ಅಡ್ವೆ ನೀರು ಕಲುಷಿತ: ತಜ್ಞರಿಂದ ತನಿಖೆ ನಡೆಸಿ ಕ್ರಮ
ಉಡುಪಿ, ಡಿ.22: ಪಲಿಮಾರು ಗ್ರಾಪಂ ವ್ಯಾಪ್ತಿಯ ಅಡ್ವೆ ಹೊಳೆಗೆ ರಾಸಾ ಯನಿಕಯುಕ್ತ ನೀರನ್ನು ಹರಿದು ಬಿಟ್ಟು ಕಲುಷಿತಗೊಳಿಸಿ, ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಇಲಾಖೆಯ ತಜ್ಞರ ತಂಡ ತನಿಖೆ ನಡೆಸುತ್ತಿದ್ದು, ಅದರ ವರದಿಯಂತೆ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಆರಂಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ದಿನೇಶ್ ಕೋಟ್ಯಾನ್, ಕೆಲವು ದಿನಗಳಿಂದ ಫಲಿಮಾರು, ಸಾಂತೂರು, ನಂದಿಕೂರು ಪರಿಸರದ ನಾಲ್ಕು ಅಣೆಕಟ್ಟು ಇರುವ ಹೊಳೆಯಲ್ಲಿ ರಾಸಾಯನಿಕ ನೀರು ಹರಿದು ಹೋಗುತ್ತಿದ್ದು, ಕೃಷಿ ನೀರಾವರಿಗೆ ತೊಂದರೆಯಾಗಿರುವುದಲ್ಲದೆ ಸ್ಥಳೀಯ ಬಾವಿಗಳು ಮಲೀನ ಗೊಂಡಿವೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ ಎಂದು ದೂರಿದರು.
ರಾಸಾಯಿನಿಕ ನೀರು ಹರಿದು ಬಿಟ್ಟು ಹೊಳೆಯ ನೀರು ಮಲೀನ ಮಾಡಿ ರುವ ಕಂಪೆನಿಯನ್ನು ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಸ್ಥಳೀಯರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಹೊಳೆಯ ನೀರು ಶುದ್ಧೀಕರಿಸಲು ಕ್ರಮ ತೆಗೆದುಕೊಂಡಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಂಡು ಹೋಗಿದ್ದು, ಆ ಬಗ್ಗೆ ಅವರು ವರದಿ ನೀಡಬೇಕಾಗಿದೆ ಎಂದರು.
ಶಾಸಕ ಸೊರಕೆ ಮಾತನಾಡಿ, ಹೊಳೆಯ ನೀರು ಕಲುಷಿತಕ್ಕೆ ಕಾರಣವಾಗಿ ರುವ ಕಂಪೆನಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಪರಿಸರ, ಕೈಗಾರಿಕೆ, ಸಣ್ಣ ನೀರಾವರಿ ಇಲಾಖೆಯ ತಜ್ಞರ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೆ ಇಲಾಖಾ ತನಿಖೆಯನ್ನು ಕೂಡ ಮಾಡಲಾಗಿದ್ದು, ಪರಿಸರ ಇಲಾಖೆಯವರು ಇಂದು ಆ ವರದಿಯನ್ನು ಸಲ್ಲಿಸುವುದಾಗಿ ಹೇಳಿ ದ್ದಾರೆ. ಅದರಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರ ವಸೆ ನೀಡಿದರು.
