ಸಿಪಿಸಿಆರ್ ಶತಮಾನೋತ್ಸವ: ಡಿ.10ರಂದು ಕಿಸಾನ್ ಮೇಳ
ಕಾಸರಗೋಡು, ಡಿ.6: ಕೇಂದ್ರೀಯ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ (ಸಿಪಿಸಿಆರ್ಐ)ದ ಶತಮಾನೋತ್ಸವದ ಅಂಗವಾಗಿ ಡಿ.10ರಂದು ಕಿಸಾನ್ ಮೇಳ ಆಯೋಜಿಸಲಾಗಿದೆ.
ಅಂದು ತೆಂಗು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಗಾರ ಹಾಗೂ ಕಿಸಾನ್ ಮೇಳ ಜರಗಲಿದೆ ಎಂದು ಸಿಪಿಸಿಆರ್ಐ ನಿರ್ದೇಶಕ ಡಾ.ಪಿ.ಚೌಡಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಿಸಾನ್ ಮೇಳದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವರು. ಡಿ.10ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಉದ್ಘಾಟನೆ ನೆರವೇರಿಸುವರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಕಟ್ಟಡ, ಶತಮಾನೋತ್ಸವ ಪಾರ್ಕ್ ಹಾಗೂ ಮಿಲೇನಿಯಂ ಅತಿಥಿಗೃಹವನ್ನು ಸಚಿವರು ಉದ್ಘಾಟಿಸುವರು.
ಸಿಪಿಸಿಆರ್ಐನ ಸಾಧನೆ ಕುರಿತ ಪುಸ್ತಕವನ್ನು ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
ಕಿಸಾನ್ ಮೇಳದಂಗವಾಗಿ ಡಿ .10ರಿಂದ 13ರ ತನಕ ರಾಷ್ಟ್ರಮಟ್ಟದ ಕೃಷಿ ವಸ್ತು ಪ್ರದರ್ಶನ, ಸಂವಾದ, ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪ್ರಗತಿಪರ ಕೃಷಿಕರು ವಿಜ್ಞಾನಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಿಜ್ಞಾನಿ ಡಾ.ಮುರಳೀಧರ್, ಕೆ.ಪಿ.ಚಂದ್ರನ್, ಶ್ಯಾಮ್ಪ್ರಸಾದ್ ಉಪಸ್ಥಿತರಿದ್ದರು