×
Ad

ತಮಿಳುನಾಡಿನ ಅಮ್ಮನಾದ ‘ಅಮ್ಮು ’

Update: 2016-12-06 20:37 IST

 ಚೆನ್ನೈ, ಡಿ.6: ಭಾರತದಲ್ಲಿ ಕೆಲವು ಖ್ಯಾತ ರಾಜಕಾರಣಿಗಳು ಮತ್ತು ನಾಯಕರು ತಮ್ಮ ಅಧಿಕೃತ ಹೆಸರಿನ ಜೊತೆಗೆ ಜನರಿಗೆ ಪ್ರಿಯವಾದ ಇನ್ನೊಂದು ಹೆಸರಿನಿಂದ ಕರೆಸಿಕೊಳ್ಳುವುದು ಸಾಮಾನ್ಯ. ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾ ಇವರು ಬೇರೆ ಬೇರೆ ಹೆಸರುಗಳಿಂದ ಖ್ಯಾತರಾಗಿದ್ದಾರೆ.
     ಪ್ರಸ್ತುತ ಮಾಯಾವತಿ ‘ಬೆಹೆನ್‌ಜಿ’, ಮತ್ತು ಮಮತಾ ‘ದೀದಿ’ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಬೆಹೆನ್‌ಜಿ’ ಮತ್ತು ‘ದೀದಿ’ ಎಂದರೆ ಸಹೋದರಿ ಎಂದರ್ಥ. ಆದರೆ ಜಯಲಲಿತಾ ತಮಿಳುನಾಡಿನ ಜನರ ಪಾಲಿಗೆ ‘ಅಮ್ಮ ’ (ತಾಯಿ) ಆಗಿದ್ದಾರೆ. ಜಯಲಲಿತಾ ಚಿತ್ರರಂಗದಿಂದ ರಾಜಕೀಯಕ್ಕೆ ಬಂದವರು. ಚಿತ್ರತಾರೆಯಾಗಿದ್ದ ಅವರು ರಾಜಕೀಯ ರಂಗದಲ್ಲಿ ರಾಣಿಯಾಗಿ ಮೆರೆದವರು. ಖ್ಯಾತ ಪತ್ರಕರ್ತೆ ವಸಂತಿ ಅವರು ಹೇಳುವಂತೆ ಜಯಲಲಿತಾ ಚಿಕ್ಕಂದಿನಲ್ಲಿ ಮನೆ ಮಂದಿಗೆ ಮುದ್ದಿನ ‘ಅಮ್ಮು ’ ಆಗಿದ್ದರು.
ಜಯಲಲಿತಾ ಎರಡರ ಹರೆಯಕ್ಕೆ ಕಾಲಿಡುತ್ತಿದ್ದಂತೆ ಆಕೆಯ ತಂದೆ ನಿಧನರಾದರು. ಬಳಿಕ ಜಯಲಲಿತಾ ಬೆಂಗಳೂರಿನ ಅಜ್ಜನ ಮನೆ ಸೇರಿದರು. ಅಲ್ಲಿಯೇ ಅಮ್ಮು ಶಿಕ್ಷಣ ಪಡೆದರು. ಜಯ ಲಲಿತಾ ಬೆಂಗಳೂರಿನಲ್ಲಿದ್ದರು. ಅವರ ತಾಯಿ ಚೆನ್ನೈನಲ್ಲಿ ನೆಲೆಸಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಜಯಲಲಿತಾ ಹಲವು ಪದಕಗಳನ್ನು ಬಾಚಿಕೊಂಡಿದ್ದರು. ಅವರು ವಕೀಲೆಯಾಗುವ ಕನಸು ಕಂಡಿದ್ದರು. ಆದರೆ ಅವರನ್ನು ಚಿಕ್ಕಂದಿನಲ್ಲೇ ಚಿತ್ರರಂಗ ಕೈ ಬೀಸಿ ಕರೆದಿತ್ತು. ಮೊದಲು ಕನ್ನಡ ,ಬಳಿಕ ತಮಿಳು ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಎಂ.ಜಿ ರಾಮಚಂದ್ರನ್ ಮೂಲಕ ಅವರು ರಾಜಕೀಯ ಪ್ರವೇಶಿಸಿದ್ದರು.