ಗ್ರಾಪಂ ಬಾಕಿ ಹಣ ನೀಡಿ: ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ಸಿಆರ್ಝೆಡ್ ವ್ಯಾಪ್ತಿಯಲ್ಲಿ ಸರಕಾರ 171 ದಿಬ್ಬಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಿದ್ದು, ಇದರಿಂದ ಸಂಗ್ರಹವಾಗುವ ರಾಜಧನದಲ್ಲಿ ಶೇ.25ರಷ್ಟು ಸ್ಥಳೀಯ ಗ್ರಾಪಂಗಳಿಗೆ ನೀಡಬೇಕೆಂದು ಸರಕಾರ ಆದೇಶ ನೀಡಿತ್ತು. ಆದರೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯವರು ಸ್ಥಳೀಯ ಗ್ರಾಪಂಗಳಿಗೆ ಹಣ ನೀಡದೆ ಬಾಕಿ ಇರಿಸಿಕೊಂಡಿದೆ. ಹಾರಾಡಿ ಗ್ರಾಪಂಗೆ 71ಲಕ್ಷ ರೂ., ಹಂದಾಡಿ ಗ್ರಾಪಂಗೆ 5.25 ಲಕ್ಷ ರೂ. ಸೇರಿದಂತೆ ಹಲವು ಗ್ರಾಪಂಗಳಿಗೆ ಹಣ ನೀಡಲು ಬಾಕಿ ಇದೆ. ಆದುದರಿಂದ ಗ್ರಾಪಂಗಳಿಗೆ ನೀಡಬೇಕಾದ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಉತ್ತರಿಸಬೇಕಾದ ಗಣಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಮುಂದಿನ ಸಭೆಗೆ ಅವರನ್ನು ಕರೆಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿ ದರು. ಮರಳಿನ ಸಮಸ್ಯೆಯಿಂದಾಗಿ ಗಾರೆ ಕೆಲಸಗಾರರು ತೊಂದರೆ ಅನು ಭವಿಸುತ್ತಿದ್ದಾರೆ. ರಾತ್ರಿ ಹೊತ್ತು ಅಕ್ರಮವಾಗಿ ಮರಳು ಸಾಗಾಟ ದಂಧೆ ನಡೆ ಯುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ದುಬಾರಿ ಮರಳಿ ನಿಂದ ಬಸವ ವಸತಿ ಯೋಜನೆಯ ಮನೆಗಳು ಅರ್ಧಕ್ಕೆ ನಿಂತಿದೆ ಎಂದು ಭುಜಂಗ ಶೆಟ್ಟಿ ದೂರಿದರು.
ಇದಕ್ಕೆ ಉತ್ತರಿಸಿದ ಶಾಸಕ ವಿನಯ ಕುಮಾರ್ ಸೊರಕೆ, ಸಿಆರ್ಝೆಡ್ ವ್ಯಾಪ್ತಿಯ ಮರಳುಗಾರಿಕೆ ವಿವಾದವು ಇದೀಗ ಹಸಿರು ಪೀಠದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಏನು ಮಾಡದ ಸ್ಥಿತಿ ನಿರ್ಮಾಣ ವಾಗಿದೆ. ಮರಳುಗಾರಿಕೆ ಕುರಿತ ಸುಪ್ರೀಂ ಕೋರ್ಟ್ ನಿಯಮಾವಳಿಯಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದರು. ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೊಳಿಸಬೇಕು ಎಂದು ಸುಧೀರ್ ಶೆಟ್ಟಿ ಆಗ್ರಹಿಸಿದರು.
