ವಿದ್ಯಾಗೆ ಫುಲ್ ಮಾರ್ಕ್ಸ್, ಚಿತ್ರದ ಸೆಕೆಂಡ್ ಹಾಫ್ ಫೇಲ್
ಮುಂಬೈ, ಡಿ.2: `ವಿದ್ಯಾ' ಪಾತ್ರಧಾರಿಯ ಹೆಸರನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದೆಯೆಂಬುದು ಬಿಟ್ಟರೆ ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಮ್ ಪಾಲ್ ಅಭಿನಯದ ಹಾಗೂ ಸುಜೊಯ್ ಘೋಷ್ ನಿರ್ದೇಶನದ `ಕಹಾನಿ 2' ( ಕಹಾನಿ 2 : ದುರ್ಗಾ ರಾಣಿ ಸಿಂಗ್ ಎಂದೂ ಹೇಳಲಾಗುತ್ತಿದೆ) ಹಿಂದಿನ ಚಿತ್ರಕ್ಕಿಂತ ಬಹಳಷ್ಟು ಭಿನ್ನವಾಗಿದೆ. ಚಿತ್ರದ ಕಥೆಯೂ ಹೊಸತು ಹಾಗೂ ಪಾತ್ರಧಾರಿಗಳು ಕೂಡ.
ಕಹಾನಿ 2 ಚಿತ್ರದ ಕಥೆ ಕೊಲ್ಕತ್ತಾದಲ್ಲಿ ನಡೆಯುತ್ತದೆ. ಚಿತ್ರದ ಪ್ರಮುಖ ಪಾತ್ರಧಾರಿ ವಿದ್ಯಾ ಬಾಲನ್ ಈ ಚಿತ್ರದಲ್ಲಿ ದುರ್ಗಾ ರಾಣಿ ಸಿಂಗ್ ಪಾತ್ರ ನಿರ್ವಹಿಸುತ್ತಿದ್ದು ಚಿತ್ರದಲ್ಲಿ ಆಕೆ ಆರು ವರ್ಷದ ಬಾಲಕಿ ಮಿಲಿ ಎಂಬಾಕೆಯನ್ನು ಅಪಹರಿಸಿದ ಹಾಗೂ ಬಾಲಕಿಯ ಅಜ್ಜಿಯನ್ನು ಕೊಲೆಗೈದ ಆರೋಪ ಹೊತ್ತಿರುತ್ತಾಳೆ. ಮಿಲಿ ಎಂಬ ಮಗಳಿರುವ ವಿದ್ಯಾ ಸಿನ್ಹಾ ಎಂಬ ಮಹಿಳೆಯಾಗಿಯೂ ಆಕೆ ಸಮಾನಾಂತರ ಬದುಕೊಂದನ್ನು ಬದುಕುತ್ತಿರುತ್ತಾಳೆ. ನಿಜವಾಗಿಯೂ ಗೊಂದಲ ಹುಟ್ಟಿಸುತ್ತದೆ ಅಲ್ಲವೇ ? ಇದು ಹೇಗೆ ಎಂಬುದು ಚಿತ್ರ ವೀಕ್ಷಿಸಿದರಷ್ಟೇ ತಿಳಿಯುವುದು.
ಮಕ್ಕಳ ಲೈಂಗಿಕ ದೌರ್ಜನ್ಯ ಈ ಚಿತ್ರದ ಕಥಾವಸ್ತುವಾಗಿದ್ದು. ಚಿತ್ರದ ಪ್ರಥಮಾರ್ಧದಲ್ಲಿ ನಾಯಕಿ ದುರ್ಗಾ ರಾಣಿ ಸಿಂಗ್ ಮಗುವನ್ನು ಅದನ್ನು ಶೋಷಿಸುವವನ ಕೈಯ್ಯಿಂದ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ.
ಚಿತ್ರದಲ್ಲಿ ಇನಸ್ಪೆಕ್ಟರ್ ಇಂದರ್ ಜಿತ್ ಆಗಿ ಅರ್ಜುನ್ ರಾಮ್ ಪಾಲ್ ಅಭಿನಯಿಸುತ್ತಿದ್ದು. ಸಣ್ಣ ಊರೊಂದಕ್ಕೆ ವರ್ಗಾವಣೆಗೊಂಡಿರುವ ಈ ಅಧಿಕಾರಿ ಪ್ರಮೋಶನ್ ಗಾಗಿ ಕಾಯುತ್ತಿದ್ದು ಹಾಗೇನಾದರೂ ಆದಲ್ಲಿ ತನ್ನ ಕುಟುಂಬದೊಂದಿಗೆ ಮರಳಿ ತನ್ನ ನಗರಕ್ಕೆ ವಾಸ ಬದಲಿಸುವ ಇರಾದೆ ಹೊಂದಿರುತ್ತಾನೆ.
ಚಿತ್ರದ ಪ್ರಥಮಾರ್ಧ ಪರಿಪೂರ್ಣ ಮನರಂಜನೆ ನೀಡಿದರೆ ದ್ವಿತೀಯಾರ್ಧ ಎಲ್ಲೋ ಹಳಿ ತಪ್ಪಿದ ಅನುಭವ ನೀಡುತ್ತದೆ. ಕೆಲವು ಗಂಭೀರ ಕ್ಷಣಗಳಿಗೆ ಹಾಸ್ಯ ಲೇಪನವೊದಗಿಸುವ ಯತ್ನವನ್ನು ನಿರ್ದೇಶಕ ಸುಜೊಯ್ ಘೋಷ್ ಮಾಡಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಇಲ್ಲಿ ವಿಫಲರಾಗಿದ್ದಾರೆ.ಚಿತ್ರದ ಪ್ಲಸ್ ಪಾಯಿಂಟ್ ವಿದ್ಯಾ ಬಾಲನ್ ಅವರ ಅಮೋಘ ಅಭಿನಯ. ಅರ್ಜುನ್ ರಾಮಪಾಲ್ ಅವರೂ ಉತ್ತಮ ನಿರ್ವಹಣೆ ತೋರಿದ್ದಾರೆ. ಮಿಲಿ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಕಹಾನಿ 2 ಚಿತ್ರದ ಪಾತ್ರಧಾರಿಗಳ ನಟನೆ ಅತ್ಯುತ್ತಮವಾಗಿದೆಯಾದರೂ ಚಿತ್ರದ ದ್ವಿತೀಯಾರ್ಧ ಪ್ರೇಕ್ಷಕರ ಮನಮುಟ್ಟುವಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು.