ಸಿದ್ಧಕಟ್ಟೆ: ಪಡಿತರ ಸೊಸೈಟಿಗೆ ಕಂದಾಯ ನಿರೀಕ್ಷಕರ ದಾಳಿ

Update: 2016-12-16 18:22 GMT

ಬಂಟ್ವಾಳ, ಡಿ.16: ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಯಲ್ಲಿ ಯಾವುದೇ ಪಡಿತರ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಸಂಗಬೆಟ್ಟು ಗ್ರಾಮದ ಗ್ರಾಮ ಸಭೆಯಲ್ಲಿ ದೂರು ನೀಡಿದ ಸಾರ್ವಜನಿಕರು ಪಡಿತರ ಸೊಸೈಟಿಯಲ್ಲಿ ಸಮಯಕ್ಕೆ ಸರಿಯಾಗಿ ಪಡಿತರ ಸಾಮಗ್ರಿ ಸಿಗುತ್ತಿಲ್ಲ ಹಾಗೂ ನಾಮ ಫಲಕವನ್ನು ಕೂಡಾ ಹಾಕಿರುವುದಿಲ್ಲ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ನವೀನ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಈ ನ್ಯಾಯಬೆಲೆಯ ಅಂಗಡಿಯಲ್ಲಿ ದಾಸ್ತಾನಿಟ್ಟಿದ್ದ ಪಡಿತರ ಸಾಮಗ್ರಿಗಳನ್ನು ಪರಿಶೀಲಿಸಿತ್ತು. ಹಾಗೆಯೇ ಪಡಿತರರ ಹಿತಾಸಕ್ತಿಯಿಂದ ಅಗತ್ಯ ಪ್ರಕಟನೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಮತ್ತು ಸೊಸೈಟಿಯ ಸುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಇಂತಹ ದೂರುಗಳು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಮೇಲಧಿಕಾರಿಯವರಿಗೆ ಶಿಫಾರಸು ಮಾಡಲಾಗುವುದು ಎಂದು ಕಂದಾಯ ನಿರೀಕ್ಷಕರ ತಂಡ ಎಚ್ಚರಿಕೆ ನೀಡಿದೆ. ಈ ದಾಳಿಯಲ್ಲಿ ಗ್ರಾಮ ಕರಣಿಕ ಜನಾರ್ದನ್, ಪ್ರವೀಣ್ ಕುಮಾರ್ ಸಿಬ್ಬಂದಿ ವೆಂಕಟರಮಣ, ಸತೀಶ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News