ಬರಹಗಳು ಮಾನವನ ಉದ್ದಾರಕ್ಕೆ ಪೂರಕವಾಗಿರಲಿ : ವಿ.ಗ.ನಾಯಕ
ಉಡುಪಿ, ಡಿ.11: ಬರಹಗಳು ಮಾನವ ಜಾತಿಯ ಉದ್ದಾರಕ್ಕೆ ಪೂರಕ ವಾಗಿರಬೇಕು. ಆ ಮೂಲಕ ಅವುಗಳು ಸಮಾಜದಲ್ಲಿ ಬಹುಕಾಲ ಉಳಿ ಯುವಂತಾಗಬೇಕು ಎಂದು ಸಾಹಿತಿ ವಿ.ಗ.ನಾಯಕ ಹೇಳಿದ್ದಾರೆ.
ಕರ್ನಾಟಕ ಚುಕುಟು ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ರವಿವಾರ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರೊ.ಅಕ್ಬರ್ ಅಲಿ ಅವರ ಬದುಕು ಬರಹ ವಿಚಾರಗೋಷ್ಠಿ ಮತ್ತು ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚುಟುಕುಗಳಲ್ಲಿ ಗಾಂಭೀರ್ಯತೆ, ಕವಿತ್ವ ಇಲ್ಲ ಎಂಬ ಕೀಳರಿಮೆ ಬಿಡ ಬೇಕು. ಕವಿಗಳು ಜನಪದ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಬೇಕು. ಇದು ಉತ್ತಮ ಚುಟುಕುಗಳ ರಚನೆಗೆ ಪ್ರೇರಣೆಯಾಗಲಿದೆ. ಜಾತ್ಯತೀತ ಮನೋಭಾವದ ಅಕ್ಬರ್ ಅಲಿ ಸಮಾಜದಲ್ಲಿ ನಡೆಯುತ್ತಿದ್ದ ದೌರ್ಜನ್ಯ ಹಾಗೂ ಶೋಷಣೆಗಳ ವಿರುದ್ಧ ತಮ್ಮ ಚುಟುಕುಗಳ ಮೂಲಕ ಸಮರ್ಥವಾಗಿ ಧ್ವನಿ ಎತ್ತಿದ್ದರು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮೇಟಿ ಮುದಿ ಯಪ್ಪ ವಹಿಸಿದ್ದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ನ ಕೇಂದ್ರ ಸಮಿತಿಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚೆನ್ನಬಸಪ್ಪ ಧಾರವಾಡ, ಕಾಲೇಜಿನ ಭಾಷಾ ಶಿಕ್ಷಕರಾದ ರಾಮಚಂದ್ರ ಭಟ್, ರಾಮಕೃಷ್ಣ ಬಿ.ನಾಯಕ್ ಉಪಸ್ಥಿತರಿದ್ದರು.
ಚುಟುಕು ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಜಿ.ಯು.ನಾಯಕ್ ಸ್ವಾಗತಿಸಿದರು.
ಕಾರ್ಯದರ್ಶಿ ಸೋಮಶೇಖರ ಹಟ್ಟಿ ವಂದಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ರಾಜು ಎನ್.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಚಾರಗೋಷ್ಠಿ ಹಾಗೂ ಚುಟುಕು ಕವಿಗೋಷ್ಠಿ ನಡೆದವು.