನ್ನು ಇಷ್ಟಪಡುತ್ತಾರೆ ಆ ಕನಸುಗಳಿಗೆ ಬೆಲೆ ಕೊಡಬೇಕಾಗಿದೆ. ಅದರಂತೆ ಮಕ್ಕಳು ಕೂಡಾ ತಮ್ಮ ಹೆತ್ತವರ ಆಸೆ, ಭಾವನೆಗಳನ್ನು ಅರ್ಥ ಮಾಡಿಕೊಂಡು ನಿಮ್ಮಾಸೆಗಳನ್ನು ಅವರ ಬಳಿ ಹೇಳಿಕೊಳ್ಳಿ, ನಮ್ಮ ಸಂಸ್ಕೃತಿ ಸಾಹಿತ್ಯ ಪರಂಪರೆಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳುವ ಮೂಲಕ ನಿಮ್ಮ ಸಾಧನೆಗಳ ಜತೆಗೆ ಹೆತ್ತವರ ಕನಸುಗಳನ್ನೂ ನನಸುಗೊಳಿಸಬೇಕೆಂದು ಹೇಳಿದ ಅವರು ಸಾವಿರದ ಶರಣವ್ವ ಕರಿಮಾಯಿ ತಾಯಿ ಎಂಬ ಹಾಡನ್ನು ಹಾಡಿ ಸೇರಿದ ವಿದ್ಯಾರ್ಥಿ ಸಾಹಿತ್ಯಾಸಕ್ತರನ್ನು ಮುದಗೊಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ಎಸ್ಡಿಎಂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅನನ್ಯ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವುದೇ ಶಿಕ್ಷಣ. ವಿದ್ಯೆ ನಮ್ಮ ಹೃದಯ ಸಂಸ್ಕಾರಕ್ಕೆ ಕಾರಣವಾಗಬೇಕು. ನಾವು ಪಡೆಯುವ ಶಿಕ್ಷಣ ಹೃದಯ ಸಂಸ್ಕಾರಕ್ಕೆ ನೆರವಾಗದೆ ಹೋದರೆ ಅದು ಶಿಕ್ಷಣವೇ ಅಲ್ಲ. ಸಂಸ್ಕಾರವೆಂಬುದು ಸಂಸಾರದಿಂದ ಬರುತ್ತದೆ. ಮನೆಯಷ್ಟೇ ಸಂಸ್ಕಾರ ನೀಡದು. ಬದುಕುವ ಪರಿಸರ, ಸಮಾಜ ಸಂಸ್ಕಾರಕ್ಕೆ ಕಾರಣವಾಗುತ್ತದೆ. ಸಂಸ್ಕಾರ ರಹಿತ ಸಂಸಾರ ಸಮಾಜದಲ್ಲಿ ಕೇವಲ ಆಗಿ ಬಿಡುತ್ತದೆ. ಹೀಗಾಗಿ ಸಂಸಾರ, ಸಮಾಜ, ಸಂಸ್ಕಾರಗಳೆಂಬ ಸಕಾರತ್ರಯಗಳು ನಮ್ಮ ಬದುಕನ್ನು ರೂಪಿಸುತ್ತದೆ.
