ಆತ್ಮಹತ್ಯೆ ಪ್ರಕರಣ: ಅಪರಾಧಿಗಳಿಗೆ 5ವರ್ಷ ಸಜೆ

Update: 2016-12-05 18:25 GMT

ಮಂಗಳೂರು, ಡಿ.5: ಬೆಳ್ತಂಗಡಿಯಲ್ಲಿ 2011ರ ಮಾರ್ಚ್ 16ರಂದು ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸೋಮವಾರ ತೀರ್ಪು ನೀಡಿರುವ ಮಂಗಳೂರಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆ ಮತ್ತು ತಲಾ 10 ಸಾವಿರ ರೂ.ದಂಡ ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ಕನ್ಯಾಡಿಯ ರೂಪಾವತಿ (34) ಮತ್ತು ಈಕೆಯ ಪ್ರಿಯಕರ ಬೆಳ್ತಂಗಡಿ ಕಾಣಿಯೂರು ಗ್ರಾಮದ ಪದ್ಮುಂಜ ಕೆದಿಲ ನಿವಾಸಿ ದಿನೇಶ್ ಗೌಡ(32)ಶಿಕ್ಷೆಗೊಳಗಾದ ಅಪರಾಧಿಗಳು. ರೂಪಾವತಿ ದಿನೇಶ್ ಗೌಡನೊಂದಿಗೆ ಸೇರಿಕೊಂಡು ಗಂಡ ಸದಾಶಿವ ಗೌಡ (40)ನ ಆತ್ಮಹತ್ಯೆಗೆ ಕಾರಣವಾಗಿದ್ದಳು.

ಸದಾಶಿವ ಗೌಡ ಮತ್ತು ದಿನೇಶ್ ಗೌಡ ಆತ್ಮೀಯ ಸ್ನೇಹಿತರಾಗಿದ್ದು, ಗದಗ್‌ನಲ್ಲಿ ಪಾಲುದಾರಿಕೆಯಲ್ಲಿ ಹೊಟೇಲ್ ವ್ಯಾಪಾರ ಆರಂಭಿಸಿದ್ದರು. 2005 ಆಗಸ್ಟ್ 22ರಂದು ಸದಾಶಿವ ಗೌಡರ ಮದುವೆ ರೂಪಾವತಿ ಎಂಬಾಕೆಯ ಜತೆ ನಡೆದಿತ್ತು. ರೂಪಾವತಿಯ ಮೇಲೆ ಕಣ್ಣಿಟ್ಟಿದ್ದ ದಿನೇಶ್ ಗೌಡ ಅಂತಿಮವಾಗಿ ಆಕೆಯ ಸಖ್ಯ ಬೆಳೆಸಿದ್ದ. ಇದು ಸದಾಶಿವ ಗೌಡರಿಗೆ ಗೊತ್ತಾಗಿ ಅವರು ಸಾಕಷ್ಟು ಬುದ್ದಿ ಹೇಳಿದ್ದರು. ಆದರೆ ಅದು ಲಕಾರಿಯಾಗದೇ ಇದ್ದಾಗ ಪತ್ರ ಬರೆದಿಟ್ಟು 2011ರ ಮಾರ್ಚ್ 15ರಂದು ವಿಷ ಸೇವಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಮಾ.16ರಂದು ಮೃತಪಟ್ಟಿದ್ದರು.

ಈ ಬಗ್ಗೆ ಸದಾಶಿವ ಅವರ ಸಹೋದರ ಶ್ರೀನಿವಾಸ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಬ್‌ಇನ್‌ಸ್ಪೆಕ್ಟರ್ ಎಂ.ಆರ್.ಎಂ. ತಹಶೀಲ್ದಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಅವರು ವಾದ-ಪ್ರತಿವಾದವನ್ನು ಆಲಿಸಿ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಇಬ್ಬರೂ ಆರೋಪಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆ ಮತ್ತು ತಲಾ 10ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದೆ.

ದಂಡದ ಮೊತ್ತದಲ್ಲಿ 15 ಸಾವಿರ ರೂ.ನ್ನು ಮೃತ ಸದಾಶಿವ ಗೌಡ ಅವರ ತಾಯಿಗೆ ನೀಡಬೇಕು ಮತ್ತು ಮೃತ ಸದಾಶಿವ ಗೌಡ ಅವರ ಪುತ್ರನಿಗೆ ಸೂಕ್ತ ಪುನರ್ವಸತಿ ವ್ಯವಸ್ಥೆ ಮಾಡುವಂತೆ ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದರ ಹೊರತಾಗಿ ಸದಾಶಿವ ಗೌಡರ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ಅವಕಾಶವಿದೆ ಎಂದು ತೀರ್ಪಿನಲ್ಲಿ ಹೇಳಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಒಟ್ಟು 15 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News