ಅನುದಾನ ಒದಗಿಸಿ: ತಾಪಂ ಕಟ್ಟಡ ಉನ್ನತೀಕರಣಕ್ಕೆ ಅನುದಾನ ಒದಗಿಸಬೇಕು. ತಾಪಂಗೆ ಅನುದಾನದ ಕೊರತೆ ಇದ್ದು, ಅದನ್ನು ಹೆಚ್ಚಿಸಬೇಕು. ಸದಸ್ಯರ ಗೌರವಧನವನ್ನು ಏರಿಕೆ ಮಾಡಬೇಕು. ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ವಾಹನವನ್ನು ಒದಗಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ತಾಪಂ ಅಧ್ಯಕ್ಷರು ಶಾಸಕ ಸೊರಕೆ ಅವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೊರಕೆ, ರಮೇಶ್ ಕುಮಾರ್ ವರದಿಯಲ್ಲಿ ಈ ಎಲ್ಲ ವಿಚಾರಗಳು ಇದ್ದು, ಅದನ್ನು ಸರಕಾರ ಹಂತಹಂತವಾಗಿ ಜಾರಿಗೆ ತರ ಲಿದೆ. ಈ ಸಂಬಂಧ ಲಿಖಿತ ರೂಪದಲ್ಲಿ ಮನವಿ ನೀಡಿದರೆ ಸರಕಾರದ ಮಟ್ಟದಲ್ಲಿ ಅದನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಸಿಆರ್ಝೆಡ್ ವ್ಯಾಪ್ತಿಯನ್ನು 50ಮೀಟರ್ಗೆ ಇಳಿಸುವ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಪ್ರಧಾನ ಮಂತ್ರಿಯವರ ಸಹಿ ಆಗಬೇಕಾಗಿರುವುದು ಬಾಕಿ ಇದೆ. ಇದು ಆದರೆ ಸಿಆರ್ಝೆಡ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಕಾನೂನಿನಲ್ಲಿ ರಿಯಾಯಿತಿ ನೀಡಿ: ಕಾಮಗಾರಿಗೆ ಸಂಬಂಧಿಸಿದಂತೆ ಇಂಜಿನಿಯರ್ಗಳು ಮೂರು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡ ಬೇಕೆಂಬ ನಿಯಮದಿಂದ ಗ್ರಾಪಂನ ಬಹುತೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಈ ನಿಯಮದಿಂದ ಉಡುಪಿ ಜಿಲ್ಲೆಗೆ ವಿನಾಯಿತಿ ನೀಡಬೇಕು ಮತ್ತು ಮುಂದಿನ ವರ್ಷದಿಂದ ಈ ನಿಯಮಾವಳಿ ಯನ್ನು ಆರಂಭಿಸಬೇಕು ಎಂದು ಸದಸ್ಯ ದಿನಕರ ಪೂಜಾರಿ ಒತ್ತಾಯಿಸಿದರು.
ತಾಲೂಕಿನಲ್ಲಿ ಒಂದು ವರ್ಷಕ್ಕೆ 4200 ಕಾಮಗಾರಿಗಳು ನಡೆಸಲಾಗುತ್ತವೆ. ನಮ್ಮಲ್ಲಿ ಇಂಜಿನಿಯರ್ ಕೊರತೆ ಇರುವುದರಿಂದ ಓರ್ವ ಇಂಜಿನಿಯರ್ ವ್ಯಾಪ್ತಿಗೆ 8-10 ಗ್ರಾಪಂಗಳು ಬರುತ್ತವೆ ಎಂದು ಅಧಿಕಾರಿ ಉತ್ತರಿಸಿದರು. ಕಾಮಗಾರಿಯಲ್ಲಿ ಪಾರದರ್ಶಕತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ನಿಯಮಾವಳಿಯನ್ನು ರೂಪಿಸುತ್ತದೆ. ಇದರಿಂದ ಜಿಲ್ಲೆಗೆ ತೊಂದರೆಯಾಗುವುದಾದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.
ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯನ್ನು ಇತರರು ಒತ್ತುವರಿ ಮಾಡು ತ್ತಿದ್ದು, ಇದನ್ನು ಕೂಡಲೇ ದಲಿತರಿಗೆ ಹಂಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಧನಂಜಯ್ ಸಭೆಯಲ್ಲಿ ಒತ್ತಾಯಿಸಿದರು. ಕಟಪಾಡಿ ಮಟ್ಟು ಸೇತುವೆಯನ್ನು ಅಗಲೀಕರಣ ಮಾಡಿ ಮಟ್ಟುವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಬೇಕು ಎಂದು ರಾಜೇಶ್ ಮಟ್ಟು ಆಗ್ರಹಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಹಾಜರಿದ್ದರು.