ಆದರೆ ಇಂದು ನಮ್ಮ ಮತ್ತು ಹೆತ್ತವರ ಗುರಿ ಗರಿಷ್ಠ ಅಂಕಗಳಿಸುವತ್ತ. ಕೈತುಂಬಾ ಸಂಪಾದಿಸುವ ವೃತ್ತಿಯತ್ತ ಅಂದರೆ ನಾವಿಂದು ಶಿಕ್ಷಣ ಪಡೆಯುತ್ತಿರುವುದು ಕೇವಲ ಉದ್ಯೋಗಕ್ಕಾಗಿ ಹೊರತು ಸಂಸ್ಕಾರಕ್ಕಾಗಿ ಅಲ್ಲವೇನೋ ಎಂಬ ಚಿಂತೆ ಕಾಡುತ್ತಿದೆ. ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ಮುಖಗಳೇ ನಮ್ಮ ಸರ್ವತೋಮುಖ ಬೆಳವಣಿಗೆಗಳು. ನಮಗೆಂತಹ ಶಿಕ್ಷಣ ಬೇಕೆಂದು ನಾವು ಎಂದಾದರೂ ಯೋಚಿಸಿದ್ದೇವೆಯೇ..? ನಮಗೆ ಅದು ಬೇಕು ಇದು ಬೇಕು ಎಂದು ಮನವಿ ಮಾಡುವ ನಾವು ಹೋರಾಟಕ್ಕಿಳಿಯುವ ನಾವು ಶಿಕ್ಷಣದ ಬಗೆಗೆ ಎಲ್ಲಿ ಮಾತನಾಡಿದ್ದೇವೆ, ಎಲ್ಲಿ ಹೋರಾಡಿದ್ದೇವೆ ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ. ನಮಗೆಲ್ಲರಿಗೂ 2 ತಾಯಿ. ಇನ್ನೊಂದು ಕನ್ನಡಮ್ಮ. ನಾವು ಎಲ್ಲಿ ಓದುತ್ತಿದ್ದೇವೆ. ಆ ರಾಜ್ಯದ ಭಾಷೆಯನ್ನ ಯಾವತ್ತೂ ಕಡೆಗಣಿಸಬಾರದು. ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಡಿ ಎಂದು ನಾನು ಹೇಳುತ್ತಿಲ್ಲ ಆದರೆ ಕನ್ನಡವನ್ನು ಯಾವತ್ತೂ ಕಡೆಗಣಿಸಬೇಡಿ. ಸಾಹಿತ್ಯದ ಓದಿನಿಂದ ನಮ್ಮ ಅನುಭವ ವಿಸ್ತಾರವಾಗುತ್ತದೆ. ಹೊಸ ಹೊಸ ಕಲ್ಪನೆಗಳು ಒಡಮೂಡುತ್ತದೆ. ಶಬ್ಧ ಭಂಡಾರ ಹೆಚ್ಚುತ್ತದೆ. ಬರೆಯುವ ಆಸಕ್ತಿ ಬೆಳೆಯುತ್ತದೆ. ಸಾಹಿತ್ಯ ಎಲ್ಲರದ್ದಾಗಬೇಕು. ಎಲ್ಲರೂ ಸಾಹಿತ್ಯ ರಚಿಸಲಾರರು. ಆದರೂ ಸಾಹಿತ್ಯದ ಸವಿಯನ್ನು ಸವಿಯಬೇಕು. ಅದು ತೋರುವ ಬೆಳಕನ್ನು ನೋಡಬೇಕು ಮತ್ತೆ ಆ ಬೆಳಕಿನಲ್ಲಿ ನಾವು ಮುನ್ನಡೆಯಬೇಕು ಎಂದು ಹೇಳಿದರು.
