×
Ad

ಮುಸ್ಲಿಮರು ಸುಶಿಕ್ಷಿತರಾಗಲು ಜಮಾಅತ್‌ಗಳು ಮುತುವರ್ಜಿ ವಹಿಸಲಿ : ಡಾ.ಫಾರೂಕ್ ಕೊಲ್ಲಂ

Update: 2016-12-03 22:01 IST

ಕಾಪು,  ಡಿ.3 : ಮುಸ್ಲಿಮ್ ಸಮುದಾಯ ಧಾರ್ಮಿಕ ಶಿಕ್ಷಣದೊಂದಿಗೆ ಕೆಜಿ ಯಿಂದ ಪಿಜಿವರೆಗಿನ ಲೌಕಿಕ ಶಿಕ್ಷಣವನ್ನು ಪಡೆಯುವ ಮೂಲಕ ಸುಶಿಕ್ಷಿತ ಸಮುದಾಯವಾಗಿ ಮೂಡಿಬರಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಜಮಾಅತ್‌ಗಳು ಕಾರ್ಯನಿರ್ವಹಿಸಬೇಕೆಂದು ವಿದ್ವಾಂಸ ಡಾ.ಫಾರೂಕ್ ನಈಮಿ ಕೊಲ್ಲಂ ಹೇಳಿದ್ದಾರೆ.

ಮೂಳೂರಿನ ಅಲ್ ಇಹ್ಸಾನ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ 20ನೇ ವಾರ್ಷಿಕ ಮಹಾ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ಜಮಾಅತ್ ಸಂಗಮ ದಲ್ಲಿ ‘ಜಮಾಅತ್ ಆಡಳಿತ ಮತ್ತು ಅಭಿವೃದ್ಧಿ’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಇಸ್ಲಾಂ ಧರ್ಮ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರತಿಯೊಂದು ಜಮಾಅತ್‌ಗಳು ಶಿಕ್ಷಣದ ಬಗ್ಗೆ ಪ್ರತಿಯೊಂದು ಕುಟುಂಬದ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ಮೂಲಕ ಅವರ ಪ್ರತಿಭೆಗೆ ಬೆಳಕಾಗಬೇಕು ಎಂದು ತಿಳಿಸಿದರು.

ಬಡತನ, ಅನಕ್ಷರತೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಮುಸ್ಲಿಮ್ ಸಮುದಾಯ ಒಟ್ಟಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ. ಮನುಕುಲದ ಒಳಿತಿಗಾಗಿ ದುಡಿಯುವ ಸಮಾಜ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಸಯ್ಯಿದ್ ಜಅ್ಫರ್ ಅಸ್ಸಖಾಪ್ ತಂಙಳ್ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ತೌಫೀಕ್ ನಾವುಂದ ವಹಿಸಿದ್ದರು.

ಉಡುಪಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಸಂಯುಕ್ತ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಬಾವ ಹಾಜಿ, ರೇಂಜ್ ಜಂಇಯ್ಯತುಲ್ ಮುಅಲ್ಲಿಮ್ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಅಬೂಬಕ್ಕರ್ ಮುಸ್ಲಿಯಾರ್, ಎಸ್‌ವೈಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಯಿದಿನ್ ಗುಡ್‌ವಿಲ್, ಮೂಳೂರು ಅಂಜುಮಾನ್ ಖಾದಿಮುಲ್ ಮುಸ್ಲಿಮೀನ್ ದಪ್ಪುಸಮಿತಿಯ ಅಧ್ಯಕ್ಷ ಅಬೂ ಮುಹಮ್ಮದ್, ಉಚ್ಚಿಲ ಸಯ್ಯದ್ ಅರಬಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರರಝಾಕ್ ಹಾಜಿ, ಸಂಯುಕ್ತ ಜಮಾಅತ್ ಗೌರವಾಧ್ಯಕ್ಷ ಹಾಜಿ ಅಬ್ದುಲ್ ರರಝಾಕ್ ಮೂಳೂರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೋಶಾಧಿಕಾರಿ ಕಾಸಿಂ ಬಾರ್ಕೂರು, ಆಬಿದ್ ಬ್ಯಾರಿ, ಎಂ.ಎಚ್.ಬಿ. ಮುಹಮ್ಮದ್, ಬಶೀರ್ ಮದನಿ ಕಟಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News