×
Ad

ಸುಧಾರಣೆಗಳನ್ನು ಬೇಡುತ್ತಿರುವ ದೇಶದ ಬಂದಿಖಾನೆಗಳು

Update: 2016-11-30 00:08 IST

ಭೋಪಾಲ್‌ನಿಂದ ಎಂಟು ಶಂಕಿತ ಸಿಮಿ ಉಗ್ರರು ತಪ್ಪಿಸಿಕೊಂಡರು ಮತ್ತು ಅವರನ್ನು ನಾವು ಎನ್‌ಕೌಂಟರ್ ಮಾಡಿ ಕೊಂದು ಹಾಕಿದೆವು ಎಂದು ಅಲ್ಲಿನ ಪೊಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ನಿಜವಾದ ಜೈಲ್‌ಬ್ರೇಕ್ ಹೇಗಿರುತ್ತದೆ ಎನ್ನುವುದನ್ನು ಪಾತಕಿಗಳು ಪೊಲೀಸರಿಗೆ ತೋರಿಸಿಕೊಟ್ಟಿದ್ದಾರೆ. ಭೋಪಾಲ್‌ನಲ್ಲಿ ಎಲ್ಲ ಉಗ್ರರನ್ನು ಸುಲಭದಲ್ಲಿ ಪೊಲೀಸರು ಕೊಂದು ಹಾಕಿದ್ದರೆ, ಪಂಜಾಬ್‌ನ ನಾಭಾ ಜೈಲಿನ ಪರಾರಿ ಪ್ರಕರಣದಲ್ಲಿ ಇದು ಸಂಭವಿಸಲಿಲ್ಲ. ವಿಪರ್ಯಾಸವೆಂದರೆ, ಇಲಿ ್ಲ ಒಳಗಿನ ಕೈದಿಗಳು ಜೈಲು ಮುರಿದು ಪರಾರಿಯಾಗಿರುವುದಲ್ಲ. ಬದಲಿಗೆ ಪೊಲೀಸರ ವೇಷದಲ್ಲಿ ಉಗ್ರರು ಆಗಮಿಸಿ ಬಹುಭದ್ರತೆಯಲ್ಲಿದ್ದ ದುಷ್ಕರ್ಮಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಖಾಲಿಸ್ತಾನ್ ಉಗ್ರನೂ ತಪ್ಪಿಸಿಕೊಂಡಿದ್ದ. ಘಟನೆ ನಡೆದ ಕೆಲವೇ ತಾಸುಗಳಲ್ಲಿ ಉಗ್ರ ಹರಮಿಂದರ್ ಸಿಂಗ್ ಮಿಂಟೂ ಎಂಬಾತನನ್ನು ಬಂಧಿಸಿ ಪೊಲೀಸರು ಮುಖ ಉಳಿಸಿಕೊಂಡಿದ್ದಾರೆ. ಆದರೆ, ಉಳಿದ ಉಗ್ರರನ್ನು ಈವರೆಗೆ ಬಂಧಿಸಲು ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ.

ಶಸ್ತ್ರಸಜ್ಜಿತ 12 ಜನ ದುಷ್ಕರ್ಮಿಗಳು ಬಹುಭದ್ರತೆಯಿರುವ ನಾಭಾ ಜೈಲಿಗೆ ದಾಳಿ ಮಾಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಘಟನೆಯಾಗಿದೆ. ಅವರೇನೂ ಕೈದಿಗಳನ್ನು ವಾಹನಗಳಲ್ಲಿ ಸಾಗಿಸುವಾಗ ದಾರಿ ಮಧ್ಯೆ ದಾಳಿ ಮಾಡಿರಲಿಲ್ಲ. ನೇರವಾಗಿ ಪೊಲೀಸರ ಕೋಟೆಗೇ ನುಗ್ಗಿ ದುಷ್ಕರ್ಮಿಗಳನ್ನ್ನು ಬಿಡಿಸಿಕೊಂಡಿದ್ದಾರೆ. ನಮ್ಮ ಜೈಲುಗಳ ಸದ್ಯದ ಸ್ಥಿತಿ ಹೇಗಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇಂದು ಜೈಲುಗಳು ಬೇರೆ ಬೇರೆ ರೀತಿಗಳಲ್ಲಿ ತಮ್ಮ ದೌರ್ಬಲ್ಯಗಳನ್ನು ಸಾಬೀತು ಪಡಿಸುತ್ತಿವೆೆ. ಒಂದೆಡೆ ತಮ್ಮ ಶತ್ರುಗಳನ್ನು ಕೊಲ್ಲುವುದಕ್ಕೆ ಕ್ರಿಮಿನಲ್‌ಗಳು ಕಾರಾಗೃಹವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಶ್ರೀರಾಮಸೇನೆಯ ಕಾರ್ಯಕರ್ತನಾಗಿದ್ದ ಜಂಬಗಿ ಎಂಬಾತ ಹಲವು ಉಗ್ರ ಚಟುವಟಿಕೆಗಳಲ್ಲಿ ಬಂಧಿತನಾಗಿದ್ದಾಗ, ಈತನ ಶತ್ರುಗಳು ಸುಲಭವಾಗಿ ಅವನನ್ನು ಕೊಂದು ಹಾಕಿದರು.

ಒಂದು ವೇಳೆ ಜಂಬಗಿ ಬದುಕಿದ್ದಿದ್ದರೆ ಶ್ರೀರಾಮಸೇನೆಯ ಹಲವು ಕುಕೃತ್ಯಗಳು ಬಹಿರಂಗವಾಗಿ ಬಿಡುತ್ತಿತ್ತು. ಈ ಹಿನ್ನೆಲೆಯಲ್ಲೇ ಈ ಕೊಲೆ ನಡೆದಿದೆ ಎಂದು ಈಗಲೂ ಮಾಧ್ಯಮದ ಜನರು ಅನುಮಾನಿಸುತ್ತಿದ್ದಾರೆ ಮತ್ತು ಈ ಕೊಲೆಗೆ ಪೊಲೀಸರ ಪರೋಕ್ಷ ಸಹಕಾರವೂ ಇದೆ ಎಂದು ಅನುಮಾನಿಸಲಾಗಿತ್ತು. ಮಂಗಳೂರು ಕಾರಾಗೃಹದಲ್ಲಿ ನಡೆದ ಕಗ್ಗೊಲೆಗಳೂ ಈ ದೇಶದ ಜೈಲುಗಳ ಸ್ಥಿತಿಯನ್ನು ಹೇಳುತ್ತಿವೆ. ಮಾರಾಕಾಸ್ತ್ರಗಳು ಜೈಲಿನೊಳಗೆ ಹೇಗೆ ಬಂದವು? ಎಂಬ ಪ್ರಶ್ನೆಗೆ ಪೊಲೀಸರು ಮೂಗರಂತೆ ವರ್ತಿಸುತ್ತಾರೆ. ಇಲ್ಲೂ ಕೊಲೆಯ ಹಿಂದೆ ಜೈಲು ಸಿಬ್ಬಂದಿಗಳ ದೌರ್ಬಲ್ಯಗಳು ಎದ್ದು ಕಾಣುತ್ತಿವೆ. ಮೈಸೂರು ಜೈಲಿನಲ್ಲಿ ನಡೆದಿರುವ ಕಗ್ಗೊಲೆಯನ್ನೇ ಗಮನಿಸಿ. ಆರೋಪಿ ಇನ್ನೇನು ಜಾಮೀನಿನಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಆತನನ್ನು ಜೈಲಿನೊಳಗೆ ಕೊಂದು ಹಾಕಲಾಗಿದೆ. ಇಬ್ಬರು ಕೈದಿಗಳ ನಡುವೆ ವೈಮನಸ್ಯವಿದೆ ಎನ್ನುವುದು ಗೊತ್ತಿದ್ದೂ ಪೊಲೀಸರು ಅವರಿಬ್ಬರನ್ನು ಜೊತೆಯಾಗಿ ಇಟ್ಟಿದ್ದರು ಎಂದರೆ ಈ ಕೊಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಪಾತ್ರವೆಷ್ಟು ಎನ್ನುವುದರ ತನಿಖೆಯ ಅಗತ್ಯವನ್ನು ಹೇಳುತ್ತದೆ.

