ದೇರಳಕಟ್ಟೆ: ವಿದ್ಯಾರತ್ನ ಶಾಲೆಯಲ್ಲಿ ವಿಜಯ ದಿವಸ್ 2016
ಕೊಣಾಜೆ, ಡಿ.16 : ದೇಶ ಪ್ರೇಮವೆಂದರೆ ಅದು ನಿರಂತರ ಪ್ರಕ್ರಿಯೆ. ದೇಶದ ಸಂಪತ್ತು ಉಳಿಸುವುದು, ನಮ್ಮ ಭೂಮಿಯನ್ನು ಕಾಪಾಡುವ ಪ್ರಕ್ರಿಯೆ ದೇಶಪ್ರೇಮ. ಸಿಕ್ಕ ಸಿಕ್ಕಲ್ಲಿ ಉಗುಳುವುದು ಸಲ್ಲದು. ಸ್ವಚ್ಛತೆ ಕಾಪಾಡಬೇಕು. ಒಟ್ಟು ದೇಶವನ್ನು ಎಲ್ಲವಿಧದದಲ್ಲೂ ಸದೃಢಗೊಳಿಸುವ ನಿಟ್ಟಿನಲ್ಲಿ ದೇಶಪ್ರೇಮ ಮನೆಯಿಂದಲೇ ಮೂಡಿ ಬರಬೇಕು ಎಂದು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.
ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಿಜಯ ದಿವಸ್ 2016 ಆಚರಣೆ ಯೋಧ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಕಾಲದಿಂದಲೂ ನಮ್ಮ ಶತ್ರುವಾಗಿಯೇ ಗುರುತಿಸಲ್ಪಟ್ಟಿರುವ ಪಾಕಿಸ್ತಾನದ ವಿರುದ್ಧ ಭಾರತ ನಡುವೆ ನಡೆದ ಮೂರು ಯುದ್ಧಗಳಲ್ಲಿ ಮೊದಲನೆಯ ಎರಡು ಯುದ್ಧಗಳು ಕಾಶ್ಮೀರ ಸಂಬಂಧಿ ಯಾಗಿದ್ದರೂ, 1971ರ ಯುದ್ಧ ಬಾಂಗ್ಲಾ ಹೊಸತಾಗಿ ಜನ್ಮ ತಾಳಿದ ಬಾಂಗ್ಲಾ ಪರವಾಗಿ ನಡೆಯಿತು. ಈ ಯುದ್ಧ ಡಿ. 3ರಿಂದ 16ರ ತನಕ ಒಟ್ಟು 13ದಿನಗಳ ಕಾಲ ನಡೆದಿದ್ದು ಯುದ್ಧದಲ್ಲಿ ಪಾಕಿಸ್ತಾನ ಭಾರತಕ್ಕೆ ಸಂಪೂರ್ಣ ಶರಣಾಯಿತು. ಎರಡನೆಯ ಮಹಾಯುದ್ಧದ ಬಳಿಕ 93ಸಾವಿರದಷ್ಟು ಸಂಖ್ಯೆಯಲ್ಲಿ ಶತ್ರುರಾಷ್ಟ್ರದ ಸೈನಿಕರು ಶರಣಾದ ಪ್ರಕರಣ ಇದಾಗಿ ದಾಖಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಿ., ಭಾರತೀಯ ಭೂಸೇನೆಯ ಹವಿಲ್ದಾರ್ ಮೊಹಮ್ಮದ್ ಕೆ ಹಾಗೂ ಭಾರತೀಯ ನೌಕಾ ಸೇನೆಯ ಸಿ.ಪಿ.ಒ ವಿಲಿಯಂ ಫೆರ್ನಾಂಡಿಸ್ ಅವರಿಗೆ ಯೋಧರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಮಾರ್ಗದರ್ಶಕ , ಬ್ರಿಗೇಡಿಯರ್ ಐ.ಎನ್. ರೈ, ಕರ್ನಲ್ ಎನ್.ಎಸ್. ಭಂಡಾರಿ, ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿಪಿಒ ವಿಕ್ರಮ್ ದತ್ತ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಹರೇಕಳ, ಬೆಳ್ಮ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ. ಇದಿನಬ್ಬ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ವಿದ್ಯಾರತ್ನ ಸಂಸ್ಥೆಯ ರತ್ನ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ , ಸೈನಿಕರಾದ ಜೆ.ಪಿ. ರೈ, ಭಗವಾನ್ದಾಸ್ ಶೆಟ್ಟಿ , ಉಸ್ಮಾನ್ ಕೊಕ್ಕಾಡಿ ಹಾಗೂ ಲತೀಫ್ ಉಪಸ್ಥಿತರಿದ್ದರು.
ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಶಿಕ್ಷಕಿ ಭಾರತಿ ಸೈನಿಕ ಶ್ರೀಕಾಂತ್ ಅವರನ್ನು, ಶಿಕ್ಷಕ ರವಿಕುಮಾರ್ ಕೋಡಿ ಅವರು ವಿಲಿಯಂ ಫೆರ್ನಾಂಡಿಸ್ ಅವರನ್ನು ಹಾಗೂ ಹವಿಲ್ದಾರ್ ಮೊಹಮ್ಮದ್ ಕೆ ಅವರನ್ನು ಶಿಕ್ಷಕಿ ದೀಕ್ಷಾ ಪರಿಚಯಿಸಿದರು. ಶಿಕ್ಷಕ ರಮೇಶ್ ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.