ಕಲ್ಲಬೆಟ್ಟು : ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಮೂಡುಬಿದಿರೆ, ಡಿ.13 : ಎಲ್ಲಾ ಧರ್ಮಗಳಲ್ಲಿಯೂ ಧಾರ್ಮಿಕ ಭಾವನೆ ಇದೆ. ಎಲ್ಲಾ ಧರ್ಮಗಳ ಸಂದೇಶವೂ ಒಂದೇ ರೀತಿಯದ್ದಾಗಿದೆ. ಸರ್ವಧರ್ಮ ಸಮನ್ವಯದ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ನಮ್ಮ ನಮ್ಮ ಧರ್ಮ ಆಯಾಯ ರೀತಿಯ ನಡವಳಿಕೆಯಲ್ಲಿ ನಡೆದುಕೊಂಡು ಬಂದರೆ ಜಂಜಾಟಗಳು ಇರುವುದಿಲ್ಲವೆಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್ ಹೇಳಿದರು.
ಅವರು ಕಲ್ಲಬೆಟ್ಟು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಸೋಮವಾರ ನಡೆದ ನಲವತ್ತೊಂಭತ್ತನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಉದ್ಯಮಿ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ :
" ಭಾರತ್ ಜ್ಯೋತಿ" ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿರುವ ಮೂಡುಬಿದಿರೆಯ ಹಿರಿಯ ವಕೀಲ ಬಾಹುಬಲಿ ಪ್ರಸಾದ್ ಅವರನ್ನು ಪೂಜಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಿತಿಯ ಉಪಾಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ, ಮಂಜುನಾಥ ಪೈ, ಸಂಚಾಲಕ ಸುಂದರ ಶೆಟ್ಟಿ, ಖಜಾಂಜಿ ಪ್ರದೀಪ್ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಮೇಶ್ಚಂದ್ರ ಪಿ. ಕಾರ್ಯಕ್ರಮ ನಿರೂಪಿಸಿ ವರದಿ ವಾಚಿಸಿದರು. ಶ್ವೇತಾ ಪೈ ಸಂದೇಶ ಪತ್ರ ವಾಚಿಸಿದರು. ಶ್ರೇಯಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಗಣೇಶ್ ಪೈ ಗೊಲ್ಲ ವಂದಿಸಿದರು.