ಭೋಪಾಲ್‌ನಲ್ಲಿ ನಡೆದ ಸಿಮಿ ಎನ್‌ಕೌಂಟರ್ ಪೊಲೀಸರೇ ಸೃಷ್ಟಿ ಮಾಡಿದ ಒಂದು ಪ್ರಹಸನ ಎಂಬ ಆರೋಪ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ಆರೋಪಿಗಳು ವಿಚಾರಣೆಯನ್ನು ಎದುರಿಸುತ್ತಿದ್ದು, ಅವರ ನಿರಪರಾಧಿತ್ವ ಸಾಬೀತಾಗುವ ಹಂತದಲ್ಲಿತ್ತು ಎಂದು ಅವರ ಪರವಾಗಿರುವ ವಕೀಲರು ಹೇಳುತ್ತಾರೆ. ಆರೋಪಿಗಳು ಜೈಲು ಮುರಿದು ಪರಾರಿಯಾಗುವ ಆವಶ್ಯಕತೆಯೇ ಇಲ್ಲ ಎಂದೂ ಅವರು ಹೇಳುತ್ತಾರೆ. ಹಾಗೆಯೇ ಇಡೀ ಪ್ರಕರಣದ ಹಿಂದುಮುಂದುಗಳನ್ನು ಗಮನಿಸಿದಾಗ ಪೊಲೀಸರೇ ಕೊಲೆಗಡುಕರಾಗಿ ಪರಿವರ್ತನೆ ಹೊಂದುತ್ತಿದ್ದಾರೆಯೇ? ಅವರು ರಾಜಕಾರಣಿಗಳ ದಾಳಗಳಿಗೆ ಬಲಿಯಾಗುತ್ತಿದ್ದಾರೆಯೇ ಎಂಬ ಅನುಮಾನಗಳು ಹುಟ್ಟುತ್ತವೆ. ಇಂದು ಜೈಲುಗಳು ದುರ್ಬಲವಾಗಿರುವುದು ಅವುಗಳ ಬಾಗಿಲುಗಳು ಅಥವಾ ಕಂಬಿಗಳ ದೆಸೆಯಿಂದಲ್ಲ. ಪೊಲೀಸ್ ಸಿಬ್ಬಂದಿಯ ವೃತ್ತಿನಿಷ್ಠೆಯೇ ದುರ್ಬಲಗೊಂಡಿರುವುದು ಬಂದಿಖಾನೆಯ ಅತಿ ದೊಡ್ಡ ಸಮಸ್ಯೆಯಾಗಿದೆ. ನಾಭಾ ಜೈಲಿನಲ್ಲಿ ಉಗ್ರರು ಪರಾರಿಯಾಗಿರುವುದರ ಹಿಂದೆ ಒಳಗಿರುವ ಪೊಲೀಸರ ಪಾತ್ರವೆಷ್ಟು ಎನ್ನುವುದು ಈ ಕಾರಣಕ್ಕೆ ತನಿಖೆಗೊಳಗಾಗಬೇಕಾಗಿದೆ. ಖಾಲಿಸ್ತಾನ್ ಉಗ್ರರ ಜೈಲು ಪರಾರಿ ಪ್ರಕರಣ ಬೇರೆ ಬೇರೆ ಕಾರಣಗಳಿಂದ ದೇಶದ ನಿದ್ದೆ ಗೆಡಿಸಿದೆ. ಅದರಲ್ಲಿ ಮುಖ್ಯವಾದುದು, ಪಂಜಾಬ್‌ನಲ್ಲಿ ಮತ್ತೆ ಖಾಲಿಸ್ತಾನ್ ಉಗ್ರವಾದ ರೆಕ್ಕೆ ಬಿಚ್ಚುತ್ತಿದೆಯೇನೋ ಎಂಬ ಆತಂಕ. ಹೇಗೆ ದೇಶದಲ್ಲಿ ಸಂಘಪರಿವಾರದ ಪಾಲಿಗೆ ನಾಥೂರಾಂ ಗೋಡ್ಸೆ ಹೀರೋ ಆಗುತ್ತಿದ್ದಾನೆಯೋ, ಕಾಶ್ಮೀರಿಗಳಿಗೆ ಅಫ್ಝಲ್‌ಗುರು ಹೀರೋ ಆಗಿದ್ದಾನೆಯೋ ಹಾಗೆಯೇ ಪಂಜಾಬ್‌ನ ಹೊಸ ತಲೆಮಾರಿಗೆ ಭಿಂದ್ರನ್‌ವಾಲೆಯೂ ಹೀರೋನಂತೆ ಕಾಣುತ್ತಿದ್ದಾರೆ. ಸಿಕ್ಖರ ಹಿತಾಸಕ್ತಿಗಾಗಿ ಹೋರಾಡಿ ಹುತಾತ್ಮನಾದವನಂತೆ ಕಾಣುತ್ತಿದ್ದಾನೆ. ಪಂಜಾಬ್‌ನ ರಾಜಕೀಯ ನಾಯಕರೂ ಇದಕ್ಕೆ ಪರೋಕ್ಷವಾಗಿ ತಮ್ಮ ಕುಮ್ಮಕ್ಕನ್ನು ನೀಡುತ್ತಿದ್ದಾರೆ. ಭಿಂದ್ರನ್ ವಾಲೆ ಕುಟುಂಬವನ್ನು ಸನ್ಮಾನಿಸುವಂತಹ ಪ್ರಕರಣಗಳು ಪಂಜಾಬ್‌ನಲ್ಲಿ ಜರಗಿದೆ. ಇಂದಿರಾಗಾಂಧಿ ಹಂತಕರನ್ನು ಶ್ಲಾಘಿಸುವಂತಹ ಹೇಳಿಕೆಗಳು ಪಂಜಾಬ್‌ನಿಂದ ಹೊರಬೀಳುತ್ತಿವೆ. ಹಾಗೆಯೇ ಪಂಜಾಬ್‌ನಲ್ಲಿ ಖಾಲಿಸ್ತಾನ್ ಉಗ್ರರು ಬೇರೆ ಬೇರೆ ಸಂಘಟನೆಗಳ ಹೆಸರಲ್ಲಿ ಮತ್ತೆ ಒಟ್ಟಾಗುತ್ತಿದ್ದಾರೆ ಎಂಬ ಆತಂಕದ ವಿವರಗಳು ಹೊರ ಬೀಳುತ್ತಿವೆ. ಈ ಸಂದರ್ಭದಲ್ಲಿ ಬಹಿರಂಗವಾಗಿ ಜೈಲಿಗೆ ನುಗ್ಗಿ ಆರೋಪಿಗಳನ್ನು ಬಿಡುಗಡೆ ಮಾಡುವುದರ ಹಿಂದೆ ಖಾಲಿಸ್ತಾನ್ ಉಗ್ರರ ಪಾತ್ರ ಎಷ್ಟಿದೆ ಎನ್ನುವುದು ತನಿಖೆ ನಡೆಯುವ ಅಗತ್ಯವಿದೆ. ಪಂಜಾಬ್ ಈಗಾಗಲೇ ಮಾದಕದ್ರವ್ಯಗಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಪ್ರತಿ ಕುಟುಂಬದಲ್ಲಿ ಒಬ್ಬನಾದರೂ ಮಾದಕ ವ್ಯಸನಗಳಿಗೆ ಬಲಿಯಾದ ವ್ಯಕ್ತಿಯಿರುತ್ತಾನೆ ಎಂದು ಸಮೀಕ್ಷೆ ತಿಳಿಸುತ್ತದೆ. ಉಗ್ರವಾದಿಗಳು ಈ ಮಾದಕ ವ್ಯಸನಿಗಳ ದುರ್ಬಳಕೆ ಮಾಡಿಕೊಂಡು ತಮ್ಮ ಕಾರ್ಯಸಾಧನೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಹೀಗಿರುವಾಗ ನಾಭಾ ಜೈಲಿಗೆ ಉಗ್ರರು ಮಾಡಿರುವ ದಾಳಿ ಅಲ್ಲಿನ ಪೊಲೀಸ್ ವ್ಯವಸ್ಥೆಯ ಗುಣಮಟ್ಟ ಎಷ್ಟು ಪಾತಾಳಕ್ಕೆ ತಲುಪಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

