ಶ್ರೀ ಪಡ್ರೆ ಅವರಿಗೆ ‘ಕುಸುಮಾಶ್ರಿ’ ಪ್ರಶಸ್ತಿ : ಡಿ.11ರಂದು ಪ್ರಶಸ್ತಿ ಪ್ರದಾನ ಸಮಾರಂಭ

Update: 2016-12-07 11:33 GMT

ಪುತ್ತೂರು,ಡಿ.7: ಕುಂದಾಪುರ ನಾಗೂರಿನ ಕುಸುಮಾ ಫೌಂಡೇಶನ್ ಇವರು ಪ್ರಾಯೋಜಿಸುವ ’ಕುಸುಮಾಶ್ರೀ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಭಾಜನರಾಗಿದ್ದಾರೆ.

        ಡಿ. 11ರಂದು ಸಂಜೆ ನಾಗೂರಿನ ಕುಸುಮ ಸಂಸ್ಥೆಯ ವಠಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಶ್ರೀ ಪಡ್ರೆಯವರು ನೆಲಜಲ ಸಂರಕ್ಷಣೆ, ಅಲಕ್ಷಿತ ಬೆಳೆ ಹಲಸು, ಕೃಷಿಕರ ಕೈಗೆ ಲೇಖನಿ ಮೊದಲಾದ ಆಂದೋಳನಗಳಿಗೆ ಶ್ರೀಕಾರ ಬರೆದವರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ. ಕನ್ನಾಡಿನ ವಿವಿಧ ಪತ್ರಿಕೆಗಳ ಅಂಕಣಗಾರರು. ಈಚೆಗೆ ಪುತ್ತೂರಿನಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಜರುಗಿದ ’ವಾಟ್‌ಆ್ಯಪ್ ಪತ್ರಿಕೋದ್ಯಮ’ ಶಿಬಿರದ ರೂವಾರಿಯಾಗಿದ್ದಾರೆ.

ತಿರುವನಂತಪುರಂನ ಜಾಕ್‌ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಯು ಈಚೆಗೆ ಶ್ರೀ ಪಡ್ರೆಯವರಿಗೆ ’ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಎಂದು ಗೌರವಿಸಿತ್ತು. ಇದಕ್ಕೂ ಮೊದಲು ಕೊಚ್ಚಿಯ ದಿಶಾ ಟ್ರಸ್ಟ್ ಅವರಿಗೆ ಇದೇ ಕೆಲಸಕ್ಕಾಗಿ ’ದಿಶಾ ಗ್ರೀನ್ ಗ್ಲೋಬ್ ಪ್ರಶಸ್ತಿ’ ನೀಡಿತ್ತು.

        ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹದಿನೈದು ಕೃತಿಗಳನ್ನು ರಚಿಸಿರುವ ಶ್ರೀ ಪಡ್ರೆ ಅವರು ಇತ್ತೀಚೆಗೆ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದ ’ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ’ ಎನ್ನುವ ಕೃತಿಯನ್ನು ರಚಿಸಿದ್ದಾರೆ.

        ರಾಷ್ಟ್ರೀಯ, ರಾಜ್ಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದೆ ಶ್ರೀ ಪಡ್ರೆಯವರಿಗೆ ಈಗ ’ಕುಸುಮಾಶ್ರೀ’ ಪ್ರಶಸ್ತಿಯ ಗೌರವ ಸಲ್ಲುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News