  ವಿಧಾನಸಭೆಯಲ್ಲಿ ಅವಮಾನ: 1989ರಲ್ಲಿ ತಮಿಳುನಾಡಿನ ವಿಧಾನಸಭೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಬೆಂಬಲಿಗರ ನಡುವೆ ಜಟಾಪಟಿ ಸಂಭವಿಸಿತ್ತು. ಡಿಎಂಕೆಯ ಕರುಣಾನಿಧಿ ಮುಖ್ಯ ಮಂತ್ರಿಯಾಗಿದ್ದರು. ಜಯಲಲಿತಾ ವಿಪಕ್ಷದ ನಾಯಕಿಯಾಗಿದ್ದರು. ಕರುಣಾನಿಧಿ ಕೈಯಿಂದ ಮುಂಗಡ ಪತ್ರದ ಪ್ರತಿಯನ್ನು ಕಿತ್ತುಕೊಂಡು ಹರಿದು ಬಿಸಾಡಿದ್ದರು. ಎಐಎಡಿಎಂಕೆ ಶಾಸಕರು ಕರುಣಾನಿಧಿಯನ್ನು ನೆಲಕ್ಕೆ ಬೀಳಿಸಿದ್ದರು.
 ಕರುಣಾನಿಧಿ ಅವರನ್ನು ಅವಮಾನಿಸಿದಕ್ಕೆ ಕೋಪಗೊಂಡ ಡಿಎಂಕೆ ಶಾಸಕರು ಜಯಲಲಿತಾ ಸದನದಿಂದ ಹೊರ ಹೋಗುತ್ತಿದ್ದಂತೆ ಆಕೆಯ ಸೀರೆ ಎಳೆದು ಸೇಡು ತೀರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ಜಯಲಲಿತಾ ಮಹಿಳೆಯರಿಗೆ ರಕ್ಷಣೆ ಇಲ್ಲದ ವಿಧಾನ ಸಭೆಗೆ ಇನ್ನೆಂದು ಕಾಲಿರಿಸುವುದಿಲ್ಲವೆಂದು ಶಪಥಕೈಗೊಂಡಿದ್ದರು. ತನ್ನ ಕೈಗೆ ಅಧಿಕಾರ ಸಿಗುವ ತನಕ ಅವರು ವಾಪಸಾಗಲಿಲ್ಲ. ರಾಜಕೀಯ ರಂಗದಲ್ಲಿ ಕ್ರಾಂತಿಕಾರಿ ನಾಯಕಿಯಾಗಿ ಬೆಳೆದ ಜಯಲಲಿತಾ ‘ಪುರುಚಿ ತಲೈವಿ’ ಆಗಿ ರಾಜಕೀಯ ರಂಗದಲ್ಲಿ ತನ್ನ ಛಾಪು ಮೂಡಿಸಿದ್ಧಾರೆ.