ಇದು ಕೇವಲ ನಾಭಾಕ್ಕಷ್ಟೇ ಸಂಬಂಧಿಸಬೇಕಾಗಿಲ್ಲ. ಇಂದು ದೇಶಾದ್ಯಂತ ನಮ್ಮ ಬಂದೀಖಾನೆಗಳ ಸುಧಾರಣೆ ನಡೆಸಬೇಕಾದ ಅಗತ್ಯ ತುರ್ತಾಗಿದೆ. ಭೌತಿಕ ಸಲಕರಣೆಗಳಿಗೆ ಆದ್ಯತೆ ಕೊಡುವುದೇನೋ ಹೌದು. ಆದರೆ ಅದಕ್ಕೂ ಮೊದಲು ಜೈಲು ಸಿಬ್ಬಂದಿಗೆ ತಮ್ಮ ವೃತ್ತಿ ವೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಕ್ರಿಮಿನಲ್‌ಗಳ ಜೊತೆಗೆ ಸೇರಿಕೊಂಡು ತಾವೂ ಕ್ರಿಮಿನಲ್‌ಗಳಾಗದಂತೆ, ಅಥವಾ ಹೊರಗಿನ ರಾಜಕೀಯ ಚಟುವಟಿಕೆಗಳ ಬಲಿಪಶುಗಳಾಗದಂತೆ ಅವರನ್ನು ತಿದ್ದಿ ತೀಡಬೇಕಾಗಿದೆ. ಇದರ ಜೊತೆ ಜೊತೆಗೆ ಪೊಲೀಸ್ ಸಿಬ್ಬಂದಿಗಳಿಗೆ ಅತ್ಯಾಧುನಿಕ ಸಲಕರಣೆಗಳನ್ನು ನೀಡುವ, ಬಂದಿಖಾನೆಯಲ್ಲಿ ಸಿಬ್ಬಂದಿಯನ್ನು ಹೆಚ್ಚಿಸುವ ಕೆಲಸವೂ ನಡೆಯಬೇಕು. ಇಲ್ಲವಾದರೆ ಪಂಜಾಬ್‌ನ ಪ್ರಕರಣ ಇತರ ಪ್ರದೇಶಗಳಲ್ಲಿರುವ ಕ್ರಿಮಿನಲ್‌ಗಳಿಗೂ ಸ್ಫೂರ್ತಿಯಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಮನದೆಳೆ