ಪೆರ್ಮನ್ನೂರು: ಸೌಹಾರ್ದ ಕ್ರಿಸ್ಮಸ್ ಸಂಗಮ ಕಾರ್ಯಕ್ರಮ
ಉಳ್ಳಾಲ,ಡಿ.21: ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ನೇತೃತ್ವದಲ್ಲಿ ಪೊಸಕುರಲ್ ಬಳಗದ ಸಹಕಾರದಲ್ಲಿ ಸೌಹಾರ್ದ ಕ್ರೀಸ್ಮಸ್ ಸಂಗಮ ಕಾರ್ಯಕ್ರಮವನ್ನು ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ಮೈದಾನದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಭಾಸ್ಕರ ರೈ ಕುಕ್ಕುವಳ್ಳಿಯರು, ದೊಡ್ಡ ದೊಡ್ಡ ಸುದ್ದಿವಾಹಿನಿಗಳು ಕೇವಲ ವಿಶೇಷ ಸುದ್ದಿಗಳನ್ನು ಪ್ರಸಾರ ಮಾಡಲೆಂದು ಕಾಯುತ್ತಿರುತ್ತವೆ, ಆದರೆ ಪೊಸಕುರಲ್ ಸುದ್ದಿವಾಹಿನಿ ಸರ್ವಧರ್ಮದವರನ್ನು ಸೇರಿಸಿಕೊಂಡು ಸಾಮರಸ್ಯದ ಕಾರ್ಯಕ್ರಮವನ್ನು ಸಡೆಸಿಕೊಂಡು ಬರುವುದು ಶ್ಲಾಘನೀಯ ಎಂದು ಹೇಳಿದರು.
ಉಳ್ಳಾಲ ನಗರಸಭೆ ಸದಸ್ಯರಾದ ಫಾರೂಕ್ ಉಳ್ಳಾಲ್ ಮಾತನಾಡಿ, "ಇವತ್ತಿಗೂ ಭಾರತ ವಿಶ್ವದಲ್ಲಿ ಎತ್ತರದ ಸ್ಥಾನದಲ್ಲಿರಲು ಈ ನೆಲದ ಭಾವೈಕ್ಯತೆ ಮತ್ತು ಸಾಮರಸ್ಯ ಕಾರಣ ಇನ್ನೂ ಕೂಡ ನಾವು ಸಾಮರಸ್ಯದಲ್ಲಿ ಬದುಕಬೇಕೆಂದು ತಿಳಿಸಿದರು".
ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಪಾಲನಾ ಮಂಡಳಿಯ ಕಾರ್ಯದರ್ಶಿ ಡೆಮೆಟ್ರಿಯಸ್ ಡಿ’ಸೋಜ ಮಾತನಾಡಿ "ಏಸು ಕ್ರಿಸ್ತರ ಸಂದೇಶ, ಸಾರ್ವಕಾಲಿಕ ಸತ್ಯವನ್ನು ತಿಳಿಹೇಳುತ್ತದೆ. ತನ್ನ ಧರ್ಮವನ್ನು ಪ್ರೀತಿಸಿ, ಇತರ ಧರ್ವಿಾಯರ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮೆಲ್ಲರ ಆದ್ಯ ಕರ್ತವ್ಯ" ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರು ಫಾ.ಜೆ.ಬಿ.ಸಲ್ದಾನ "ಉಳ್ಳಾಲ ಪ್ರದೇಶದಲ್ಲಿ ಈ ರೀತಿಯ ಸೌಹಾರ್ದ ಕೂಟ ನಡೆಯುತ್ತಿದ್ದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲವೆಂದು ಹೇಳಿದರು. ಕುಡ್ಲ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಶ್ರೀ ಕೃಷ್ಣಗಟ್ಟಿ ಅಡ್ಕ, ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಕೊಂಕಣಿ ಚಲನಚಿತ್ರದ ನಿರ್ಮಾಪಕ ವಿನ್ಸೆಂಟ್ ಡಿ’ಸೋಜ, ಸಂತ ಸಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲರಾದ ಎಡ್ವಿನ್ ಮಸ್ಕರೇನಸ್, ಪೊಸಕುರಲ್ ಬಳಗದ ಸಾಂಸ್ಕ್ರತಿಕ ಸಂಚಾಲಕರು ವಿನ್ಸೆಂಟ್ ನಝರತ್, ಪೊಸಕುರಲ್ ಬಳಗ ಮಹಿಳಾ ವಿಭಾಗದ ಅಧ್ಯಕ್ಷರು ಸುಹಾಸಿನಿ ಬಬ್ಬುಕಟ್ಟೆ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲೂಕಸ್ ಡಿ’ಸೋಜ ಸ್ವಾಗತಿಸಿದರು. ಪೊಸಕುರಲ್ ಬಳಗದ ನಿರ್ದೇಶಕರಾದ ವಿದ್ಯಾಧರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜಾಯ್ ಸಲ್ದಾನ ವಂದಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.