  ಅಮ್ಮ ಮುಖ್ಯಮಂತ್ರಿ: 1991ರಲ್ಲಿ ಜಯಲಲಿತಾ ತಮಿಳುನಾಡು ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ತಮಿಳುನಾಡಿನಲ್ಲಿ ಅಮ್ಮ ಶಕೆ ಆರಂಭಗೊಂಡಿತು. ಆಗ ರಾಜ್ಯದಲ್ಲಿ ವ್ಯಾಪಕವಾಗಿದ್ದ ಹೆಣ್ಣು ಶಿಶು ಹತ್ಯೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಿದರು. 1992ರಲ್ಲಿ ತೊಟ್ಟಿಲು ಮಗು ಯೋಜನೆ (ತೊಟ್ಟಲು ಕುಝಾಂಧೈ)ಯೋಜನೆಯನ್ನು ಜಾರಿಗೊಳಿಸಿದರು. ಇದು ಅವರ ಕಲ್ಪನೆಯ ಕೂಸಾಗಿತ್ತು.ಇದು ಅವರ ಯಶಸ್ವಿ ಯೋಜನೆ. ಇವರ ಈ ಯೋಜನೆಗೆ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಸಹಸ್ರಾರು ಹೆಣ್ಣು ಮಕ್ಕಳಿಗೆ ಬದುಕುವ ಹಕ್ಕು ದೊರೆಯಿತು. ತೊಟ್ಟಿಲ ಮಗು ಯೋಜನೆಯ ಮೂಲಕ ತಮಿಳುನಾಡು ಜನತೆಯೊಂದಿಗೆ ಅವರ ಭಾವನಾತ್ಮಕ ಸಂಪರ್ಕ ಬೆಳೆಯಿತು. ನಿಜ ಅರ್ಥದಲ್ಲಿ ತಮಿಳುನಾಡಿನ ಅಮ್ಮ ಆಗಿ ಗುರುತಿಸಿಕೊಂಡರು.
 ಅಮ್ಮಾ  ಬ್ರಾಂಡ್ : 2011ರ ಬಳಿಕ ಜಯಲಲಿತಾ ಅವರ ಅಮ್ಮಾ ಬ್ರಾಂಡ್ ಬೆಳೆಯಿತು. ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದರು. ಮುಖ್ಯ ಮಂತ್ರಿಯ ಕಚೇರಿ ಜನಸಾಮಾನ್ಯರ ಕಲ್ಯಾಣಕ್ಕೆ ಇರುವಂತಹದ್ದು, ಮುಖ್ಯ ಮಂತ್ರಿ ರಾಜ್ಯದ ಜನತೆಗೆ ತಾಯಿ ಇದ್ದಂತೆ ಎಂಬ ಸಂದೇಶ ನೀಡಿದರು. ಅಮ್ಮಾ ಕ್ಯಾಂಟೀನ್, ಅಮ್ಮಾ ಸಾಲ್ಟ್, ಅಮ್ಮಾ ಫಾರ್ಮೆಸಿ, ಅಮ್ಮಾ ಸಿಮೆಂಟ್, ಅಮ್ಮಾ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಿದ ಜಯ ಲಲಿತಾ ತಮಿಳುನಾಡಿನ ಪ್ರೀತಿಯ ಅಮ್ಮನಾಗಿ ಮೆಚ್ಚುಗೆ ಗಳಿಸಿದರು.
     ಕಳೆದ ಸೆಪ್ಟಂಬರ್‌ನಲ್ಲಿ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅನುಕೂಲಕ್ಕಾಗಿ ಮಕ್ಕಳ ಮದುವೆ ಉದ್ದೇಶಕ್ಕಾಗಿ ಹವಾನಿಯಂತ್ರಿತ ‘ಅಮ್ಮಾ ಮ್ಯಾರೇಜ್ ಹಾಲ್’ ನಿರ್ಮಾಣಕ್ಕೆ ಚಾಲನೆ ನೀಡಿದರು. ವಿಪಕ್ಷಗಳಿಗೆ ಅವರ ಯೋಜನೆಗಳು ಮರ್ಮಾಘಾತ ನೀಡಿತ್ತು. ಜಯಲಲಿತಾ ತಮಿಳುನಾಡಿನ ಜನತೆಗೆ ಅಮ್ಮನಾಗಿ ಅವರ ಆವಶ್ಯಕತೆಗಳನ್ನು ಪೂರೈಸಿದ್ದಾರೆ. ಮುಖ್ಯಮಂತ್ರಿಯಾಗಿ ಜನತೆಗೆ ಏನನ್ನು ನೀಡಬೇಕೋ ಅವೆಲ್ಲವನ್ನು ನೀಡಲು ಶ್ರಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News