ಕಿನ್ಯಾ: ಮನೆಗೆ ತೆರಳುತ್ತಿದ್ದ ಶಾಲಾ ಬಾಲಕನ ಅಪಹರಣಕ್ಕೆಯತ್ನ

Update: 2016-11-18 15:32 GMT

ಉಳ್ಳಾಲ,ನ.18: ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ನಾಟೆಕಲ್ ಬಳಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದವಿದ್ಯಾರ್ಥಿಯೋರ್ವನನ್ನುಕಪ್ಪು ಆಮ್ನಿ ಕಾರಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿದ್ಯಾರ್ಥಿ ಮುಖಕ್ಕೆ ಬಟ್ಟೆ ಸುತ್ತಿ ಅಪಹರಿಸಲು ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ವೇಳೆ ಹಿಂದಿನಿಂದ ಬಂದ ವಾಹನವನ್ನು ಕಂಡು ಆಗಂತುಕರು ಬಾಲಕನ ಬಲ ಕೈಗೆ ಬ್ಲೇಡಿಂದ ಇರಿದು ಪರಾರಿಯಾಗಿದ್ದಾರೆ.

  ಕಿನ್ಯಾ ಗ್ರಾಮದ ದಿ.ಮಹಮ್ಮದ್ ಭಾಷಾ ಅವರ ಪುತ್ರ ಮಹಮ್ಮದ್ ಶಹದ್(12)ಎಂಬ ಬಾಲಕನೇ ಅಪಹರಣ ಯತ್ನಕ್ಕೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಈತ ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶುಕ್ರವಾರ ಸಂಜೆ ಶಾಲೆ ಮುಗಿಸಿ ಬಸ್ಸಿನಲ್ಲಿ ನಾಟೆಕಲ್ಲಿನವರೆಗೆ ಪ್ರಯಾಣಿಸಿದ ಶಹದ್ ಅಲ್ಲಿಂದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.   ಈ ಸಂದರ್ಭ ಹಿಂದಿನಿಂದ ಬಂದ ಕಪ್ಪು ಬಣ್ಣದ ಆಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಹಾದ್‌ನ ಮುಖಕ್ಕೆ ಬಟ್ಟೆ ಕಟ್ಟಿ ಕಾರಿನೊಳಗೆ ಎಳೆಯಲು ಪ್ರಯತ್ನಿಸಿದಾಗ ಶಹಾದ್ ಬೊಬ್ಬಿಟ್ಟಿದ್ದು ಹಿಂದಿನಿಂದ ಬಂದ ಇನ್ನೊಂದು ಬೈಕ್ ಸವಾರ ಗಮನಿಸಿದ್ದನ್ನು ಕಂಡ ದುಷ್ಕರ್ಮಿಗಳು ತಬ್ಬಿಬ್ಬಾಗಿ ಬಾಲಕನ ಬಲಗೈಗಿ ಬ್ಲೇಡಿನಿಂದ ಇರಿದು ಬಾಲಕನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.ಗಾಯಗೊಂಡ ಶಹಾದ್‌ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

 ಕೇರಳ ರಾಜ್ಯ ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮುಖಕ್ಕೆ ಕರವಸ್ತ್ರ ಸುತ್ತಿದ್ದು ಓರ್ವ ದಪ್ಪವಾಗಿದ್ದು ಗಡ್ಡಧಾರಿಯಾಗಿದ್ದರೆ ಇನ್ನೋರ್ವ ತೆಳ್ಳಗಾಗಿದ್ದು ಕುರುಚಲು ಗಡ್ಡಧಾರಿಯಾಗಿದ್ದು,ಮೂವತ್ತರಿಂದ,ಮೂವತ್ತೆರಡು ಪ್ರಾಯದವರಾಗಿದ್ದಾರೆಂದು ಅಪಹರಣಕ್ಕೊಳಗಾದ ಶಹದ್ ಎಸಿಪಿ ಶೃತಿ ಮತ್ತು ಇನ್ಸ್‌ಪೆಕ್ಟರ್ ಗೋಪಿಕೃಷ್ಣರಿಗೆ ಮಾಹಿತಿ ನೀಡಿದ್ದಾನೆ.

ಮಂಜೇಶ್ವರದಲ್ಲೂ ನಡೆದಿತ್ತು: ಎರಡು ದಿನಗಳ ಹಿಂದಷ್ಟೇ ಮಂಜೇಶ್ವರದಲ್ಲೂ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಲಕನೋರ್ವನನ್ನು ಅಪಹರಿಸಲು ಯತ್ನ ನಡೆಸಿದ್ದು, ಇದೇ ತಂಡ ಅಪಹರಣಕ್ಕೆ ಯತ್ನಿಸರಬಹುದು ಎಂದು ಶಂಕಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕೈರಂಗಳದ ವಿದ್ಯಾನಗರದ ಜಲ್ಲಿಕ್ರಾಸಿನಲ್ಲಿ ಇದೇ ರೀತಿ ಮದರಸದ ವಿದ್ಯಾರ್ಥಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳುಕೈಗೆ ಇರಿದು ಪರಾರಿಯಾಗಿದ್ದರು. ಇಂತಹ ಘಟನೆಗಳಿಂದ ವಿದ್ಯಾರ್ಥಿ ಪೋಷಕರು ಆತಂಕ್ಕೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News