ಬಸ್ ಚಾಲಕ ನನ್ನು ನಿಂದಿಸಿ ಹಲ್ಲೆ ಮಾಡಿ ಜೈಲು ಸೇರಿದ ಕುಡುಕ ಮಹಾಶಯ!
ಮುಂಡಗೋಡ , ಡಿ.18 : ಗುಂಡಿನ ಮತ್ತೆ ಏರಿಸಿಕೊಂಡವ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುಡುಕ ಮಹಾಶಯ ಜೈಲು ಸೇರಿದ ಘಟನೆ ಶನಿವಾರ ಸಂಜೆ ನಡೆದಿದೆ.
ಹಲ್ಲೆಗೊಳಗಾದ ಬಸ್ ಚಾಲಕನನ್ನು ಹೊಳಬಸಪ್ಪ ಬಸಪ್ಪ ಶೀಲವಂತರ್ (36) ಎಂದು ತಿಳಿದು ಬಂದಿದೆ.
ಹಲ್ಲೆಮಾಡಿ ಜೈಲು ಸೇರಿದ ಕುಡುಕಮಹಾಶಯನನ್ನು ಶಬ್ಬೀರ ಮಸ್ತಾನಿ ಎಂದು ಗುರುತಿಸಲಾಗಿದೆ.
ಚಾಲಕ ಹೊಳಬಸಪ್ಪ ಶೀಲವಂತರ್ ಬಸ್ಸನ್ನು ಮುಂಡಗೋಡ ದಿಂದ ಯಲ್ಲಾಪುರಕ್ಕೆ ಹೊರಟಿದ್ದಾಗ ದಾರಿ ಮಧ್ಯಬರುವ ಗುಂಜಾವತಿ ಗ್ರಾಮದ ಬಳಿ ಆರೋಪಿತನಾದ ಶಬ್ಬಿರ ಮಸ್ತಾನಿ ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದನು. ಚಾಲಕನು ಹಾರ್ನ್ ಮಾಡಿ ಸರಿಯುವಂತೆ ಸೂಚಿಸಿದ್ದಾನೆ. 'ನಾನು ಸರಿದ ನಂತರವೇ ಬಸ್ ಹೋಗಬೇಕು' ಎಂದಾಗ , ಬಸ್ ಚಾಲಕ ಸೈಡಿನಿಂದ ಬಸ್ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು , ಆಗ ಕುಡುಕ ಮಹಾಶಯ ಬಸ್ಗೆ ಅಡ್ಡಗಟ್ಟಿ ಚಾಲಕನ ಶರ್ಟಹಿಡಿದು ಎಳೆದಾಡಿ ಮುಖಕ್ಕೆ ಬಾರಿಸಿದ್ದಾನೆ ಎಂದು ಹೇಳಲಾಗಿದ್ದು , ಇಷ್ಟರಲ್ಲಿ ಮಧ್ಯ ಪ್ರವೇಶಿಸಿದ ಬಸ್ ನಿರ್ವಾಹಕ ಅಖಂಡಪ್ಪಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಬಸ್ ಚಾಲಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುಂಡಿನ ಮತ್ತೆಯಲ್ಲಿ ಗಮ್ಮತ್ತು ತೋರಿಸಿದವನನ್ನು ಯಲ್ಲಾಪುರ ಜೈಲಿಗೆ ಕಳುಹಿಸಿದ್ದಾರೆ.