‘ಮಾತು ಸೋತ ಭಾರತ’ದ ಸ್ಥಿತಿ ಮತ್ತಷ್ಟು ಗಂಭೀರ: ಡಾ.ರಾವ್

Update: 2016-11-17 16:32 GMT

ಉಡುಪಿ, ನ.17: ಡಾ.ಅನಂತಮೂರ್ತಿಯವರ ‘ಮಾತು ಸೋತ ಭಾರತ’ದ ಸ್ಥಿತಿ ಇಂದು ಮತ್ತಷ್ಟು ಗಂಭೀರವಾಗಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಮಾಡುವ ಟೀಕೆಗಳ ವಿರುದ್ಧ ಹೆಚ್ಚು ಹೆಚ್ಚು ಆಕ್ರಮಣ ಮಾಡಿ ಕೀಳು ಮಟ್ಟದ ಪದಗಳನ್ನು ಬಳಸಿ ದೇಶದ್ರೋಹಿಯ ಪಟ್ಟ ಕಟ್ಟಿ ವ್ಯಕ್ತಿಯ ತೇಜೋ ವಧೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಲೇಖಕ ಡಾ.ಮಹಾ ಬಲೇಶ್ವರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ನಡೆದ ಲೇಖಕ ಹರಿಕೃಷ್ಣ ರಾವ್ ಎ. ಅವರ ‘ಕತೆಗಳೊಂದಿಗೆ ಕಲಿಕೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಮಕ್ಕಳ ಸ್ಥಿತಿಯಲ್ಲಿ ಇಂದು ಮಾತು ಸೋತ ಭಾರತಕ್ಕಿಂತ ಮಾತು ಬೇಕಾದ ಭಾರತವಾಗಿ ಪರಿಣಮಿಸಿದೆ. ಮಾಧ್ಯಮಗಳು ಇಂದು ತಂದೆಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಓದುವ ಜಾಗವನ್ನು ನೋಡುವುದು ತುಂಬಿಸಿದೆ. ನಮ್ಮಲ್ಲಿ ಮಕ್ಕಳ ಸಾಹಿತ್ಯ ಇಂದು ಬಹಳ ದುಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.

ಪುಸ್ತಕ ಬಿಡುಗಡೆಗೊಳಿಸಿದ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, ಆಂಗ್ಲ ಭಾಷೆಯ ಶಿಶು ಸಾಹಿತ್ಯಕ್ಕೆ ಹೋಲಿಸಿದರೆ ನಾವು ಆ ವಿಚಾರದಲ್ಲಿ ಬಹಳಷ್ಟು ಹಿಂದೆ ಇದ್ದೇವೆ. ಆಂಗ್ಲ ಭಾಷೆಯಲ್ಲಿ 130ಕ್ಕೂ ಹೆಚ್ಚು ಅಗ್ರಪಂಕ್ತಿಯ ಮಕ್ಕಳ ಸಾಹಿತಿಗಳು ನಮಗೆ ಸಿಗುತ್ತಾರೆ. ಆ ನಿಟ್ಟಿನಲ್ಲಿ ನಾವು ಮಕ್ಕಳ ಸಾಹಿತ್ಯವನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಎನ್.ತಿರುಮಲೇಶ್ವರ ಭಟ್ ವಹಿಸಿದ್ದರು. ಲೇಖಕ ಹರಿಕೃಷ್ಣ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನಿರ್ಮಲಾ ಹರಿಕೃಷ್ಣ ರಾವ್ ವಂದಿಸಿದರು. ಜಿ.ಪಿ.ಪ್ರಭಾಕರ ತಮರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News