ಮನುಷ್ಯ ಮನುಷ್ಯನಾಗಿ ಬದುಕುವುದೇ ಧರ್ಮ: ವಿ. ಗೋಪಾಲಗೌಡ

Update: 2016-11-27 15:55 GMT

ಬೆಳ್ತಂಗಡಿ, ನ.27: ನಮ್ಮ ಸಂವಿಧಾನವು ಎಲ್ಲ ಧರ್ಮಗಳಿಗೂ ರಕ್ಷಣೆ ನೀಡಿದೆ. ಅದನ್ನು ಅನುಸರಿಸುವ, ತಿಳಿಹೇಳುವ ಅವಕಾಶವನ್ನು ನೀಡಿದೆ. ಇದು ಅನುಷ್ಠಾನಕ್ಕೆ ಬರುವಾಗ ಕೆಲ ಅಡ್ಡಿ ಆತಂಕಗಳು ಎದುರಾಗುತ್ತಿದೆ. ನಮ್ಮ ಯುವ ಸಮುದಾಯ ಎಲ್ಲ ಧರ್ಮಗಳ ಬಗ್ಗೆ ತಿಳಿದುಕೊಂಡು ಸಹಿಷ್ಣುತೆಯ ಬದುಕನ್ನು ನಡೆಸುವ ಮೂಲಕ ಬಲಿಷ್ಠ ಭಾರತವನ್ನು ಕಟ್ಟಲು ಪ್ರಯತ್ನಿಸಬೇಕಾಗಿದೆ ಎಂದು ಸುಪ್ರೀಂ ಕೋಟಿನ ನಿವೃತ್ತ ನಾಯಾಧೀಶ ವಿ. ಗೋಪಾಲಗೌಡ ಹೇಳಿದರು.

ಅವರು ರವಿವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮೇಳನದ 84ನೆ ಅಧಿವೇಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಭಾರತ ಬಹು ಸಂಸ್ಕೃತಿಯ ಬಹು ಧರ್ಮಗಳ ರಾಷ್ಟ್ರವಾಗಿದೆ. ನಮಗೆ ಯಾವುದೇ ರಾಷ್ಟ್ರಧರ್ಮವೆಂಬುದಿಲ್ಲ. ನಮ್ಮ ಜನಗಳ ಮೇಲೆ ಧರ್ಮ ಬೀರಿರುವ ಪ್ರಭಾವವೂ ಹಿರಿದಾಗಿದೆ. ನಮ್ಮ ಸಂಪ್ರದಾಯಗಳು, ಜೀವನ ರೀತಿಗಳು ನಮ್ಮ ಬದುಕಿಗೆ ಒಂದು ನೈತಿಕ ಚೌಕಟ್ಟನ್ನೂ ನೀಡಿದೆ. ಶಾಂತಿಯುತವಾದ ಸಮಾಜದ ನಿರ್ಮಾಣವೇ ಧರ್ಮದ ಮುಖ್ಯ ಕಾರ್ಯವಾಗಬೇಕು ಎಂದರು.

ಮನುಷ್ಯ ಮನುಷ್ಯನಾಗಿ ಬದುಕುವುದೇ ಧರ್ಮವಾಗಿದೆ. ಮತೀಯ ಗಲಭೆಗಳಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಜೀವನದಲ್ಲಿ ರೂಪಿಸಿಕೊಂಡು ದೇಶ ಕಟ್ಟುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕಾಗಿದೆ. ಧರ್ಮಗಳ ಹೆಸರಿನಲ್ಲಿ ಪರಸ್ಪರ ಜನರು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಸರ್ವಧರ್ಮಗಳ ಸಾರವನ್ನು ನೀಡುವ ಸಮ್ಮೇಳನಗಳು ಅಗತ್ಯವಾಗಿದೆ ಎಂದರು.

ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶಿರಹಟ್ಟಿಯ ಫಕೀರ ಸಿದ್ದರಾಮ ಸಂಸ್ಥಾನದ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿ ಮಾತನಾಡಿ, ದ್ವೇಷ ಅಸೂಯೆ, ಮತಾಂಧತೆಯಿಂದ ಜನ ಪರಸ್ಪರ ಹೊಡೆದಾಡಿ ಸಾಯುತ್ತಿರುವ ಇಂದಿನ ದಿನಗಳಲ್ಲಿ ಪ್ರೀತಿಯಿಂದ ಹೃದಯ ಮನಸ್ಸುಗಳನ್ನು ಕೂಡಿಸುವ ಕಾರ್ಯ ನಡೆಯಬೇಕಾಗಿದೆ. ಧರ್ಮಗಳನ್ನು ತಿಳಿದುಕೊಂಡು ಪ್ರೇಮದ ಭಾವನೆಯನ್ನು ಬೆಳೆದರೆ ಜಗತ್ತು ಸ್ವರ್ಗವಾಗಲು ಸಾಧ್ಯವಿದೆ. ಎಲ್ಲ ಧರ್ಮಗಳೂ ಸಾರುತ್ತಿರುವುದ ಶಾಂತಿಯ ಸಹೋರತೆಯ ಸಂದೇಶವನ್ನಾಗಿದೆ. ಅದನ್ನು ಜನರಿಗೆ ತಿಳಿ ಹೇಳುವ ಕಾರ್ಯವನ್ನು ಧರ್ಮಗಳ ಹಿರಿಯರು ಮಾಡಬೇಕಾಗಿದೆ. ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆದಾಗ ಈ ಸಂದೇಶಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧಮಾಧಿಕಾರಿ ಡಾ.ಡಿ. ವೀರೇಂದ್ರಹೆಗ್ಗಡೆ, ಇಂದು ಸಮಾಜದಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚಾಗುತ್ತಿದೆ . ಆದರೆ ಅದು ನೈತಿಕತೆಯಾಗಿ ಬದಲಾಗುತ್ತಿಲ್ಲ. ವಂಚನೆ, ಸುಲಿಗೆ, ಸ್ವಾರ್ಥ, ದ್ವೇಷಗಳು ಹೆಚ್ಚಾಗುತ್ತಿದೆ. ಧಾರ್ಮಿಕ ಭಾವನೆ, ಶ್ರದ್ಧೆ, ಭಕ್ತಿಗಳೊಂದಿಗೆ ನೈತಿಕತೆ ಹಾಗೂ ಶಿಸ್ತು ಹೆಚ್ಚಾಗುವಂತೆ ಮಾಡಬೇಕಾಗಿದೆ. ಎಲ್ಲರೂ ತಮ್ಮ ತಮ್ಮ ಧರ್ಮವನ್ನು ತಿಳಿದುಕೊಂಡಾಗ ಎಲ್ಲರನ್ನೂ ಗೌರವಿಸಲು ಸಾಧ್ಯವಿದೆ ಎಂದರು.

