ಪಡುಬಿದ್ರಿ : ಮಾಲಿನ್ಯದಿಂದ ಸ್ಥಳೀಯರಲ್ಲಿ ಆತಂಕ

Update: 2016-12-15 17:57 GMT

ಪಡುಬಿದ್ರಿ, ಡಿ.15 : ಸುಮಾರು ನಾಲ್ಕು ದಿನದಿಂದ ಕಪ್ಪು ಬಣ್ಣಕ್ಕೆ ತಿರುಗಿರುವ ದುರ್ನಾತ ಬೀರುವ ಹೊಳೆಯ ನೀರು, ಕೃಷಿ ಚಟುವಟಿಕೆಗೆ ಸಮಸ್ಯೆ, ಕುಡಿಯುವ ನೀರಿಗೆ ತತ್ವಾರ, ಸತ್ತು ಬಿದ್ದಿರುವ ರಾಶಿ ರಾಶಿ ಮೀನುಗಳು. ಇದು ಕಂಡುಬಂದಿದ್ದು, ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರಿನ ಅಡ್ವೆಯ ಬೈಲುತೋಟ ಎಂಬಲ್ಲಿ. ಈ ಬಗ್ಗೆ ಸ್ಥಳೀಯರು ಆತಂಕಿತರಾಗಿದ್ದು, ಕುಡಿಯುವ ನೀರಿಗೂ ತಾತ್ವಾರಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಪಲಿಮಾರಿನ ಅಡ್ವೆಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಹೊಳೆಯಲ್ಲಿ ದುರ್ನಾತ ಬೀರುತಿತ್ತು. ಈ ಬಗ್ಗೆ ಪರಿಶೀಲಿಸಿದಾಗ ರಾಷಾಯನಿಕ ಮಿಶ್ರಿತ ಕಪ್ಪು ಬಣ್ಣದ ನೀರು ಮತ್ತು ರಾಶಿರಾಶಿ ಸತ್ತು ಬಿದ್ದಿರುವ ಮೀನುಗಳು ಹೊಳೆಯಲ್ಲಿ ತೇಲುತ್ತಿರುವುದು ಕಂಡುಬಂತು. ಸದ್ಯ ಅಣೆಕಟ್ಟು ತೆರೆದಿರದ ಕಾರಣ ನೀರು ನಿಂತಲ್ಲೇ ಶೇಖರಣೆಗೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಅನಿಲ ರೀತಿಯ ಪದರ ಹೆಚ್ಚಾಗುತ್ತಿದೆ.

ಅಣೆಕಟ್ಟು ತೆರೆದು ನೀರು ಹರಿಯಲು ಅನುವು ಮಾಡಿಕೊಟ್ಟರೆ ಈ ಹೊಳೆಯು ಮುಂದೆ ಶಾಂಭವಿ ನದಿಗೆ ಸೇರುವ ಕಾರಣ ಸ್ಥಳೀಯರು ಆತಂಕಿತರಾಗಿದ್ದಾರೆ. ಅಲ್ಲದೆ ಈ ಪ್ರದೇಶ ಕೃಷಿ ಭೂಮಿಗಳಿಗೆ ಈ ಹೊಳೆಯ ನೀರು ಮೂಲ ಆಧಾರವಾಗಿದ್ದು ನೀರು ಕಲುಷಿತಗೊಂಡಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಳಿಸಬೇಕಾಗಿದೆ.


ಗುರುವಾರ ಸಂಜೆ ಉಡುಪಿ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸೀಸ್ ಸಹಿತ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಸ್ಥಿತಿ ಅವಲೋಕನ ನಡೆಸಿದರು.

ನೀರು ಗಬ್ಬು ವಾಸನೆ ಬರಲು ಜೈವಿಕ ಕಾರಣಗಳಿದ್ದರು ಅನಿಲ ರೀತಿಯ ದ್ರವ್ಯ ಪದರ ಮತ್ತು ಸಣ್ಣ ಹುಳದ ಮರಿಗಳಂತಹ ವಸ್ತುಗಳು ಕಂಡು ಬಂದ ಹಿನ್ನಲೆಯಲ್ಲಿ ಸಮಸ್ಯೆಯ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೊಳೆಯ ಹರಿವಿನಲ್ಲಿರುವ ಎಲ್ಲಾ ಅಣೆಕಟ್ಟುಗಳ ವೀಕ್ಷಿಸಲು ಸೂಚಿಸಿದರು.

ನೀರು ಕಲುಷಿತಗೊಂಡಿರುವ ಬಗ್ಗೆ ಸ್ಥಳ ತನಿಖೆ ಮಾಡಿದ್ದೇವೆ. ಯಾವ ಮೂಲದಿಂದ ಮಲಿನವಾಗುತ್ತಿದೆ ಎಂದು ಕಂಡುಹಿಡಿಯಲು ಸಾಕಷ್ಟು ಪರಿಶೀಲನೆ ನಡೆಸಲಾಯಿತಾದರೂ ಮೂಲ ಪತ್ತೆಯಾಗಿಲ್ಲ. ಆದರೆ ನೀರು ಕಲುಷಿತಗೊಂಡಿರುವ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀರಿನ ಪರೀಕ್ಷೆ ನಡೆದ ಬಳಿಕ ಸ್ಪಷ್ಟ ಚಿತ್ರಣ ಸಿಗಬಹುದು. ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ಸೂಚಿಸಿದ್ದೇನೆ ಎಂದು ಪ್ರಿಯಾಂಕಾ ಮೇರಿ ಫ್ರಾನ್ಸೀಸ್ ಪತ್ರಿಕೆಗೆ ತಿಳಿಸಿದರು.

ಈ ಹೊಳೆಯ ಸುತ್ತಮುತ್ತ ಹಲವರು ಮನೆಗಳಿದ್ದು, ಕುಡಿಯುವ ನೀರಿನ ಮೂಲವೂ ಈ ಹೊಳೆಗೆ ಅಂಟಿಕೊಂಡಿರುವ ಹಿನ್ನಲೆಯಲ್ಲಿ ಸ್ಥಳೀಯ ಕೆಲವು ಮನೆಗಳ ಬಾವಿಯ ನೀರನ್ನು ಆರೋಗ್ಯ ಇಲಾಖೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ ಎಂದು ತಾಲ್ಲೂಕು ಪಂಚಾಯತಿ ಸದಸ್ಯ ದಿನೇಶ್ ಕೋಟ್ಯಾನ್ ತಿಳಿಸಿದ್ದಾರೆ.

ಸ್ಥಳೀಯರಲ್ಲಿ ಆತಂಕ:

ಸ್ಥಳೀಯವಾಗಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜನರು ಸ್ಥಳೀಯ ಕೈಗಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶಕ್ಕೆ ಹೊಂದಿಕೊಂಡೇ ನಂದಿಕೂರು ಕೈಗಾರಿಕಾ ಪ್ರದೇಶ ಮತ್ತು ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಇದ್ದು ಕೈಗಾರಿಕಾ ಪ್ರದೇಶದಲ್ಲಿರುವ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಕಂಪನಿಯ ತ್ಯಾಜ್ಯಗಳು ಹೊಳೆಯ ಸೇರಿರಬಹುದೇ ಅಥವಾ ಯುಪಿಸಿಎಲ್‌ನ ಬೂದಿಹೊಂಡದಿಂದ ಸೋರಿಕೆ ಆಗಿರಬಹುದೇ ಎಂದು ಆರೋಪಿಸಿದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸಹಿತ ಎಲ್ಲಾ ಅಧಿಕಾರಿಗಳು ಯುಪಿಸಿಎಲ್, ಕೆಐಎಡಿಬಿ ಮತ್ತು ಸ್ಥಳೀಯ ಎಲ್ಲಾ ಅಣೆಕಟ್ಟುಗಳ ಪ್ರದೇಶಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಪಲಿಮಾರು ಗ್ರಾ.ಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಮುದರಂಗಡಿ ಗ್ರ.ಪಂ ಅಧ್ಯಕ್ಷ, ಎರಡೂ ಗ್ರಾ.ಪಂ ನ ಪಿಡಿಒ, ವಿಎ, ಸಿಬ್ಬಂದಿಗಳ ಸಹಿತ ತಾಲೂಕು ಕಛೇರಿಯ ಅಧಿಕಾರಿಗಳು, ಪಲಿಮಾರು ಗ್ರಾ.ಪಂ ನ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಮತ್ತಿತರರು ಸ್ಥಳದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News