ಸಿನಿಸಿರಿ ಉದ್ಘಾಟನೆ
ಈ ಬಾರಿಯ ನುಡಿಸಿರಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಸಿನಿಸಿರಿಯನ್ನು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿದ್ಯಾರ್ಥಿಸಿರಿಯ ವೇದಿಕೆಯಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಈಗ ದೃಶ್ಯ ಮಾಧ್ಯಮಗಳು ಪ್ರಬಲವಾಗಿ ಬೆಳೆದು ನಿಂತಿವೆ. ಕಿರುತೆರೆಯು ಜನಸಾಮಾನ್ಯರನ್ನು, ಹಳ್ಳಿಗರನ್ನು ಆಕ್ರಮಿಸುವ ಮೂಲಕ ಓದು ಕ್ಷೀಣಿಸುವಂತೆ ಆವರಿಸಿಕೊಂಡಿದೆ. ಇದನ್ನು ರಚನಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಬಳಸಲು ಸಾದ್ಯವೇ ಎಂಬುದನ್ನು ಯೋಚಿಸಿ ಈ ಹಿನ್ನೆಲೆಯಲ್ಲಿ ಸಿನಿಸಿರಿಯನ್ನು ಸೇರಿಸಿಕೊಂಡಿರುವುದು ಶ್ಲಾಘನೀಯ. ಆಧುನಿಕ ತಂತ್ರಜ್ಞಾನವಾಗಿರುವ ಮೊಬೈಲ್ ಇಂದು ಎಲ್ಲರ ಕೈಯಲ್ಲೂ ಬಂದು ಕುಳಿತಿದೆ. ಈ ತಂತ್ರಜ್ಞಾನದಿಂದ ಉಪಯೋಗವೂ ಇದೆ. ಅಪಾಯವೂ ಇದೆ. ಆದರಿಂದ ಬೆಂಕಿಯಂತಿರುವ ಈ ತಂತ್ರಜ್ಞಾನವನ್ನು ಹಣತೆಯಂತೆ ಬಳಸಿಕೊಂಡು ಆ ಬೆಳಕಿನಲ್ಲಿ ವಿದ್ಯಾರ್ಥಿಗಳು ದಾರಿ ಹುಡುಕುವಂತಹ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಆಳ್ವಾಸ್ ವಿದ್ಯಾರ್ಥಿಸಿರಿ ಪುರಸ್ಕಾರ-2016 ಪ್ರದಾನ ಮಕ್ಕಳ ಸಾಹಿತ್ಯ ಮತ್ತು ಶಿಕ್ಷಣ ರಂಗದಲ್ಲಿ ಸಾಧನೆಗೈದಿರುವ ಸಾಧನೆಗಾಗಿ ಮಕ್ಕಳ ಸಾಹಿತಿ ಮತ್ತು ಸಂಘಟಕ ವಿ. ಬಿ.ಕುಳವರ್ಮ ಕುಂಬಳೆ, ಗೋಪಡ್ಕರ್, ಅನೌಪಚಾರಿಕ ಶಿಕ್ಷಣ ಪ್ರಯೋಗ ಕೇಂದ್ರ, ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು, ಚಿಕ್ಕಮಗಳೂರು ಸೈಂಟ್ ಮೇರಿಸ್ ಇಂಟರ್ನ್ಯಾಶನಲ್ ಸ್ಕೂಲ್ನ ವೈಷ್ಣವಿ ಎನ್.ರಾವ್ರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ-2016ರ ಪುರಸ್ಕಾರವನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ನುಡಿಸಿರಿಯ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗೌರವ ಉಪಸ್ಥಿತರಿದ್ದು ಮಾತನಾಡಿ, ನಾಳೆಗಳ ನಿರ್ಮಾಣ ನಮ್ಮೆಲ್ಲರ ಆದ್ಯ ಕರ್ತವ್ಯ. ಕರ್ನಾಟಕ ನಾಳೆಗಳ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದದು. ಕಟ್ಟಡ ನಿರ್ಮಾಣವಾಗಬೇಕಾದರೆ ಅದರ ಅಡಿಪಾಯ ಗಟ್ಟಿಕೊಳ್ಳಬೇಕು. ಆದ್ದರಿಂದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಉತ್ತಮವಾಗಿ ಸಿಕ್ಕಿದರೆ ಮಾತ್ರ ಭದ್ರ ಬುನಾದಿಯಾಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಪ್ರಾಥಮಿಕ ಹಂತದಲ್ಲಿ ನೀಡುವುದು ಅಗತ್ಯ ಎಂದು ಹೇಳಿದರು.
ಬಂಟ್ವಾಳ ಎಸ್.ವಿ.ಎಸ್. ದೇವಳ ಆಂಗ್ಲಮಾಧ್ಯಮ ಶಾಲೆಯ ಬಿ. ಅಶ್ವಿನಿ ಬಾಳಿಗಾ ಸ್ವಾಗತಿಸಿದರು. ಪುತ್ತಿಗೆ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿ ರಚನಚಂದ್ರ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆ ಜೈನ ಪ್ರೌಢಶಾಲೆಯ ವಿದ್ಯಾರ್ಥಿ ಶರತ್ ವಂದಿಸಿದರು.