ಸಮ್ಮೇಳನದಲ್ಲಿ ಜೈನ ಧರ್ಮದ ಬಗ್ಗೆ ಡಾ. ಜಯಕುಮಾರ ಉಪಾಧ್ಯ, ಇಸ್ಲಾಂ ಬಗ್ಗೆ ಡಾ. ಜಬ್ಬಾರ್ ಸಮೋ, ಕ್ರೈಸ್ತ ಧರ್ಮದ ಬಗ್ಗೆ ಫಾ.ಪ್ರಶಾಂತ್ ವೆಸ್ಲಿ ಡಿಸೋಜ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಪ್ರೊ ಎಸ್. ಪ್ರಭಾಕರ್, ಡಿ. ಸುರೇಂದ್ರಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಬಿ.ಪಿ.ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಧರ್ಮಸ್ಥಳ ಗ್ರಾಮಪಂಚಾಯತ್ ಅಧ್ಯಕ್ಷ ಚಂದನ್ ಕಾಮತ್ ವಂದಿಸಿದರು. ಪ್ರತಿಭಾನ್ವಿತ ಬಾಲ ಕಲಾವಿದ ಆದಿತ್ಯ ಎಂ. ನೀಡಿದ ಏಕಪಾತ್ರಾಭಿನಯ ಸೇರಿದ್ದ ಜನರ ಮೆಚ್ಚುಗೆ ಪಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ನೇತೃತ್ವದಲ್ಲಿ ಜ.14 ರ ಒಳಗಾಗಿ ರಾಜ್ಯದ ಎಲ್ಲ ದೇವಸ್ಥಾನಗಳನ್ನು ಶುದ್ಧೀಕರಣಗೊಳಿಸುವ ಕಾರ್ಯವನ್ನು ಮಾಡಲಾಗುವುದು. ಸ್ವಚ್ಛ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ದೇವಸ್ಥಾನಗಳ ಒಳ ಹಾಗೂ ಆವರಣಗಳನ್ನು ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ರಾಜ್ಯಾದ್ಯಂತ ಇರುವ ಮುವತ್ತು ಲಕ್ಷಕ್ಕೂ ಅಥಿಕ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಭಾಗವಹಿಸಲಿದ್ದಾರೆ. ಇದು ಕೇವಲ ಒಂದೇ ದಿನಕ್ಕೆ ಸೀಮಿತಗೊಳ್ಳದೆ ಮುಂದೆ ಅದನ್ನು ಸ್ವಚ್ಛವಾಗಿರಿಸುವ ಕಾರ್ಯವನ್ನು ಗ್ರಾಮದ ಜನರಿಗೆ ಹಾಗೂ ಸಂಘಗಳ ಸದಸ್ಯರಿಗೂ ನೀಡಲಾಗುವುದು. ಅದೇರೀತಿ ನೀರಿನ ಸಮಸ್ಯೆ ಅತ್ಯಂತ ತೀವ್ರವಾಗುತ್ತಿರುವ ಈ ದಿನಗಳಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತುನೀಡುವ ಕಾರ್ಯಕ್ಕೆ ಮುಂದಾಗುತ್ತಿದ್ದು ನೂರು ಕೆರೆಗಳ ಹೂಳೆತ್ತುವ ಕಾರ್ಯವನ್ನು ಮಾಡಲು ನಿರ್ಧರಿಸಲಾಗಿದೆ ಸರಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಲಾಗುವುದು.

-ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು 

ಹಸಿರು, ಕೇಸರಿಯನ್ನು ದ್ವೇಷಿಸುವ ಪ್ರವೃತ್ತಿಗಳು ಮಿತಿ ಮೀರಿ ಬೆಳೆಯುತ್ತಿದೆ. ದ್ವೇಷದ ಪ್ರವೃತ್ತಿ ಕೊನೆಯಾಗಬೇಕಾಗಿದೆ. ನಮ್ಮ ಕ್ಷೇತ್ರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳನ್ನು ಒಟ್ಟೊಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಕ್ಷೇತ್ರಕ್ಕೆ ಹಿಂದೂಗಳು ಹಾಗೂ ಮುಸ್ಲಿಮರು ಬರುತ್ತಾರೆ. ಇದೊಂದು ಮಾದರಿ ಸಂಪ್ರದಾಯ. ಇಂತಹ ಪ್ರೇಮದ, ಸಹೋದರತೆಯ ಸಂದೇಶ ಎಲ್ಲೆಡೆ ಸಿಗುವಂತಾಗಬೇಕು.

-ಫಕೀರ ಸಿದ್ದರಾಮ ಮಹಾಸ್ವಾಮಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News