ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಉದ್ಘಾಟನೆ
ಮಂಗಳೂರು,ಡಿ.7; ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (ಬಿಸಿಸಿಐ)ನ ಉದ್ಘಾಟನಾ ಸಮಾರಂಭವು ಇಂದು ನಗರದಲ್ಲಿ ನಡೆಯಿತು.
ರಾಜ್ಯ ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಣ್ಣ ಅಥವಾ ದೊಡ್ಡ ಪ್ರಮಾಣದ ವ್ಯಾಪಾರದಲ್ಲಿ ಮಂಗಳೂರಿಗೆ ಬ್ಯಾರಿಗಳ ಕೊಡುಗೆ ಅಪಾರವಾಗಿದೆ. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (ಬಿಸಿಸಿಐ) ನ್ನು ಸ್ಥಾಪಿಸುವ ಮೂಲಕ ಬ್ಯಾರಿ ವ್ಯಾಪಾರಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಶ್ಲಾಘನೀಯ. ಸಾಮುದಾಯಿಕ ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ರಚನೆಯಾಗಿರುವ ಬಿಸಿಸಿಐಗೆ ಸಹಕಾರ ನೀಡುವುದಾಗಿ ಹೇಳಿ ಶುಭ ಹಾರೈಸಿದರು.
ಟೀಕೇಸ್ ಇಂಟಿರಿಯರ್ ಸೊಲ್ಯುಷನ್ಸ್ ಪ್ರೈ ಲಿಮಿಟೆಡ್ನ ನಿರ್ದೇಶಕ ಉಮರ್ ಟಿ.ಕೆ. ಮಾತನಾಡಿ, ಬಿಸಿಸಿಐ ಸ್ಥಾಪನೆಯ ಮೂಲಕ ಬ್ಯಾರಿ ಸಮುದಾಯದಲ್ಲಿ ಸಂಘಟಿತ ಅಭಿವೃದ್ಧಿ ನಡೆಯಬೇಕಾಗಿದೆ. ಪರಸ್ಪರ ಸಹಕಾರ ಮತ್ತು ಸಂಘಟಿತರಾಗಿ ದುಡಿಯವುದರಿಂದ ಸಾಮಾಜಿಕ ಪ್ರಗತಿ ಕಾಣಲು ಸಾಧ್ಯವಾಗುತ್ತದೆ.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಬ್ಯಾರಿ ಸಮುದಾಯದ ಹಿತದೃಷ್ಟಿಯಿಂದ ಬಿಸಿಸಿಐ ಅಗತ್ಯವಿತ್ತು. ತಡವಾದರೂ ಸಂಘಟನೆಯನ್ನು ರಚಿಸಿರುವುದು ಸಂತೋಷವಾಗಿದೆ. ವ್ಯಾಪಾರದಲ್ಲಿ ಮಂಗಳೂರು ನಗರಕ್ಕೆ ಬ್ಯಾರಿಗಳ ಕೊಡುಗೆ ಅಪಾರವಾಗಿದ್ದು, ಇಂತಹ ಕೊಡುಗೆ ಭವಿಷ್ಯದಲ್ಲೂ ಮುಂದುವರಿಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಅಲ್ಆಜ್ಟ್ರೇಡಿಂಗ್ ಎಲ್ಎಲ್ಸಿ ಯ ಆಡಳಿತ ನಿರ್ದೇಶಕ ಸೈಯದ್ ಅಬ್ದುಲ್ ಖಾದರ್(ಬಾಷು), ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿ ಸೋಜ, ಶಾಸಕರಾದ ಮೊದಿನ್ ಬಾವ, ಕೆನರಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಜೀವನ್ ಸಲ್ದಾನ, ವೈ. ಮುಹಮ್ಮದ್ ಕುಂಞಿ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ಇಕ್ಬಾಲ್ ಅಹ್ಮದ್, ಖಾಲಿದ್ ಬಾವ, ಅರ್ಶದ್ ಮೊಹ್ತೆಶಾಂ, ಉಪಾಧ್ಯಕ್ಷ ಝಕರಿಯಾ ಜೋಕಟ್ಟೆ, ಅಬ್ದುಲ್ ರವೂಫ್ ಪುತ್ತಿಗೆ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (ಬಿಸಿಸಿಐ) ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಸ್ತಾವನೆಗೈದರು.